

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ವಿದೇಶಿ ಛಾಯಾಗ್ರಾಹಕರೊಬ್ಬರು ನಡೆಸಿದ ಸೃಜನಾತ್ಮಕ ಫೋಟೋಶೂಟ್ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ನಂತರ ತೀವ್ರ ವಿವಾದಕ್ಕೆ ಕಾರಣವಾಗಿದೆ.
ರಷ್ಯಾದ ಪ್ರವಾಸಿ ಛಾಯಾಗ್ರಾಹಕಿ ಜೂಲಿಯಾ ಬುರುಲೆವಾ ಅವರು ರಾಜಸ್ಥಾನದ ಜೈಪುರದಲ್ಲಿ ಆನೆಗೆ ಗುಲಾಬಿ ಬಣ್ಣ ಬಳಿದು, ಅದರ ಮೇಲೆ ಕುಳಿತ ಮಾಡೆಲ್ಗೂ ಗುಲಾಬಿ ಬಣ್ಣ ಹಚ್ಚಿ ಫೋಟೊ ಶೂಟ್ ಮಾಡಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುರುಲೆವಾ ಅವರು ಭಾರತದ ವಾಸ್ತುಶಿಲ್ಪ, ಬಣ್ಣಗಳು ಮತ್ತು ಸಾಂಸ್ಕೃತಿಕ ಗುರುತನ್ನು ಪ್ರತಿಬಿಂಬಿಸಲು ನೈಜ ಆನೆಗೆ ಬಣ್ಣ ಬಳಿದಿದ್ದಾಗಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾಳೆ. ಆಕೆ ಆನೆ ಮತ್ತು ಒಬ್ಬ ಮಾಡೆಲ್ಗೆ ಪೂರ್ತಿ ಗುಲಾಬಿ ಬಣ್ಣ ಹಚ್ಚಿ ಫೋಟೊಶೂಟ್ ಮಾಡಿಸಿದ್ದಾಳೆ. ಆನೆಗೆ ಗುಲಾಬಿ ಬಣ್ಣ ಬಳಸಿ ಮಾಡೆಲ್ ಅನ್ನು ಆನೆಯ ಮೇಲೆ ಕುಳ್ಳಿರಿಸಿ ಫೋಟೊಶೂಟ್ ಮಾಡಿಸಿದ್ದಾರೆ.
ಮುಗ್ಧ ಪ್ರಾಣಿಗೆ ಹಿಂಸೆ ನೀಡಿದ್ದಕ್ಕಾಗಿ ಪ್ರಾಣಿ ಹಕ್ಕುಗಳ ಹೋರಾಟಗಾರರು ಮತ್ತು ಸ್ಥಳೀಯರು ಈ ಫೋಟೋಶೂಟ್ ಅನ್ನು ಟೀಕಿಸಿದ್ದಾರೆ. ಇದು ಪ್ರಾಣಿಗಳ ಶೋಷಣೆ ಎಂದು ಆರೋಪಿಸಿದ್ದಾರೆ.
ಇದರ ಬೆನ್ನಲ್ಲೇ ಜೂಲಿಯಾ ತನ್ನನ್ನು ಸಮರ್ಥಿಸಿಕೊಂಡಿದ್ದಾಳೆ. ಇದಕ್ಕೆ ಸಾವಯವ ಬಣ್ಣ ಮಾತ್ರ ಬಳಸಲಾಗಿದೆ ಎಂದು ಸ್ಪಷ್ಟಪಡಿಸಿದ್ದು ಚಿತ್ರೀಕರಣದ ಸಮಯದಲ್ಲಿ ಪ್ರಾಣಿಗೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿಕೊಂಡಿದ್ದಾಳೆ.
ಆನೆಯ ಮಾಲೀಕ ಶಾದಿಕ್ ಖಾನ್ ಮಾತನಾಡಿ, ಚಂಚಲ್ ಆನೆಗೆ 65 ವರ್ಷ ವಯಸ್ಸಾಗಿದ್ದು, ಈಗ ಸವಾರಿಗೆ ಬಳಸುತ್ತಿಲ್ಲ. 10 ನಿಮಿಷಗಳ ಸಂಕ್ಷಿಪ್ತ ಚಿತ್ರೀಕರಣದ ಸಮಯದಲ್ಲಿ ಕಚ್ಚಾ ಗುಲಾಲ್ ಅನ್ನು ಮಾತ್ರ ಬಳಸಲಾಗಿದ್ದು, ತಕ್ಷಣವೇ ತೊಳೆಯಲಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಅಧಿಕಾರಿಗಳು, ಇದಕ್ಕೆ ಅನುಮತಿ ಪಡೆಯಲಾಗಿದೆಯೇ ಮತ್ತು ಪ್ರಾಣಿ ಕಲ್ಯಾಣ ನಿಯಮಗಳನ್ನು ಪಾಲಿಸಲಾಗಿದೆಯೇ ಎಂದು ಪರಿಶೀಲಿಸುತ್ತಾರೆ. ಪ್ರಾಣಿಗಳ ದುರುಪಯೋಗವನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೋರಾಟಗಾರರು ಒತ್ತಾಯಿಸಿದ್ದಾರೆ.
Advertisement