

ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಿ (NDA) ಜೊತೆ ಮೈತ್ರಿ ಮಾಡುವ ಸಾಧ್ಯತೆಗಳ ಕುರಿತ ವದಂತಿಗಳನ್ನು ತಳ್ಳಿಹಾಕಿದ ಪಕ್ಷದ ಅಧ್ಯಕ್ಷ ವಿಜಯ್, ತಮ್ಮ ಪಕ್ಷದ ಧರ್ಮನಿರಪೇಕ್ಷ ಸಾಮಾಜಿಕ ನ್ಯಾಯ ಸಿದ್ಧಾಂತಗಳಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಚೆನ್ನೈಗೆ ದಕ್ಷಿಣಕ್ಕೆ ಸುಮಾರು 60 ಕಿಮೀ ದೂರದಲ್ಲಿರುವ ಮಾಮಲ್ಲಾಪುರಂನಲ್ಲಿ ನಡೆದ ಪಕ್ಷದ ಇಫ್ತಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ದಳಪತಿ ವಿಜಯ್ , ರಾಜಕೀಯಕ್ಕೆ ಪ್ರವೇಶಿಸಿದ ಮೊದಲ ದಿನದಿಂದಲೇ ತಮ್ಮ ಪಕ್ಷವನ್ನು ಬೇರೆ ಪಕ್ಷಗಳ ಪರೋಕ್ಷ ಅಂಗವೆಂದು ಹಲವಾರು ವದಂತಿಗಳು ಹರಡಲ್ಪಟ್ಟಿವೆ ಎಂದು ಹೇಳಿದರು. ನಾವು ಈ ತಂಡದವರು, ಆ ತಂಡದವರು ಎಂಬಂತೆ ವದಂತಿಗಳು ಹರಡುತ್ತಿವೆ. ಆದರೆ ನಾವು ಯಾವುದೇ ತಂಡಕ್ಕೆ ಸೇರಿದವರಲ್ಲ; ನಾವು ಜನರ ತಂಡಕ್ಕೆ ಮಾತ್ರ ಸೇರಿದವರು ಎಂದರು.
ನಮ್ಮ ವಿರುದ್ಧ ಬೇರೆ ರೀತಿಯ ಅಪಪ್ರಚಾರಗಳನ್ನು ನಡೆಸಲು ಪ್ರಯತ್ನಿಸಿದರು, ಆದರೆ ಅವು ಯಾವುದೂ ಯಶಸ್ವಿಯಾಗಲಿಲ್ಲ. ಕೊನೆಯಲ್ಲಿ ನಾವು ಮೈತ್ರಿಗೆ ಸೇರುತ್ತಿದ್ದೇವೆ ಎಂಬ ಸುಳ್ಳು ಪ್ರಚಾರ ಆರಂಭಿಸಿದರು. ಇಂತಹ ಸುದ್ದಿಗಳನ್ನು ಕೇಳಿ ನೀವು ಗೊಂದಲಕ್ಕೊಳಗಾಗಬಹುದು. ಮತ್ತೆ ಸ್ಪಷ್ಟಪಡಿಸುತ್ತೇನೆ, ನಾವು ಸದಾ ಧರ್ಮನಿರಪೇಕ್ಷ ಸಾಮಾಜಿಕ ನ್ಯಾಯದ ಸಿದ್ಧಾಂತಗಳನ್ನು ಯಾವುದೇ ರಾಜಿಯಿಲ್ಲದೆ ಅನುಸರಿಸುತ್ತೇವೆ ಎಂದರು.
ಅಧಿಕಾರಕ್ಕೆ ಬಂದರೆ ತಮ್ಮ ಪಕ್ಷವೇ ಸರ್ಕಾರವನ್ನು ಮುನ್ನಡೆಸುತ್ತದೆ. ಪಕ್ಷದ ಮೊದಲ ರಾಜ್ಯ ಸಮ್ಮೇಳನದಲ್ಲೇ ನಾನು ಹೇಳಿದಂತೆ, ನಮ್ಮ ರಾಜಕೀಯದಲ್ಲಿ ಯಾವುದೇ ರಾಜಿಗೆ ಅವಕಾಶವಿಲ್ಲ. ಸುಳ್ಳು ಪ್ರಚಾರವನ್ನು ನಂಬಬೇಡಿ. ದೇವರ ಆಶೀರ್ವಾದದಿಂದ ನಾವು ನಮ್ಮ ಗುರಿಯನ್ನು ಸಾಧಿಸುತ್ತೇವೆ ಎಂದರು.
Advertisement