

ಪುಣೆ: ಅಗತ್ಯವಿದ್ದಲ್ಲಿ 'ಆಪರೇಷನ್ ಸಿಂದೂರ್ 2.0'ಗೆ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ಹೇಳಿದ್ದಾರೆ.
ಭೂ ಸೇನೆ, ವಾಯುಪಡೆ ಮತ್ತು ನೌಕಾಪಡೆಗಳನ್ನು ಮೀರಿದ ಆಧುನಿಕ ಮಲ್ಟಿ-ಡೊಮೇನ್ ಯುದ್ಧಕ್ಕಾಗಿ ಈ ಮೂರು ಸೇವೆಗಳು ಸಿನರ್ಜಿಯನ್ನು ಹೆಚ್ಚಿಸುತ್ತಿವೆ ಎಂದು ದ್ವಿವೇದಿ ಪ್ರತಿಪಾದಿಸಿದರು.
ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್ಡಿಎ)ಯಲ್ಲಿ ನಡೆದ 150ನೇ ಕೋರ್ಸ್ನ ಪಾಸಿಂಗ್-ಔಟ್ ಪೆರೇಡ್ನ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಜನರಲ್ ದ್ವಿವೇದಿ, ಪ್ರಸ್ತುತ ಯುದ್ಧದ ಪರಿಸ್ಥಿತಿ ಇಲ್ಲವಾದರೂ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಮೂರು ಸೇನೆಗಳು ತೀವ್ರ ತಯಾರಿ ನಡೆಸುತ್ತಿವೆ ಎಂದು ಹೇಳಿದರು.
ಏಪ್ರಿಲ್ನಲ್ಲಿ 26 ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಮೇ 2025 ರಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಮಾಡಲು ಆಪರೇಷನ್ ಸಿಂದೂರ್ ಎಂಬ ಮಿಲಿಟರಿ ಕಾರ್ಯಾಚರಣೆ ನಡೆಸಿತು.
ಆಪರೇಷನ್ ಸಿಂದೂರ್ ಇನ್ನು ಮುಂದುವರೆಯುತ್ತಿದೆ. ಇದು ತಾತ್ಕಾಲಿಕವಾಗಿ ನಿಂತಿದೆ. ಭಾರತೀಯ ಸೇನೆ ಮತ್ತು ಎಲ್ಲಾ ಮೂರು ಸೇನೆಗಳು ಕೂಡ ಆಪರೇಷನ್ ಸಿಂದೂರ್ 2.0 ಅಗತ್ಯಬಿದ್ದಲ್ಲಿ ಅದಕ್ಕೆ ಸೂಕ್ತ ಸಿದ್ಧತೆ ನಡೆಸುತ್ತಿವೆ. ಸದ್ಯ ನಾವು ನಮ್ಮ ಮೂರು ಸೇನೆಗಳಲ್ಲಿ ನಮ್ಮ ಸಿನರ್ಜಿಯನ್ನು ಹೆಚ್ಚಿಸುವತ್ತ ಗಮನಹರಿಸುತ್ತಿದ್ದೇವೆ. ಮುಂದಿನ ಯುದ್ಧಕ್ಕೆ ನಮ್ಮನ್ನು ಸಜ್ಜುಗೊಳಿಸಿಕೊಳ್ಳುತ್ತಿದ್ದೇವೆ ಎಂದರು.
ಭವಿಷ್ಯದ ಸಂಘರ್ಷಗಳು ಬಾಹ್ಯಾಕಾಶ, ಸೈಬರ್ ಮತ್ತು ಅರಿವಿನ ಯುದ್ಧದಂತಹ ಉದಯೋನ್ಮುಖ ಕ್ಷೇತ್ರಗಳಿಂದ ಹೆಚ್ಚು ಪ್ರಭಾವಿತವಾಗುತ್ತವೆ ಎಂದು ಅವರು ಹೇಳಿದರು.
ಯುದ್ಧಭೂಮಿ ಎಷ್ಟು ಪಾರದರ್ಶಕವಾಗಿದೆಯೆಂದರೆ ಪ್ರತಿಯೊಂದು ಚಲನವಲನವೂ ಇನ್ನೊಂದು ಬದಿಗೆ ತಿಳಿದಿದೆ. ಆದ್ದರಿಂದ, ನಮ್ಮ ನಿಯೋಜನೆ, ಉದ್ಯೋಗ ಮತ್ತು ಗಡಿ ಪ್ರದೇಶಗಳಲ್ಲಿನ ನಮ್ಮ ಪಡೆಗಳನ್ನು ಹಾಗೂ ನಾಗರಿಕರನ್ನು ರಕ್ಷಿಸಲು ಅಗತ್ಯವಿರುವ ರಕ್ಷಣೆಯ ವಿಷಯದಲ್ಲಿ ನಾವು ಬಹಳ ಜಾಗರೂಕರಾಗಿರಬೇಕು ಎಂದರು.
Advertisement