

ಚೆನ್ನೈ: ಬೆಳೆ ಸಾಲ ಮನ್ನಾ ಘೋಷಣೆಗೆ ಸಂಬಂಧಿಸಿದಂತೆ ಟಿವಿಕೆ ಸರ್ಕಾರದ ವಿರುದ್ಧ ಮಂಗಳವಾರ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ವಾಗ್ದಾಳಿ ನಡೆಸಿದ್ದು, 'ಕುದುರೆ ವ್ಯಾಪಾರ' ರಾಜಕೀಯದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮಾಡುತ್ತಿರುವ 'ವೈಜ್ಞಾನಿಕ ವಂಚನೆ' ಇದಾಗಿದೆ ಎಂದು ಕರೆದಿದ್ದಾರೆ.
ಸಿ ಜೋಸೆಫ್ ವಿಜಯ್ ನೇತೃತ್ವದಲ್ಲಿ ಹೊಸದಾಗಿ ರಚನೆಯಾದ ಟಿವಿಕೆ ಸರ್ಕಾರವು ತಮಿಳುನಾಡಿನ ಜನರು 'ಕುದುರೆ ವ್ಯಾಪಾರದ ಅತ್ಯಂತ ಅಸಹ್ಯಕರ ರಾಜಕೀಯವನ್ನು ನೋಡದಂತೆ' ಅವರ ಗಮನವನ್ನು ಬೇರೆಡೆ ತಿರುಗಿಸಲು 'ಸಮಯವನ್ನು ವ್ಯರ್ಥ ಮಾಡುತ್ತಿದೆ' ಎಂದು ಆರೋಪಿಸಿದರು.
'ರಾಜ್ಯದಾದ್ಯಂತ ಸಣ್ಣ ರೈತರ ₹50,000 ವರೆಗಿನ ಸಹಕಾರಿ ಬ್ಯಾಂಕ್ ಬೆಳೆ ಸಾಲ ಮನ್ನಾ ಮಾಡುವ ಕುರಿತು ಸೋಮವಾರ ಮುಖ್ಯಮಂತ್ರಿ ವಿಜಯ್ ಪ್ರಕಟಿಸಿದ ಘೋಷಣೆಗೆ ಪ್ರತಿಕ್ರಿಯಿಸಿದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ, ತಮಿಳಿಗ ವೆಟ್ರಿ ಕಳಗಂ (TVK) 5 ಎಕರೆವರೆಗಿನ ಭೂಮಿ ಹೊಂದಿರುವ ಎಲ್ಲ ರೈತರ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಭರವಸೆ ನೀಡಿದೆ' ಎಂದು ಹೇಳಿದರು.
ಬೆಳೆ ಸಾಲ ಮನ್ನಾದ ಮಾನದಂಡವನ್ನು ರೈತರು ಹೊಂದಿರುವ ಭೂಮಿಗೆ ಅನುಗುಣವಾಗಿ ಮಾಡುವುದಕ್ಕೆ ಬದಲಾಗಿ ₹50,000 ವರೆಗಿನ ಹಣದ ಮಿತಿಯನ್ನು ಆಧರಿಸಿರುವುದು 'ನಂಬಿಕೆಗೆ ಮಾಡಿದ ದೊಡ್ಡ ದ್ರೋಹ' ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ತಮ್ಮ ಹಿಂದಿನ ಎಐಎಡಿಎಂಕೆ ಆಡಳಿತದಲ್ಲಿ ಒದಗಿಸಲಾದ ಮೊತ್ತವನ್ನು ಹೋಲಿಸಿ ಮಾತನಾಡಿದ ಪಳನಿಸ್ವಾಮಿ, ಅಂದಿನ ಎಐಎಡಿಎಂಕೆ ಸರ್ಕಾರವು ₹12,110 ಕೋಟಿ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿತ್ತು. ಇದು ಯಾವುದೇ ಸಂಕೀರ್ಣ ನಿರ್ಬಂಧಗಳಿಲ್ಲದೆ 16.43 ಲಕ್ಷಕ್ಕೂ ಹೆಚ್ಚು ರೈತರಿಗೆ ಪರಿಹಾರವನ್ನು ಒದಗಿಸಿದೆ ಎಂದು ಹೇಳಿದರು.
ತಮಿಳು ಗಾದೆಯೊಂದನ್ನು ಉಲ್ಲೇಖಿಸುವ ಮೂಲಕ, ಸರ್ಕಾರವು ನಿಜವಾಗಿಯೂ ಯಾವುದೇ ಉನ್ನತಿಗೆ ಬದ್ಧವಾಗಿಲ್ಲ. ಆದರೆ, ತೋರ್ಪಡಿಕೆಗಾಗಿ ಈ ರೀತಿ ವರ್ತಿಸುತ್ತಿದೆ. ಡಮ್ಮಿ ಹಾರ್ಸ್ ಸರ್ಕಾರವು ಬೆಳೆ ಸಾಲಗಳನ್ನು ಮನ್ನಾ ಮಾಡುವ ಹೆಸರಿನಲ್ಲಿ ವೈಜ್ಞಾನಿಕ ವಂಚನೆ ಮಾಡುತ್ತಿದೆ ಎಂದರು.
'2021ರಲ್ಲಿ ನಾವು ₹12,110 ಕೋಟಿ ಸಾಲ ಮನ್ನಾ ಮಾಡಿದ್ದನ್ನು ನೀವು ನೋಡಿದರೆ ಮತ್ತು ಈಗ ಅವರು 2026ರಲ್ಲಿ ಕೇವಲ ₹2,044 ಕೋಟಿ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ರೈತರು ಅದನ್ನು ಅರ್ಥಮಾಡಿಕೊಳ್ಳುತ್ತಾರೆ. ಒಬ್ಬ ರೈತನಾಗಿ, ರೈತರನ್ನು ವಂಚಿಸಿದ ಯಾವುದೇ ಸರ್ಕಾರ ಎಂದಿಗೂ ಉಳಿಯಲಿಲ್ಲ ಎಂದು ಇತಿಹಾಸ ತೋರಿಸುತ್ತದೆ ಎಂದು ನಾನು ಹೇಳುತ್ತೇನೆ. ಒಬ್ಬ ರೈತ ಆಹಾರ ನೀಡುವ ದೇವರಂತೆ. ಅವರನ್ನು ವಂಚಿಸಬೇಡಿ' ಎಂದು ಪಳನಿಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ತನ್ನ ಮೂಲ ಚುನಾವಣಾ ಭರವಸೆಯನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು ಮತ್ತು ರೈತರಿಗೆ ಸಹಾಯ ಮಾಡಬೇಕು ಎಂದು ಒತ್ತಾಯಿಸಿದರು.
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಸೋಮವಾರ ಸಣ್ಣ ರೈತರ ₹50,000 ವರೆಗಿನ ಸಹಕಾರಿ ಬ್ಯಾಂಕ್ ಬೆಳೆ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಅ್ ದೊಡ್ಡ ರೈತರಿಗೆ ₹5,000 ಪರಿಹಾರ ಪಾವತಿಯನ್ನು ಘೋಷಿಸಿದ್ದಾರೆ.
ಈ ಯೋಜನೆಯು ರಾಜ್ಯದಾದ್ಯಂತ 14.22 ಲಕ್ಷ ರೈತರಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ. ರಾಜ್ಯ ಸರ್ಕಾರದಿಂದ ಒಟ್ಟು ₹2,044 ಕೋಟಿ ವೆಚ್ಚವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಬೆಳೆ ಸಾಲ ಬಾಕಿಯಿರುವ ರೈತರಿಗೆ ಪರಿಹಾರ ನೀಡುವ ಗುರಿಯೊಂದಿಗೆ ಮೇ 25 ರಂದು ಈ ಘೋಷಣೆಯನ್ನು ಮಾಡಿದರು.
Advertisement