

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಳೆದ 10 ದಿನಗಳಲ್ಲಿ ನಾಲ್ಕನೇ ಬಾರಿ ಇಂಧನ ದರ ಏರಿಕೆಯಾಗಿರುವುದನ್ನು ಖಂಡಿಸಿದ ಅವರು, “ಇದು ಸಾಮಾನ್ಯ ಜನರ ಮೇಲೆ ನಡೆಯುತ್ತಿರುವ ದಿನನಿತ್ಯದ ದರೋಡೆ” ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, “ಇಂಧನ ದರ ಏರಿಕೆಯ ದೈನಂದಿನ ದಾಳಿ ಇನ್ನೂ ನಿಂತಿಲ್ಲ. 10 ದಿನಗಳಲ್ಲಿ ನಾಲ್ಕನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಲಾಗಿದೆ. ಮೋದಿ ಸರ್ಕಾರ ಪೆಟ್ರೋಲ್ ಸಿಂಪಡಿಸಿ ಜನರ ಉಳಿತಾಯಕ್ಕೆ ಬೆಂಕಿ ಹಚ್ಚುತ್ತಿದೆ,” ಎಂದು ಕಿಡಿಕಾರಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಶೇ.175.34ರಷ್ಟು ಏರಿಕೆಯಾಗಿದ್ದರೂ, ಮೋದಿ ಸರ್ಕಾರದ ಅವಧಿಯಲ್ಲಿ ಅಷ್ಟು ಏರಿಕೆಯಾಗಿಲ್ಲ ಎಂದು ಖರ್ಗೆ ಹೇಳಿದ್ದಾರೆ.
ಆದರೂ 2014ರಲ್ಲಿ ರೂ.71.41 ಇದ್ದ ಪೆಟ್ರೋಲ್ ದರವನ್ನು 2026ರಲ್ಲಿ ರೂ.102.12ಕ್ಕೆ ಮತ್ತು ರೂ.56.71 ಇದ್ದ ಡೀಸೆಲ್ ದರವನ್ನು ರೂ.95.20ಕ್ಕೆ ಏರಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರ ರೂ.43 ಲಕ್ಷ ಕೋಟಿ ‘ಲೂಟಿ’ ಮಾಡಿದೆ ಎಂದು ಖರ್ಗೆ ಆರೋಪಿಸಿದ್ದು, ಪ್ರತಿ ದಿನದ ಇಂಧನ ದರ ಏರಿಕೆ ಮನೆ ಖರ್ಚಿನ ಮೇಲೆ ಭಾರೀ ಹೊರೆ ಆಗುತ್ತಿದೆ. ರೈತರಿಂದ ಹಿಡಿದು ಸಣ್ಣ ಕೈಗಾರಿಕೆಗಳವರೆಗೂ ಎಲ್ಲರೂ ಇದರ ಹೊರೆ ಹೊರುತ್ತಿದ್ದಾರೆ ಎಂದು ಹೇಳಿದರು.
ಇಂಧನ ದರ ಏರಿಕೆಯ ಬೆನ್ನಲ್ಲೇ HPCL, BPCL ಮತ್ತು IOC ಷೇರುಗಳು ಏರಿಕೆ ಕಂಡಿರುವುದನ್ನೂ ಉಲ್ಲೇಖಿಸಿದ ಖರ್ಗೆ, “ಜನರಿಗಿಂತ ಲಾಭವೇ ಬಿಜೆಪಿಯ ಆದ್ಯತೆ” ಎಂದು ಟೀಕಿಸಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷದಿಂದ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯನ್ನು ಆಧರಿಸಿ ತೈಲ ಕಂಪನಿಗಳು ಇಂಧನ ದರ ಪರಿಷ್ಕರಣೆ ಮುಂದುವರಿಸಿದ್ದು, ಸೋಮವಾರ ಪೆಟ್ರೋಲ್ ದರ ಲೀಟರ್ಗೆ ರೂ.2.61 ಹಾಗೂ ಡೀಸೆಲ್ ರೂ.2.71 ಏರಿಕೆ ಮಾಡಿದೆ.
ಈ ಮೂಲಕ ಮೇ 15ರಿಂದ ಆರಂಭವಾದ ದರ ಪರಿಷ್ಕರಣೆ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಒಟ್ಟಾರೆ ಸುಮಾರು ರೂ.7.5ರವರೆಗೆ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ರೂ.102.12 ಮತ್ತು ಡೀಸೆಲ್ ರೂ.95.20ಕ್ಕೆ ತಲುಪಿದೆ.
Advertisement