

ತಿರುವರೂರು: ದಳಪತಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಮತ್ತೆ ಸಂಕಷ್ಟ ಎದುರಾಗಿದ್ದು, ಎಐಎಡಿಎಂಕೆ ಅಥವಾ ಅದರ ಬಂಡಾಯ ಬಣವನ್ನು ಸಂಪುಟಕ್ಕೆ ಸೇರಿಸಿಕೊಂಡರೆ ತಮ್ಮ ಪಕ್ಷ ಬೆಂಬಲವನ್ನು ಮರುಪರಿಶೀಲಿಸುತ್ತದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿ ಷಣ್ಮುಗಂ ಅವರು ಮಂಗಳವಾರ ಹೇಳಿದ್ದಾರೆ.
ಇಂದು ತಿರುತುರೈಪೂಂಡಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸಭೆಯ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
"ಮತ್ತೊಂದು ಚುನಾವಣೆ ಮತ್ತು ರಾಜ್ಯಪಾಲರ ಆಡಳಿತದ ಮೂಲಕ ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರ ನಡೆಸುವುದನ್ನು ತಪ್ಪಿಸಲು ನಾವು ಟಿವಿಕೆ ಸರ್ಕಾರಕ್ಕೆ ನಮ್ಮ ಬಾಹ್ಯ ಬೆಂಬಲವನ್ನು ನೀಡಿದ್ದೇವೆ. ಇದಲ್ಲದೆ 108 ಸ್ಥಾನಗಳನ್ನು ಹೊಂದಿರುವ ಏಕೈಕ ಅತಿದೊಡ್ಡ ಪಕ್ಷವಾಗಿ, ಅದು ಸರ್ಕಾರ ರಚಿಸುವ ಅವಕಾಶವನ್ನು ಹೊಂದಿತ್ತು" ಎಂದು ಷಣ್ಮುಗಂ ಹೇಳಿದರು.
ಎಐಎಡಿಎಂಕೆ ಅಥವಾ ಅದರ ಬಂಡಾಯ ಬಣವನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಜನಪ್ರಿಯ ಜನಾದೇಶಕ್ಕೆ ವಿರುದ್ಧವಾಗಿರುತ್ತದೆ ಎಂದು ಅವರು ಹೇಳಿದರು.
"ಜನರು ಎಐಎಡಿಎಂಕೆ ಮತ್ತು ಡಿಎಂಕೆ ವಿರುದ್ಧ ಮತ ಚಲಾಯಿಸಿದ್ದಾರೆ. ಆದ್ದರಿಂದ, ಅವರ ಬೆಂಬಲದೊಂದಿಗೆ ಸರ್ಕಾರವನ್ನು ನಡೆಸುವುದು ಜನಾದೇಶಕ್ಕೆ ವಿರುದ್ಧವಾಗಿರುತ್ತದೆ". ಹೀಗಾಗಿ "ಟಿವಿಕೆ ಅಂತಹ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡರೆ, ನಾವು ನಮ್ಮ ನಿರ್ಧಾರವನ್ನು ಮರುಪರಿಶೀಲಿಸುತ್ತೇವೆ" ಎಂದು ಷಣ್ಮುಗಂ ಎಚ್ಚರಿಕೆ ನೀಡಿದ್ದಾರೆ.
ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಬೆಲೆಯನ್ನು ಹೆಚ್ಚಿಸಿದ್ದಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದ ಸಿಪಿಎಂ ನಾಯಕ, "ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಕಡಿಮೆ ಇದ್ದಾಗ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಕಡಿಮೆ ಮಾಡಲಿಲ್ಲ ಮತ್ತು ಆ ಮೂಲಕ ಖಾಸಗಿ ತೈಲ ಕಂಪನಿಗಳು ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಲಾಭ ಮಾಡಿಕೊಳ್ಳಲು ಅನುಕೂಲ ಮಾಡಿಕೊಟ್ಟಿತು. ಈಗ ಸರ್ಕಾರ ಜನರ ಮೇಲೆ ಹೊರೆ ಹಾಕುತ್ತಿದೆ" ಎಂದು ಅವರು ಹೇಳಿದರು.
Advertisement