

ರಾಜಮಹೇಂದ್ರವರಂ: ನೆರೆಯ ತಮಿಳುನಾಡಿನಲ್ಲಿ ನಟ ವಿಜಯ್ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಆಂಧ್ರ ಪ್ರದೇಶದ ಜನ ಸೇನಾ ಪಕ್ಷದ (JSP)ಮುಖ್ಯಸ್ಥ ಮತ್ತು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ರಾಜಕೀಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಪಕ್ಷ ಸಂಘಟನೆ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದು, ಸೋಮವಾರ ಸಂಜೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಪಕ್ಷದ ಶಿಸ್ತು ಮತ್ತು ನಾಯಕತ್ವದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಯಾವುದೇ ನಾಯಕರು ಅಥವಾ ಕಾರ್ಯಕರ್ತರು ತಮ್ಮ ನಿರ್ಧಾರಗಳನ್ನು ಪ್ರಶ್ನಿಸಬಾರದು ಮತ್ತು ಎಲ್ಲರೂ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ನಾದೇಂಡ್ಲಾ ಮನೋಹರ್ ಅವರ ಸೂಚನೆಗಳನ್ನು ಪಾಲಿಸಬೇಕು ಎಂದು ಸೂಚಿಸಿದ್ದಾರೆ.
"ಇಂದಿನಿಂದ, ಎಲ್ಲರೂ ನನ್ನ ಆಜ್ಞೆಯನ್ನು ಪಾಲಿಸಬೇಕು. ನಾನು ಪಕ್ಷದ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತೇನೆ" ಎಂದು ಅವರು ದೃಢವಾಗಿ ಹೇಳಿದರು. "ನಾನು ಕಮಾಂಡರ್. ಇನ್ನು ಮುಂದೆ ನನ್ನನ್ನು ಪ್ರಶ್ನಿಸಬೇಡಿ. ನೀವು ಪಕ್ಷದಲ್ಲಿ ಮುಂದುವರಿಯಲು ಬಯಸಿದರೆ ನನ್ನ ಆದೇಶಗಳನ್ನು ಪಾಲಿಸಿ, ಇಲ್ಲದಿದ್ದರೆ ಬಿಟ್ಟುಬಿಡಿ. ಪಕ್ಷದ ಶಿಸ್ತನ್ನು ಪಾಲಿಸದಿದ್ದರೆ ಪಕ್ಷ ಬಿಡಲು ಅವರು ಸ್ವತಂತ್ರರು ಎಂದು ಹೇಳಿದ್ದಾರೆ.
ಇದೇ ವೇಳೆ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಪ್ರಚಾರ ಮಾಡುವುದನ್ನು ಖಂಡಿಸಿದರು. ವಿಶೇಷವಾಗಿ ರಾಜಕೀಯ ವಿಶ್ಲೇಷಕ ಮತ್ತು ಮಾಜಿ ಎಂಎಲ್ಸಿ ಪ್ರೊ. ನಾಗೇಶ್ವರ್ ಅವರು ವೈ ಎಸ್ ಜಗನ್ ಮೋಹನ್ ರೆಡ್ಡಿ ಬಂಧನದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಚರ್ಚಿಸಿದ್ದರು ಎಂಬುದು ನಾನ್ ಸೆನ್ಸ್. ಅಂತಹ ಆರೋಪಗಳು ಅಸಂಬದ್ಧ ಮತ್ತು ಆಧಾರರಹಿತವಾಗಿವೆ" ಎಂದು ಅವರು ಹೇಳಿದರು.
ಅಮಿತ್ ಷಾ ಅವರೊಂದಿಗಿನ ತಮ್ಮ ಚರ್ಚೆಗಳು ಆಂಧ್ರ ಪ್ರದೇಶದ ಬೆಳವಣಿಗೆಯ ಮೇಲೆ ಮಾತ್ರ ಕೇಂದ್ರೀಕರಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.
Advertisement