

ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ, ದೆಹಲಿಯ ಐತಿಹಾಸಿಕ ದೇವಾಲಯ, ದೆಹಲಿ-ಸೋನಿಪತ್ ಹೆದ್ದಾರಿಯಲ್ಲಿರುವ ಜನಪ್ರಿಯ ಧಾಬಾ ಮತ್ತು ಹರಿಯಾಣದ ಮಿಲಿಟರಿ ಶಿಬಿರದ ಮೇಲೆ ದಾಳಿ ನಡೆಸಲು ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
'ಗ್ಯಾಂಗ್ ಬಸ್ಟ್ ಆಪರೇಷನ್ 2.0' ಅಡಿಯಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕ ಹಲವಾರು ರಾಜ್ಯಗಳಿಂದ ಬಂಧಿಸಿರುವ ಮಾಡ್ಯೂಲ್ನ 9 ಆರೋಪಿಗಳ ವಿಚಾರಣೆಯ ಸಮಯದಲ್ಲಿ ಈ ಮಾಹಿತಿ ಬಹಿರಂಗವಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಗುರುವಾರ, ಪಾಕಿಸ್ತಾನ ಐಎಸ್ಐ ಬೆಂಬಲಿತ ಶಹಜಾದ್ ಭಟ್ಟಿ ಮಾಡ್ಯೂಲ್ಗೆ ಸಂಬಂಧಿಸಿದ ಒಂಬತ್ತು ಆರೋಪಿಗಳನ್ನು ಹಲವಾರು ರಾಜ್ಯಗಳಿಂದ ಬಂಧಿಸಲಾಗಿತ್ತು. ಅವರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ಬಾಯ್ಬಿಟ್ಟಿರುವ ಮಾಹಿತಿಯ ಪ್ರಕಾರ, ದೇವಾಲಯ, ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಲಾಗಿದೆ. ತನಿಖೆಯ ಪ್ರಕಾರ, ದೆಹಲಿಯ ಐತಿಹಾಸಿಕ ದೇವಾಲಯ ಪ್ರಾಥಮಿಕ ಗುರಿಗಳಲ್ಲಿ ಒಂದಾಗಿದೆ. ದೇವಾಲಯದಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿಯೂ ಸಹ ಕಣ್ಗಾವಲಿನಲ್ಲಿದ್ದರು. ಐಎಸ್ಐ ಮಾಡ್ಯೂಲ್ಗೆ ಸಂಬಂಧಿಸಿದ ಆರೋಪಿಗಳಲ್ಲಿ ಒಬ್ಬರು ದೇವಾಲಯದ ವಿಚಕ್ಷಣೆ ನಡೆಸಿದ್ದರು ಮತ್ತು ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮ ನಿರ್ವಾಹಕರಿಗೆ ಛಾಯಾಚಿತ್ರಗಳನ್ನು ಕಳುಹಿಸಿದ್ದರು.
ದೇವಾಲಯವನ್ನು ಗುರಿಯಾಗಿಸಿಕೊಂಡು ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಅರೆಸೈನಿಕ ಪಡೆಗಳ ಮೇಲೆ ಗುಂಡು ಹಾರಿಸುವುದು ಈ ಯೋಜನೆಯ ಭಾಗವಾಗಿತ್ತು ಎಂದು ಆರೋಪಿಸಲಾಗಿದೆ. ದೇವಾಲಯದ ಜೊತೆಗೆ, ಆರೋಪಿಗಳು ದೆಹಲಿಯ ಇತರ ಎರಡು ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಲು ಯೋಜಿಸಿದ್ದರು ಎಂದು ಆರೋಪಿಸಲಾಗಿದೆ.
ದೆಹಲಿ-ಸೋನಿಪತ್ ಹೆದ್ದಾರಿಯಲ್ಲಿರುವ ಜನಪ್ರಿಯ ಡಾಬಾ ಕೂಡ ಗುರಿಯಾಗಿತ್ತು. ಇಲ್ಲಿ ಪ್ರತಿದಿನ ಜನಸಂದಣಿ ಹೆಚ್ಚಾಗಿರುವ ಕಾರಣ, ದಾಳಿಕೋರರು ಹ್ಯಾಂಡ್ ಗ್ರೆನೇಡ್ಗಳನ್ನು ಬಳಸಿ ಉಪಾಹಾರ ಗೃಹದಲ್ಲಿ ದೊಡ್ಡ ಪ್ರಮಾಣದ ಹಾನಿಯನ್ನುಂಟುಮಾಡಲು ಯೋಜಿಸಿದ್ದರು ಎಂದು ಆರೋಪಿಸಲಾಗಿದೆ.
ಉತ್ತರ ಪ್ರದೇಶದ ಕೆಲವು ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಲು ಸಹ ಮಾಡ್ಯೂಲ್ ಪರಿಗಣಿಸಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ರಾಡಾರ್ನಲ್ಲಿತ್ತು ಹರಿಯಾಣದ ಮಿಲಿಟರಿ ಶಿಬಿರ
ಹರಿಯಾಣದ ಹಿಸಾರ್ನಲ್ಲಿರುವ ಮಿಲಿಟರಿ ಶಿಬಿರವನ್ನೂ ಗುರಿಯಾಗಿಸಲಾಗಿತ್ತು. ಶಿಬಿರದ ವೀಡಿಯೊಗಳನ್ನು ಪಾಕಿಸ್ತಾನದ ನಿರ್ವಾಹಕರಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಏಪ್ರಿಲ್ನ ಆರಂಭದಲ್ಲಿ, ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ನಿವಾಸಿಗಳಾದ 21 ವರ್ಷದ ರಾಜ್ವೀರ್ ಮತ್ತು 19 ವರ್ಷದ ವಿವೇಕ್ ಬಂಜಾರ ಎಂಬ ಇಬ್ಬರು ವ್ಯಕ್ತಿಗಳನ್ನು ಪಾಕಿಸ್ತಾನ ಮೂಲದ ದರೋಡೆಕೋರ ಮತ್ತು ಐಎಸ್ಐ ಪ್ರಾಕ್ಸಿ ಶೆಹಜಾದ್ ಭಟ್ಟಿ ಅವರ ಆದೇಶದ ಮೇರೆಗೆ ಕೆಲಸ ಮಾಡಿದ್ದಕ್ಕಾಗಿ ಬಂಧಿಸಲಾಗಿತ್ತು.
ಭಟ್ಟಿ ಮತ್ತು ಅವರ ಸಹಚರರು ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಪ್ರಮುಖ ಅಪರಾಧ ಕೃತ್ಯಗಳನ್ನು ನಡೆಸಲು ಯೋಜಿಸುತ್ತಿದ್ದಾರೆ ಎಂದು ಸೂಚಿಸುವ ಗುಪ್ತಚರ ಮಾಹಿತಿಗಳನ್ನು ವಿಶೇಷ ಘಟಕಕ್ಕೆ ಕಳುಹಿಸಲಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ, ಮಾರ್ಚ್ 31 ರಂದು ಪ್ರಕರಣ ದಾಖಲಿಸಲಾಯಿತು ಮತ್ತು ತನಿಖೆಯನ್ನು ಪ್ರಾರಂಭಿಸಲಾಯಿತು.
Advertisement