

ನವದೆಹಲಿ: ಕರ್ನಾಟಕದ ಸೂರ್ಯಕಾಂತಿ ಬೆಳೆಗಾರರ ಬೆಂಬಲಕ್ಕೆ ನಿಂತ ಬೆನ್ನಲ್ಲೇ ಕೇಂದ್ರ ಸರ್ಕಾರ ಇದೀಗ ಕಬ್ಬು ಬೆಳೆಗಾರರಿಗೂ ಬೆಂಬಲ ಬೆಲೆ ಹೆಚ್ಚಿಸಿ ನೆರವಿಗೆ ಬಂದಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ 2026-27ನೇ ಹಂಗಾಮಿಗೆ ಕಬ್ಬಿಗೆ ಶೇ.10.25 ಮೂಲ ರಿಕವರಿ ದರದ ಮೇಲೆ ಪ್ರತಿ ಕ್ವಿಂಟಲ್ ಗೆ ₹365 ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆಯನ್ನು (FRP) ಅನುಮೋದಿಸಿದೆ. ಇದರಿಂದ ಕರ್ನಾಟಕದ ಸರಿ ಸುಮಾರು 8 ರಿಂದ 10 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ ಎಂದಿದ್ದಾರೆ.
ರಿಕವರಿ ಕಡಿಮೆ ಇದ್ರೂ ಬೆಂಬಲ ಬೆಲೆ: ಕಬ್ಬಿನ ರಿಕವರಿಯಲ್ಲಿ 0.1% ಏರಿಕೆಗೆ ₹3.56 ಪ್ರತಿ ಕ್ವಿಂಟಲ್ ಹೆಚ್ಚುವರಿ ಪ್ರೋತ್ಸಾಹಧನ ನೀಡುವುದರ ಜತೆಗೆ ರಿಕವರಿ 9.5% ಅಥವಾ ಅದಕ್ಕಿಂತ ಕಡಿಮೆ ಇದ್ದರೂ ಯಾವುದೇ ಕಡಿತವಿಲ್ಲದೆ ಪ್ರತಿ ಕ್ವಿಂಟಲ್ ಗೆ ₹338.3 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರದಿಂದ ದೇಶದ ಸುಮಾರು 5 ಕೋಟಿ ಕಬ್ಬು ಬೆಳೆಗಾರರು ಮತ್ತವರ ಕುಟುಂಬಗಳಿಗೆ ನೆರವಾಗಲಿದೆ. ಅದರಂತೆ ಕರ್ನಾಟಕದಲ್ಲೂ ಸುಮಾರು ಎಂಟ್ಹತ್ತು ಲಕ್ಷ ರೈತರು ಈ FRP ದರದ ಲಾಭ ಪಡೆಯಲಿದ್ದಾರೆ ಎಂದಿದ್ದಾರೆ.
ಕೇಂದ್ರದ ಈ ನಿರ್ಣಯ ಕಬ್ಬು ಬೆಳೆಗಾರರು ಮಾತ್ರವಲ್ಲದೆ, ಸಕ್ಕರೆ ಕಾರ್ಖಾನೆಗಳು ಹಾಗೂ ಸಕ್ಕರೆ ಉದ್ಯಮದ 5 ಲಕ್ಷಕ್ಕೂ ಅಧಿಕ ಕಾರ್ಮಿಕರಿಗೂ ನೆರವಾಗಲಿದೆ. ಕಬ್ಬಿನ FRP ಹೆಚ್ಚಳ ಮೂಲಕ ಸಮಸ್ತ ಸಕ್ಕರೆ ಉದ್ಯಮ ಮತ್ತು ಕೃಷಿ ಕ್ಷೇತ್ರವನ್ನು ಮತ್ತಷ್ಟು ಸಶಕ್ತಗೊಳಿಸುವಲ್ಲಿ ಪ್ರಧಾನಿ ಮೋದಿ ಬದ್ಧತೆ ತೋರಿದ್ದಾರೆಂದು ಸಚಿವ ಜೋಶಿ ಪ್ರತಿಪಾದಿಸಿದ್ದಾರೆ.
ರಾಜ್ಯದ ಬೆಳಗಾವಿ, ಬಾಗಲಕೋಟೆ, ಮಂಡ್ಯ, ಮೈಸೂರು, ವಿಜಯಪುರ ಮತ್ತು ಬಳ್ಳಾರಿ, ದಾವಣಗೆರೆ, ಬೀದರ್ ಹೀಗೆ ವಿವಿಧ ಜಿಲ್ಲೆಗಳು ಕಬ್ಬು ಬೆಳೆಯುವಲ್ಲಿ ಮುಂಚೂಣಿಯಲ್ಲಿದ್ದು, ದೇಶದ ಒಟ್ಟು ಸಕ್ಕರೆ ಉತ್ಪಾದನೆಯ ಶೇ.16 ರಷ್ಟು ಕರ್ನಾಟಕದ ಪಾಲಿದೆ. ಹೀಗಾಗಿ ಈ FRP ಹೆಚ್ಚಳವು ರಾಜ್ಯದ ಪಾಲಿಗೂ ಅನನ್ಯ ಕೊಡುಗೆಯಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
Advertisement