

ಸೀತಾಪುರ: ಉತ್ತರ ಪ್ರದೇಶದ ಸೀತಾಪುರದಲ್ಲಿ 12 ವರ್ಷಗಳ ಹಿಂದೆ ಸರ್ಕಾರಿ ಭೂಮಿ(ಕೆರೆ ಜಾಗ)ಯಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಮಸೀದಿಯನ್ನು ಸೋಮವಾರ ಬೆಳಗ್ಗೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ನೆಲಸಮಗೊಳಿಸಿದ್ದಾರೆ.
ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಜಿಲ್ಲೆಯ ಲೆಹರ್ಪುರ ಪ್ರದೇಶದಲ್ಲಿರುವ ಸ್ಥಳಕ್ಕೆ ತೆರಳಿ, ಬಿಗಿ ಭದ್ರತೆಯ ನಡುವೆ ಮಸೀದಿ ನೆಲಸಮ ಕಾರ್ಯವನ್ನು ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಆಡಳಿತದ ಪ್ರಕಾರ, ನೈಗಾಂವ್ ಬೆಹತಿ ಗ್ರಾಮದಲ್ಲಿನ ಮಸೀದಿಯನ್ನು, ಕೆರೆ ಎಂದು ಗೊತ್ತುಪಡಿಸಿದ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿತ್ತು.
ಈ ಸಂಬಂಧ ಗ್ರಾಮಸಭೆಯು ದೂರು ಸಲ್ಲಿಸಿದ ನಂತರ ತಹಸಿಲ್ ನ್ಯಾಯಾಲಯದ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಕಾರ್ಯಾಚರಣೆಯ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಿರಿಯ ಅಧಿಕಾರಿಗಳು ಸೇರಿದಂತೆ ಸುಮಾರು 500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಈ ಮಸೀದಿಯ ವಿವಾದವು ದೀರ್ಘಕಾಲದಿಂದ ಬಾಕಿ ಇತ್ತು. ಮಸೀದಿಯು ಕೆರೆ ಮತ್ತು ಸ್ಮಶಾನಕ್ಕಾಗಿ ಮೀಸಲಾದ ಭೂಮಿಯಲ್ಲಿ ನಿರ್ಮಿಸಲಾಗಿತ್ತು ಎಂದು ಗ್ರಾಮ ಸಭೆ ಆರೋಪಿಸಿದೆ.
ಈ ಸಂಬಂಧ ಡಿಸೆಂಬರ್ 18, 2025 ರಂದು ಪ್ರಕರಣ ದಾಖಲಿಸಲಾಗಿತ್ತು.
ಜನವರಿ 6, 2026 ರಂದು, ನ್ಯಾಯಾಲಯವು ಮಸೀದಿ ನಿರ್ಮಾಣವನ್ನು ಕಾನೂನುಬಾಹಿರವೆಂದು ಘೋಷಿಸಿ, ತೆರವು ಮಾಡಲು ಆದೇಶಿಸಿತು. ನಿಗದಿತ ಅವಧಿಯೊಳಗೆ ಆವರಣವನ್ನು ಖಾಲಿ ಮಾಡಲು ಮತ್ತು ಅಗತ್ಯ ವಸ್ತುಗಳನ್ನು ತೆಗೆದುಹಾಕಲು ಸಂಬಂಧಪಟ್ಟವರಿಗೆ ನೋಟಿಸ್ ನೀಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡುವು ಮುಗಿದ ನಂತರ, ಜಿಲ್ಲಾಡಳಿತವು ಮಸೀದಿ ಕೆಡವಲು ಮುಂದಾಯಿತು ಎಂದು ಅವರು ಹೇಳಿದ್ದಾರೆ.
Advertisement