ಜಮ್ಮು-ಕಾಶ್ಮೀರ: ಉರಿ ಸೆಕ್ಟರ್ ನಲ್ಲಿ ಒಳನುಸುಳುವಿಕೆ ಯತ್ನ, ಪಾಕ್ ಉಗ್ರನ ಹತ್ಯೆ!
ಜಮ್ಮು-ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರನೊಬ್ಬನನ್ನು ಹತ್ಯೆ ಮಾಡಿದ್ದು, ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಫೋಸ್ಟ್ ಮಾಡಿದ್ದು, ಮಾರ್ಚ್ 14 ಹಾಗೂ 15 ರ ರಾತ್ರಿ ಭಯೋತ್ಪಾದಕನು ಒಳನುಸುಳುವಿಕೆಗೆ ಯತ್ನಿಸುತ್ತಾನೆ ಎಂಬ, ಜಮ್ಮು ಕಾಶ್ಮೀರ ಪೊಲೀಸರ ನಿಖರ ಮಾಹಿತಿ ಆಧರಿಸಿ, ಕಾರ್ಯಾಚರಣೆ ನಡೆಸಲಾಯಿತು ಎಂದು ತಿಳಿಸಿದೆ.
ಪೊದೆಯಲ್ಲಿ ಅನುಮಾನಾಸ್ಪದ ಚಲನವಲನ ಗಮನಿಸಿದ ಸೈನಿಕರು, ಭಯೋತ್ಪಾದಕನ್ನು ಸೆರೆಹಿಡಿಯಲು ಯತ್ನಿಸಿದರು. ಅಷ್ಟರಲ್ಲಿ ಭಯೋತ್ಪಾದಕ ಗುಂಡು ಹಾರಿಸಲು ಯತ್ನಿಸಿದ್ದಾನೆ. ಕೆಲಕಾಲ ಗುಂಡಿನಚಕಮಕಿ ನಡೆದಿದೆ.
ಈ ವೇಳೆ ಒಬ್ಬ ಪಾಕಿಸ್ತಾನಿ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಭದ್ರತಾ ಪಡೆಗಳು ಎಕೆ ರೈಫಲ್ಸ್ ಪಿಸ್ತೂಲ್ ಗಳು, ಹಾಗೂ ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿವೆ. ಆ ಸ್ಥಳದಲ್ಲೇ ಸುತ್ತಮುತ್ತ ಇರಬಹುದಾದ ಭಯೋತ್ಪಾದಕರ ಹುಡುಕಾಟದ ಮಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ

