ಜೈಲು ಅನುಭವ ಬೇಕೆ? ತೆಲಂಗಾಣದ ಚಂಚಲಗುಡ ಕಾರಾಗೃಹಕ್ಕೆ ಹೋಗಿ; ನಾಗರಿಕರಿಗೆ ಸೆರೆವಾಸ ಅನುಭವ ನೀಡುವ 'ಜೈಲು ಅನುಭವ' ಕಾರ್ಯಕ್ರಮ!

1912ರಲ್ಲಿ ನಿರ್ಮಿತವಾದ ಚಂಚಲಗುಡ ಕೇಂದ್ರ ಕಾರಾಗೃಹವು ಶತಮಾನಕ್ಕೂ ಹೆಚ್ಚು ಕಾಲ ಕೈದಿಗಳನ್ನು ಹೊಂದಿದೆ. ಈ ಯೋಜನೆಯಡಿ, ಭಾಗವಹಿಸುವವರು ವಿಶೇಷವಾಗಿ ಸಿದ್ಧಪಡಿಸಿದ ಬ್ಯಾರಕ್‌ಗಳಲ್ಲಿ ತಂಗಬಹುದು.
Governor Shiv Pratap Shukla visits a barrack after inaugurating ‘Feel the Jail’ initiative at the Chanchalguda Central Jail
‘ಫೀಲ್ ದ ಜೈಲ್’ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಬ್ಯಾರಕ್‌ವೊಂದಕ್ಕೆ ಭೇಟಿ ನೀಡಿದ ರಾಜ್ಯಪಾಲರು
Updated on

ಹೈದರಾಬಾದ್: ತೆಲಂಗಾಣ ಕಾರಾಗೃಹ ಇಲಾಖೆ ಐತಿಹಾಸಿಕ ಚಂಚಲಗುಡ ಕೇಂದ್ರ ಕಾರಾಗೃಹದಲ್ಲಿ ‘ಜೈಲ್ ಅನುಭವಂ’ ಅಥವಾ ‘ಫೀಲ್ ದ ಜೈಲ್’ ಎಂಬ ವಿಶೇಷ ಅನುಭವ ಕಾರ್ಯಕ್ರಮವನ್ನು ಆರಂಭಿಸಿದೆ. ಇಲ್ಲಿ ಸಾರ್ವಜನಿಕರು 12 ರಿಂದ 24 ಗಂಟೆಗಳ ಕಾಲ ನಿಯಂತ್ರಿತ ಪರಿಸರದಲ್ಲಿ ಕೈದಿಗಳ ಜೀವನವನ್ನು ಅನುಭವಿಸುವ ಅವಕಾಶ ಕಲ್ಪಿಸಲಾಗಿದೆ. ರಾಜ್ಯಪಾಲ ಶಿವ್ ಪ್ರತಾಪ್ ಶುಕ್ಲ ಅವರು ಜೈಲು ಆವರಣದಲ್ಲಿ ಯೋಜನೆಯನ್ನು ಮತ್ತು ತೆಲಂಗಾಣ ಕಾರಾಗೃಹ ಮ್ಯೂಸಿಯಂ ನ್ನು ಉದ್ಘಾಟಿಸಿದರು.

1912ರಲ್ಲಿ ನಿರ್ಮಿತವಾದ ಚಂಚಲಗುಡ ಕೇಂದ್ರ ಕಾರಾಗೃಹವು ಶತಮಾನಕ್ಕೂ ಹೆಚ್ಚು ಕಾಲ ಕೈದಿಗಳನ್ನು ಹೊಂದಿದೆ. ಈ ಯೋಜನೆಯಡಿ, ಭಾಗವಹಿಸುವವರು ವಿಶೇಷವಾಗಿ ಸಿದ್ಧಪಡಿಸಿದ ಬ್ಯಾರಕ್‌ಗಳಲ್ಲಿ ತಂಗಬಹುದು. ಬೆಳಗ್ಗೆ 6ರಿಂದ ಸಂಜೆ 6ರವರೆಗೆ 12 ಗಂಟೆಗಳ ಅನುಭವಕ್ಕೆ 1,000 ರೂಪಾಯಿ ಹಾಗೂ ಬೆಳಗ್ಗೆ 6ರಿಂದ ಮರುದಿನ ಬೆಳಗ್ಗೆ 6ರವರೆಗೆ 24 ಗಂಟೆಗಳ ಅನುಭವಕ್ಕೆ 2,000 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಭಾಗವಹಿಸಲು ಅವಕಾಶವಿಲ್ಲ.

ಅಧಿಕಾರಿಗಳು ಮಹಿಳೆಯರಿಗಾಗಿ ಒಂದು ಬ್ಯಾರಕ್ ಸೇರಿದಂತೆ ಐದು ಬ್ಯಾರಕ್‌ಗಳನ್ನು ಸಿದ್ಧಪಡಿಸಿದ್ದಾರೆ. ಏಕಾಂಗಿ ಬಂಧನ ಅನುಭವಿಸುವಂತೆ ‘ಡಾರ್ಕ್ ಸೆಲ್’ ಮತ್ತು ಹೈ-ಸಿಕ್ಯೂರಿಟಿ ಡಬಲ್ ಬ್ಯಾರಕ್‌ಗಳನ್ನೂ ನಿರ್ಮಿಸಲಾಗಿದೆ. ಭಾಗವಹಿಸುವವರಿಗೆ ಜೈಲು ಯೂನಿಫಾರ್ಮ್, ತಟ್ಟೆ, ಗ್ಲಾಸ್ ಮತ್ತು ಇತರೆ ಜೈಲು ಬಳಕೆಯ ವಸ್ತುಗಳನ್ನು ನೀಡಲಾಗುತ್ತದೆ.

ಈ ಕಾರ್ಯಕ್ರಮವನ್ನು ಜೈಲು ಶಿಸ್ತು, ಕೈದಿಗಳ ದಿನಚರಿ, ಪುನರ್ವಸತಿ ಮತ್ತು ತಿದ್ದುಪಡಿ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಕೈದಿಗಳಿಗೆ ನೀಡುವ ಅದೇ ಆಹಾರವನ್ನು ನೀಡಲಾಗುತ್ತದೆ. ಬೆಳಗ್ಗೆ 7ರಿಂದ 8ರೊಳಗೆ ಉಪಾಹಾರ, 11ರಿಂದ 12ರೊಳಗೆ ಮಧ್ಯಾಹ್ನದ ಊಟ ಹಾಗೂ ಸಂಜೆ 5ರಿಂದ 6ರೊಳಗೆ ರಾತ್ರಿ ಊಟ ನೀಡಲಾಗುತ್ತದೆ. ಭಾನುವಾರದ ಮಧ್ಯಾಹ್ನದ ಊಟದಲ್ಲಿ ಮಾತ್ರ ಮಾಂಸಾಹಾರ ನೀಡಲಾಗುತ್ತದೆ.

ತೆಲಂಗಾಣ ಕಾರಾಗೃಹ ಮ್ಯೂಸಿಯಂನಲ್ಲಿ ಜೈಲುಗಳ ಇತಿಹಾಸ, ಜೈಲು ಜೀವನ ಮತ್ತು ಹಿಂದಿನ ಶಿಕ್ಷಾ ಪದ್ಧತಿಗಳ ವಿವರಗಳನ್ನು ಪ್ರದರ್ಶಿಸಲಾಗಿದೆ. ಪ್ರವೇಶ ಶುಲ್ಕ ವಯಸ್ಕರಿಗೆ 20 ರೂಪಾಯಿ ಹಾಗೂ ವಿದ್ಯಾರ್ಥಿಗಳಿಗೆ 10 ರೂಪಾಯಿ ನಿಗದಿಪಡಿಸಲಾಗಿದೆ.

ಮ್ಯೂಸಿಯಂ ಪ್ರವೇಶದ್ವಾರದಲ್ಲಿ ‘ತಮಸೋಮಾ ಜ್ಯೋತಿರ್ಗಮಯ’ — ‘ಕತ್ತಲೆಯಿಂದ ಬೆಳಕಿನತ್ತ’ ಎಂಬ ಘೋಷವಾಕ್ಯ ಅಳವಡಿಸಲಾಗಿದ್ದು, ಜೈಲುಗಳ ತಿದ್ದುಪಡಿ ಪಾತ್ರವನ್ನು ಪ್ರತಿಬಿಂಬಿಸುತ್ತದೆ. ಇಲ್ಲಿ ಜೈಲು ಸಂಬಂಧಿತ ವಸ್ತುಗಳು, ಹಳೆಯ ಶಿಕ್ಷಾ ಪದ್ಧತಿಗಳ ಚಿತ್ರಣಗಳು, ಸರಪಳಿ, ಬೆಂಕಿಹಾಕುವ ಸಾಧನಗಳು, ಗಲ್ಲುಗಂಬ ಮತ್ತು ಮರುನಿರ್ಮಿತ ಜೈಲು ಬ್ಯಾರಕ್‌ಗಳನ್ನು ಪ್ರದರ್ಶಿಸಲಾಗಿದೆ. ಕವಿ ದಾಶರಥಿ ಕೃಷ್ಣಮಾಚಾರ್ಯ ಹಾಗೂ ಕಂಚರ್ಲ ಗೋಪಣ್ಣ ಅವರಿಗೆ ಪ್ರತ್ಯೇಕ ವಿಭಾಗಗಳನ್ನು ಮೀಸಲಿಡಲಾಗಿದೆ.

Governor Shiv Pratap Shukla visits a barrack after inaugurating ‘Feel the Jail’ initiative at the Chanchalguda Central Jail
ಜೈಲಿನಲ್ಲೇ ಅರಳಿದ ಪ್ರೇಮ: ಕೈದಿ ಪ್ರೀತಿಗೆ ಸೋತು ಹಿಂದೂ ಸಂಪ್ರದಾಯದಂತೆ ಮದುವೆಯಾದ ಮುಸ್ಲಿಂ ಅಧಿಕಾರಿ..!

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲರು, ಜೈಲು ವ್ಯವಸ್ಥೆಗಳು ಶಿಕ್ಷೆ ನೀಡುವ ಸಂಸ್ಥೆಗಳಿಂದ ತಿದ್ದುಪಡಿ, ಪುನರ್ವಸತಿ ಮತ್ತು ಮಾನವ ಗೌರವದ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ ಎಂದು ಹೇಳಿದರು. ಮ್ಯೂಸಿಯಂ ನ್ಯಾಯ, ಶಿಕ್ಷೆ ಮತ್ತು ಮಾನವ ಪರಿವರ್ತನೆಯ ಇತಿಹಾಸವನ್ನು ವಿವರಿಸುತ್ತದೆ ಎಂದರು.

ಕಾರಾಗೃಹಗಳ ಮಹಾನಿರ್ದೇಶಕಿ ಸೌಮ್ಯ ಮಿಶ್ರ, ಮ್ಯೂಸಿಯಂನ್ನು ಅರಿವು, ಶಿಕ್ಷಣ, ಸಂಶೋಧನೆ ಮತ್ತು ಚಿಂತನೆಯ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು. ಸಂಗಾರೆಡ್ಡಿಯಲ್ಲಿದ್ದ ಹಳೆಯ ಜೈಲು ಮ್ಯೂಸಿಯಂ ಕೆಲವು ವರ್ಷಗಳ ಹಿಂದೆ ಕುಸಿದ ನಂತರ, ಚಂಚಲಗುಡದಲ್ಲಿ ಅದನ್ನು ಪುನರುಜ್ಜೀವನಗೊಳಿಸಿ ವಿಸ್ತರಿಸಲಾಗಿದೆ ಎಂದರು.

ಪ್ರಾಚೀನ ಶಿಕ್ಷಾ ವಿಧಾನಗಳಿಂದ ಆಧುನಿಕ ತಿದ್ದುಪಡಿ ಕ್ರಮಗಳವರೆಗೆ ಜೈಲು ವ್ಯವಸ್ಥೆಗಳ ಬೆಳವಣಿಗೆಯನ್ನು ಥೀಮ್ಯಾಟಿಕ್ ಗ್ಯಾಲರಿಗಳು, ಮರುನಿರ್ಮಿತ ಜೈಲು ಮಾದರಿಗಳು ಮತ್ತು ಪುನರ್ವಸತಿ ಪ್ರದರ್ಶನಗಳ ಮೂಲಕ ಈ ಮ್ಯೂಸಿಯಂ ತೋರಿಸುತ್ತದೆ ಎಂದು ತಿಳಿಸಿದರು.

ಜೈಲು ಅನುಭವ ಮತ್ತು ಸಾರ್ವಜನಿಕ ಭೇಟಿ ಬುಕ್ಕಿಂಗ್‌ಗಾಗಿ ಕಾರಾಗೃಹ ಇಲಾಖೆ ಅಧಿಕೃತ ವೆಬ್‌ಸೈಟ್‌ನ್ನು ಆರಂಭಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com