

ನವದೆಹಲಿ: ಇತ್ತೀಚಿಗಷ್ಟೇ ಒಂದು ವರ್ಷಗಳ ಕಾಲ ಚಿನ್ನ ಖರೀದಿಸಬೇಡಿ ಎಂದು ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕಣ್ಣು ಈಗ ದೇಶದ ಪ್ರತಿಷ್ಠಿತ ದೇವಾಲಯಗಳ ಚಿನ್ನದ ಖಜಾನೆ ಮೇಲೆ ಬಿದ್ದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ದೇಶಾದ್ಯಂತ ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಚಿನ್ನವನ್ನು ನಗದೀಕರಣಗೊಳಿಸುವ ಯಾವುದೇ ಯೋಜನೆ ಸರ್ಕಾರದ ಮುಂದೆ ಇಲ್ಲ. ಇದು ಸಂಪೂರ್ಣ 'ಸುಳ್ಳು ಮತ್ತು ದಾರಿತಪ್ಪಿಸುವ ಹಾಗೂ ಆಧಾರರಹಿತ' ವರದಿಗಳು ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದ್ದು, ಸಾಮಾಜಿಕ ಮಾಧ್ಯಮ ಹೇಳಿಕೆಗಳನ್ನು ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದೆ.
ಕೆಲವು ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ಗಳು, ಕೇಂದ್ರ ಸರ್ಕಾರ ದೇವಾಲಯಗಳ ಚಿನ್ನವನ್ನು ಪಡೆದು ದೇವಾಲಯಗಳಿಗೆ ಚಿನ್ನದ ಬಾಂಡ್ಗಳನ್ನು ನೀಡಲು ಯೋಜಿಸುತ್ತಿದೆ ಅಥವಾ ದೇವಾಲಯಗಳ ಚಿನ್ನ ನಗದೀಕರಣ ಯೋಜನೆಗೆ ಅನುಮೋದಿಸಿದೆ ಎಂದು ಹೇಳಲಾಗಿದೆ. ಆದರೆ ಇದು ಸುಳ್ಳು ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ದೇವಾಲಯದ ಗುಮ್ಮಟಗಳು, ಬಾಗಿಲುಗಳು ಅಥವಾ ಇತರ ರಚನೆಗಳ ಮೇಲೆ ಚಿನ್ನದ ಲೇಪನ ಮಾಡುವುದನ್ನು ಭಾರತದ ಕಾರ್ಯತಂತ್ರದ ಚಿನ್ನದ ನಿಕ್ಷೇಪಗಳ ಭಾಗವೆಂದು ಪರಿಗಣಿಸಲಾಗುತ್ತದೆ ಎಂಬ ಹೇಳಿಕೆಗಳನ್ನು ಸಚಿವಾಲಯ ತಿರಸ್ಕರಿಸಿದೆ. ಈ ಹೇಳಿಕೆಗಳನ್ನು ಸುಳ್ಳು ಮತ್ತು ಆಧಾರರಹಿತ ಎಂದು ಹೇಳಿದೆ. ಅಂತಹ ವದಂತಿಗಳನ್ನು ನಂಬಬೇಡಿ ಅಥವಾ ಹರಡಬೇಡಿ ಎಂದು ಸರ್ಕಾರ ನಾಗರಿಕರಿಗೆ ಮನವಿ ಮಾಡಿದೆ.
ಜನರು ಅಧಿಕೃತ ಮಾರ್ಗಗಳ ಮೂಲಕ ಹೊರಡಿಸಲಾದ ಅಧಿಕೃತ ಮಾಹಿತಿಯನ್ನು ಮಾತ್ರ ಅವಲಂಬಿಸಬೇಕು. ನೀತಿ ನಿರ್ಧಾರಗಳು ಅಥವಾ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಅಧಿಕೃತ ಪತ್ರಿಕಾ ಪ್ರಕಟಣೆಗಳು, ಸರ್ಕಾರಿ ವೆಬ್ಸೈಟ್ಗಳು ಮತ್ತು ಪರಿಶೀಲಿಸಿದ ಸಾರ್ವಜನಿಕ ಸಂವಹನ ವೇದಿಕೆಗಳ ಮೂಲಕ ಹಂಚಿಕೊಳ್ಳಲಾಗುತ್ತದೆ. ಸಾರ್ವಜನಿಕರು ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.
Advertisement