ಚಿನ್ನಾಭರಣ ಖರೀದಿಸದಂತೆ ಮೋದಿ ಮನವಿ, ಪ್ರಧಾನಿ ಮಾತಿನ ಹಿಂದಿನ ಅರ್ಥವೇನು? ಇಲ್ಲಿದೆ ಉತ್ತರ

ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸಲು ನಾಗರಿಕರಿಗೆ ಚಿನ್ನಾಭರಣ ಖರೀದಿ ಮಾಡದಂತೆ ಮನವಿ ಮಾಡಿದ ಬಳಿಕ ಆಭರಣ ವಲಯದ ಷೇರುಗಳು ತೀವ್ರ ಮಾರಾಟದ ಒತ್ತಡಕ್ಕೆ ಒಳಗಾಗಿ..
Why PM Modi asked Indians to avoid buying gold for a year
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಿನ್ನೆ ಕಾರ್ಯಕ್ರಮವೊಂದರಲ್ಲಿ ಒಂದು ವರ್ಷದವರೆಗೆ ಚಿನ್ನವನ್ನು ಖರೀದಿಸದಂತೆ ನಾಗರಿಕರಲ್ಲಿ ಮನವಿ ಮಾಡಿದ್ದರು. ಅವರ ಈ ಮನವಿ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಪ್ರಧಾನಿ ಮೋದಿ ಮನವಿ ಹಿಂದಿನ ಕಾರಣವೇನು..? ಎಂದು ಹಲವರು ಪ್ರಶ್ನಿಸುತ್ತಿದ್ದು ಅವರ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಹೌದು.. ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸಲು ನಾಗರಿಕರಿಗೆ ಚಿನ್ನಾಭರಣ ಖರೀದಿ ಮಾಡದಂತೆ ಮನವಿ ಮಾಡಿದ ಬಳಿಕ ಆಭರಣ ವಲಯದ ಷೇರುಗಳು ತೀವ್ರ ಮಾರಾಟದ ಒತ್ತಡಕ್ಕೆ ಒಳಗಾಗಿ ಭಾರಿ ಪ್ರಮಾಣದಲ್ಲಿ ಮೌಲ ಕಳೆದುಕೊಂಡವು.

ಭಾನುವಾರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, 'ಅನಗತ್ಯ ವಿದೇಶ ಪ್ರವಾಸ, ವಿದೇಶಗಳಲ್ಲಿ ನಡೆಯುವ ಮದುವೆಗಳು ಮತ್ತು ಪ್ರವಾಸಗಳನ್ನು ತಪ್ಪಿಸುವಂತೆ ಮನವಿ ಮಾಡಿದರು. ಅಲ್ಲದೆ ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವಂತೆ ಅವರು ಕರೆ ನೀಡಿದರು.

ಇದಲ್ಲದೆ, ವಿದೇಶಿ ವಿನಿಮಯ ಹೊರಹರಿವಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಒಂದು ವರ್ಷದವರೆಗೆ ಅನಗತ್ಯ ಚಿನ್ನದ ಖರೀದಿಯನ್ನು ತಪ್ಪಿಸುವಂತೆ ಜನರನ್ನು ಅವರು ವಿನಂತಿಸಿದ್ದರು.

ಅವರ ಮಾತಿನ ಹಿಂದಿನ ಅರ್ಥ ಆರ್ಥಿಕ ದೇಶಭಕ್ತಿ.. ಭಾರತದ ವಿದೇಶಿ ವಿನಿಮಯ ಮೀಸಲನ್ನು (Forex Reserves) ಉಳಿಸುವುದು. ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯನ್ನು ಬಲಪಡಿಸಲು ಅವರು ಈ "ಆರ್ಥಿಕ ದೇಶಭಕ್ತಿ"ಯ ಕರೆ ನೀಡಿದ್ದಾರೆ ಎನ್ನಲಾಗಿದೆ.

Why PM Modi asked Indians to avoid buying gold for a year
'ಇನ್ನೊಂದ್ ವರ್ಷ ಖರೀದಿ ಮಾಡ್ಬೇಡಿ..'.: ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಪಾತಾಳಕ್ಕೆ ಕುಸಿದ ಚಿನ್ನಾಭರಣ ಷೇರು

ಈ ಮನವಿಯ ಹಿಂದಿನ ಪ್ರಮುಖ ಕಾರಣಗಳು ಇಲ್ಲಿವೆ

ವಿದೇಶಿ ವಿನಿಮಯ ಉಳಿತಾಯ

ಭಾರತವು ವಿಶ್ವದ ಅತಿದೊಡ್ಡ ಚಿನ್ನದ ಆಮದುದಾರರಲ್ಲಿ ಒಂದಾಗಿದೆ. ಚಿನ್ನವನ್ನು ವಿದೇಶಿ ಕರೆನ್ಸಿ ಪಾವತಿಸಿ ಖರೀದಿಸಬೇಕಾಗುತ್ತದೆ. ಯುಎಸ್-ಇರಾನ್ ಸಂಘರ್ಷದಿಂದಾಗಿ ತೈಲ ಮತ್ತು ಅನಿಲದ ಬೆಲೆಗಳು ಏರಿರುವುದರಿಂದ, ಆ ಅಗತ್ಯ ವಸ್ತುಗಳ ಆಮದಿಗೆ ಹಣವನ್ನು ಉಳಿಸಲು ಚಿನ್ನದ ಮೇಲಿನ ವೆಚ್ಚವನ್ನು ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಅಂತೆಯೇ ಮದುವೆ ಮತ್ತು ಸಮಾರಂಭಗಳಿಗಾಗಿ ಚಿನ್ನದ ಖರೀದಿಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವುದರಿಂದ, ಜಾಗತಿಕ ಪೂರೈಕೆ ಸರಪಳಿ ವ್ಯತ್ಯಯ ಮತ್ತು ಕರೆನ್ಸಿ ಏರಿಳಿತದ ಸಮಯದಲ್ಲಿ ದೇಶದ ಆರ್ಥಿಕತೆಯನ್ನು ರಕ್ಷಿಸಬಹುದು ಎಂದು ಒಂದು ವಾದವಾಗಿದೆ.

ರಾಷ್ಟ್ರೀಯ ಹಿತಾಸಕ್ತಿ

ಚಿನ್ನದ ಬದಲಿಗೆ ಆ ಹಣವನ್ನು ಉತ್ಪಾದಕ ದೇಶೀಯ ಹೂಡಿಕೆಗಳಲ್ಲಿ ಬಳಸುವುದರಿಂದ ರಾಷ್ಟ್ರದ ಅಭಿವೃದ್ಧಿಗೆ ಹೆಚ್ಚಿನ ಬೆಂಬಲ ಸಿಗುತ್ತದೆ. ಮತ್ತು ಚಿನ್ನದ ಜೊತೆಗೆ, ವಿದೇಶಿ ಪ್ರವಾಸಗಳನ್ನು ಮುಂದೂಡುವುದು ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆಯೂ ಪ್ರಧಾನಿ ಮೋದಿ ಅವರು ಜನರಲ್ಲಿ ವಿನಂತಿಸಿದ್ದಾರೆ.

ಪ್ರಸ್ತುತ ಚಿನ್ನದ ಮೇಲೆ ಇರುವ ನಿಯಮಗಳು ಮತ್ತು ಆರ್ಥಿಕ ಕ್ರಮಗಳ ವಿವರ

1. ವಿದೇಶದಿಂದ ಚಿನ್ನ ತರುವ ನಿಯಮಗಳು

ಫೆಬ್ರವರಿ 2026 ರಿಂದ ಜಾರಿಗೆ ಬಂದಿರುವ ಹೊಸ ನಿಯಮಗಳ ಪ್ರಕಾರ, ವಿದೇಶದಿಂದ ಚಿನ್ನಾಭರಣಗಳನ್ನು ತರುವಾಗ ಬೆಲೆಯ ಮಿತಿಯನ್ನು ತೆಗೆದುಹಾಕಲಾಗಿದ್ದು, ಕೇವಲ ತೂಕದ ಮಿತಿಯನ್ನು ಮಾತ್ರ ಅನ್ವಯಿಸಲಾಗುತ್ತದೆ. ಮಹಿಳೆಯರು 40 ಗ್ರಾಂ ವರೆಗೆ ಚಿನ್ನಾಭರಣಗಳನ್ನು ಯಾವುದೇ ಸುಂಕವಿಲ್ಲದೆ (Duty-free) ತರಬಹುದು. ಅಂತೆಯೇ ಪುರುಷರು 20 ಗ್ರಾಂ ವರೆಗೆ ತೆರಿಗೆ ರಹಿತವಾಗಿ ತರಲು ಅವಕಾಶವಿದೆ. ಈ ಸೌಲಭ್ಯವು ಕನಿಷ್ಠ ಒಂದು ವರ್ಷ ವಿದೇಶದಲ್ಲಿ ನೆಲೆಸಿ ಹಿಂದಿರುಗುವ ಭಾರತೀಯ ನಿವಾಸಿಗಳಿಗೆ ಅಥವಾ ಭಾರತೀಯ ಮೂಲದ ಪ್ರಜೆಗಳಿಗೆ ಮಾತ್ರ ಅನ್ವಯಿಸುತ್ತದೆ.

2. ಚಿನ್ನದ ಆಮದು ಮೇಲಿನ ಹೊಸ ನಿರ್ಬಂಧಗಳು

ಸರ್ಕಾರವು ಏಪ್ರಿಲ್ 2026 ರಿಂದ ಜಾರಿಗೆ ಬರುವಂತೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಆಮದಿನ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಹಲವು ಆಭರಣಗಳನ್ನು "ಮುಕ್ತ" ಆಮದು ಪಟ್ಟಿಯಿಂದ ತೆಗೆದು "ನಿರ್ಬಂಧಿತ" (Restricted) ಪಟ್ಟಿಗೆ ಸೇರಿಸಲಾಗಿದೆ. ಅಂದರೆ, ಇನ್ನು ಮುಂದೆ ಚಿನ್ನಾಭರಣಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರದ ವಿಶೇಷ ಪರವಾನಗಿ (License) ಪಡೆಯುವುದು ಕಡ್ಡಾಯ.

3. ವಿದೇಶಿ ವಿನಿಮಯ ಉಳಿಸಲು ಇತರ ಪ್ರಮುಖ ಕ್ರಮಗಳು

ಪ್ರಧಾನಿಯವರು ಕೇವಲ ಚಿನ್ನ ಮಾತ್ರವಲ್ಲದೆ, ಇನ್ನು ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡುವಂತೆ ಮನವಿ ಮಾಡಿದ್ದಾರೆ. ಈ ಪೈಕಿ ಮನೆಯಿಂದಲೇ ಕೆಲಸ Work From Home (WFH) ಪ್ರಮುಖಾಂಶವಾಗಿದ್ದು, ಇಂಧನ ಬಳಕೆಯನ್ನು ಕಡಿಮೆ ಮಾಡಲು ಐಟಿ ಕಂಪನಿಗಳು ಮತ್ತು ಇತರ ಸಂಸ್ಥೆಗಳು ಸಾಧ್ಯವಾದಷ್ಟು "ಮನೆಯಿಂದಲೇ ಕೆಲಸ" ಮಾಡುವ ಸಂಸ್ಕೃತಿಯನ್ನು ಮತ್ತೆ ಜಾರಿಗೆ ತರುವಂತೆ ಸೂಚಿಸಿದ್ದಾರೆ.

Why PM Modi asked Indians to avoid buying gold for a year
West Asia war ಎಫೆಕ್ಟ್: ಭಾರತೀಯ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 1,000 ಅಂಕ ಕುಸಿತ, ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ

ವಿದೇಶಿ ಪ್ರವಾಸಗಳ ಮುಂದೂಡಿಕೆ ಒಂದು ವರ್ಷದವರೆಗೆ ಅನಗತ್ಯ ವಿದೇಶಿ ಪ್ರವಾಸಗಳು ಮತ್ತು ವಿದೇಶಗಳಲ್ಲಿ ನಡೆಯುವ ಮದುವೆ ಸಮಾರಂಭಗಳನ್ನು (Destination Weddings) ತಪ್ಪಿಸಿ, ದೇಶೀಯ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲು ತಿಳಿಸಿದ್ದಾರೆ.

ಆಹಾರ ತೈಲದ ಬಳಕೆ

ಅಡುಗೆ ಎಣ್ಣೆಯನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದರ ಬಳಕೆಯನ್ನು ಶೇ. 50 ರಷ್ಟು ಕಡಿಮೆ ಮಾಡುವುದರಿಂದ ಆರೋಗ್ಯ ಮತ್ತು ಆರ್ಥಿಕತೆ ಎರಡಕ್ಕೂ ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಾರ್ವಜನಿಕ ಸಾರಿಗೆ ಬಳಕೆ

ವೈಯಕ್ತಿಕ ಕಾರುಗಳ ಬದಲಿಗೆ ಮೆಟ್ರೋ, ಎಲೆಕ್ಟ್ರಿಕ್ ವಾಹನಗಳು (EV) ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸಲು ಉತ್ತೇಜಿಸಿದ್ದಾರೆ. ಈ ಕ್ರಮಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದ ಯುದ್ಧದ ಪರಿಸ್ಥಿತಿಯಿಂದ ಭಾರತದ ರೂಪಾಯಿ ಮೌಲ್ಯವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com