

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಗ್ನಿಪರೀಕ್ಷೆಯಲ್ಲಿ ಗೆದ್ದಿದ್ದಾರೆ. ವಿಧಾನಸಭೆಯಲ್ಲಿ ಬುಧವಾರ ನಡೆದ ವಿಶ್ವಾಸಮತಯಾಚನೆ ವೇಳೆ ನಿರೀಕ್ಷೆಗೂ ಮೀರಿ ಬರೋಬ್ಬರಿ 144 ಶಾಸಕರ ಬೆಂಬಲದೊಂದಿಗೆ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಬಹುಮತ ಸಾಬೀತುಪಡಿಸಿದೆ. ಮತ್ತೊಂದೆಡೆ ಎಐಎಡಿಎಂಕೆ ಛಿದ್ರಗೊಂಡಿದೆ.
ವಿಧಾನಸಭೆ ಕಲಾಪ ಇಂದು ಆರಂಭವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಜೋಸೆಫ್ ವಿಜಯ್ ವಿಶ್ವಾಸ ಮತ ಯಾಚನೆಗೆ ನಿರ್ಣಯ ಮಂಡಿಸಿದರು. ವಿಶ್ವಾಸ ಮತ ಯಾಚನೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಮತ್ತು ಸಿಪಿಎಂ, ವಿಸಿಕೆ ಟಿವಿಕೆ ಸರ್ಕಾರಕ್ಕೆ ಬೆಂಬಲ ಘೋಷಿಸಿದವು. ಇದರಿಂದಾಗಿ ಟಿವಿಕೆಗೆ ಸದನದಲ್ಲಿ 120 ಶಾಸಕರ ಬಲವಿತ್ತು. ಮತ್ತೊಂದೆಡೆ 22 ಶಾಸಕರು ಟಿವಿಕೆ ವಿರುದ್ಧ ಮತ ಚಲಾಯಿಸಿದರು. ಐವರು ಶಾಸಕರು ಗೈರುಹಾಜರಾದರು.
ಡಿಎಂಕೆ ಸಭಾತ್ಯಾಗ ಮಾಡಿ, ಮತದಾನದ ಸಮಯದಲ್ಲಿ ಸದನದ ಒಟ್ಟು ಬಲವನ್ನು ಕಡಿಮೆ ಮಾಡಿತು. ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಎಐಎಡಿಎಂಕೆ ಬಂಡಾಯ ಬಣ ಪಕ್ಷದ ವಿಪ್ ಉಲ್ಲಂಘಿಸಿ ವಿಜಯ್ ಪರವಾಗಿ ಮತ ಚಲಾಯಿಸಿದೆ ಎನ್ನಲಾಗಿದೆ.
ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ಶಾಸಕರು ಪಕ್ಷಕ್ಕೆ ಬೆಂಬಲ ನೀಡಿದ್ದರಿಂದ ಟಿವಿಕೆ ಬಹುಮತ ಪರೀಕ್ಷೆಯಲ್ಲಿ ಗೆದ್ದಿತು. ಇಬ್ಬರು ಶಾಸಕರನ್ನು ಹೊಂದಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ( IUML) ಕೂಡ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿದೆ. ಅಮ್ಮ ಮಕ್ಕಳ್ ಮುನ್ನೆತ್ರ ಕಜಗಂ (AMMK) ಉಚ್ಚಾಟಿತ ಶಾಸಕ ಕಾಮರಾಜ್ ಕೂಡ ವಿಧಾನಸಭೆಯಲ್ಲಿ ಟಿವಿಕೆಯನ್ನು ಬೆಂಬಲಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನಾನು ನಿನ್ನೆ ಟಿವಿಕೆ ಸರ್ಕಾರವನ್ನು ಬೆಂಬಲಿಸಿದೆ. ಇಂದು ಕೂಡಾ ಅದನ್ನೇ ಬೆಂಬಲಿಸುತ್ತೇನೆ. ಮುಂದಿನ ಐದು ವರ್ಷಗಳ ಕಾಲ ಅದನ್ನೇ ಬೆಂಬಲಿಸುತ್ತಲೇ ಇರುತ್ತೇನೆ. ಸಿಎಂ ವಿಜಯ್ ಇಡೀ ರಾಜ್ಯವನ್ನು ರಕ್ಷಿಸುತ್ತಿದ್ದಾರೆ. ಅವರು ನನ್ನನ್ನು ಸಹ ಬಿಡುವುದಿಲ್ಲ ಎಂದು ನಾನು ನಂಬುತ್ತೇನೆ. ನಮ್ಮ ವಿಜಯ್ ನನ್ನನ್ನು ಸಹ ರಕ್ಷಿಸುತ್ತಾರೆ ಮತ್ತು ಉಳಿಸುತ್ತಾರೆ ಎಂಬ ನಂಬಿಕೆಯಿದೆ ಎಂದರು.
ಈ ಮಧ್ಯೆ AIADMK ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಪಕ್ಷದ ಎಲ್ಲಾ 47 ಶಾಸಕರು ಟಿವಿಕೆ ವಿರುದ್ಧ ಮತ ಚಲಾಯಿಸಲಿದ್ದಾರೆ ಎಂದು ಹೇಳಿದ್ದರೂ, ವಿಧಾನಸಭೆಯಲ್ಲಿ ಎಐಎಡಿಎಂಕೆ ಬಂಡಾಯ ಶಾಸಕರು ವಿಜಯ್ ಬೆಂಬಲಿಸಿದ್ದಾರೆ. ಪಕ್ಷದ ಶಾಸಕರ ಕುದುರೆ ವ್ಯಾಪಾರದ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿರುವ ಪಳನಿಸ್ವಾಮಿ, ಸರ್ಕಾರವನ್ನು ಬೆಂಬಲಿಸುವ ಬದಲು ಕೆಲವು ಸದಸ್ಯರಿಗೆ ಸಚಿವ ಸ್ಥಾನಗಳು ಮತ್ತು ಮಂಡಳಿಯ ಅಧ್ಯಕ್ಷ ಸ್ಥಾನಗಳನ್ನು ನೀಡಲಾಗುತ್ತಿದೆ ಎಂಬ ಮಾಹಿತಿ ಪಕ್ಷಕ್ಕೆ ತಲುಪಿದೆ. ನಾವು ಶತ್ರು ಪಕ್ಷವಲ್ಲ. ನಾವು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಬಯಸುತ್ತೇವೆ" ಎಂದು ಸದನದಲ್ಲಿ ಹೇಳಿದರು.
Advertisement