

ಅಹಮದಾಬಾದ್: ಗುಜರಾತ್ನ ಗಿರ್ ಸೋಮನಾಥ್ ಮತ್ತು ಅಮ್ರೇಲಿ ಜಿಲ್ಲೆಗಳಲ್ಲಿ ಶಂಕಿತ 'ಬಾಬೇಸಿಯಾ' ಸೋಂಕಿನಿಂದ ಎಂಟು ಸಿಂಹದ ಮರಿಗಳು ಸಾವನ್ನಪ್ಪಿವೆ ಎಂದು ರಾಜ್ಯ ಅರಣ್ಯ ಸಚಿವ ಅರ್ಜುನ್ ಮೋಧ್ವಾಡಿಯಾ ಅವರು ಶುಕ್ರವಾರ ತಿಳಿಸಿದ್ದಾರೆ.
ಸೋಂಕು ಹರಡುವುದನ್ನು ತಡೆಗಟ್ಟಲು, ಸೋಂಕು ವರದಿಯಾದ ಪ್ರದೇಶಗಳ 10 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಸಿಂಹಗಳನ್ನು ಅಧಿಕಾರಿಗಳು ಪ್ರತ್ಯೇಕಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
"ಬಾಬೇಸಿಯಾ ಸಂಬಂಧಿತ ಶಂಕಿತ ಪ್ರಕರಣಗಳಲ್ಲಿ, ಎಂಟು ಸಿಂಹದ ಮರಿಗಳ ಸಾವು ಬೆಳಕಿಗೆ ಬಂದಿದೆ" ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.
ಪರಾವಲಂಬಿ ಕಾಯಿಲೆಯಾದ ಬಾಬೇಸಿಯಾ, ಉಣ್ಣಿಗಳ ಮೂಲಕ ಹರಡುತ್ತದೆ ಮತ್ತು ಪೀಡಿತ ಪ್ರಾಣಿಗಳಲ್ಲಿ ದೌರ್ಬಲ್ಯ, ಕೆಮ್ಮು ಹಾಗೂ ಮೂಗಿನಿಂದ ರಕ್ತ ಸ್ರಾವವನ್ನು ಉಂಟುಮಾಡಬಹುದು.
ಗಿರ್ ಅಭಯಾರಣ್ಯದ ಹೊರಗಿನ ಕಂದಾಯ ಪ್ರದೇಶಗಳಲ್ಲಿ, ವಿಶೇಷವಾಗಿ ಗಿರ್ ಸೋಮನಾಥ್ನ ಗಿರ್ ಗಧಾಡ ಮತ್ತು ಅಮ್ರೇಲಿ ಜಿಲ್ಲೆಗಳ ಬಾಬ್ರಾ ಕೋಟ್ನಲ್ಲಿ ಶಂಕಿತ ಬಾಬೇಸಿಯಾ ಸೋಂಕಿನಿಂದ ಸಿಂಹದ ಮರಿಗಳ ಸಾವು ವರದಿಯಾಗಿದೆ ಎಂದು ಅವರು ಹೇಳಿದ್ದಾರೆ.
ಪಶುವೈದ್ಯಕೀಯ ವೈದ್ಯರ ತಂಡವು, ಮೃತ ಮರಿಗಳ ಮಾದರಿಗಳನ್ನು ಸಂಗ್ರಹಿಸಿ, ಅವುಗಳನ್ನು ಗುಜರಾತ್ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಮೋಧ್ವಾಡಿಯಾ ತಿಳಿಸಿದ್ದಾರೆ.
Advertisement