

ಸಹರಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹರಾನ್ಪುರದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯ ಕರೆನ್ಸಿ ಚೆಸ್ಟ್ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿರುವ ಆಘಾತಕಾರಿ ಹಗರಣ ಬಯಲಾಗಿದೆ. ಅದರಂತೆ, ತನಿಖೆಯಲ್ಲಿ ₹7.40 ಕೋಟಿ ನಕಲಿ ನೋಟುಗಳು ಪತ್ತೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಪ್ರಕರಣ?
ಪಿಎನ್ಬಿ ಮುಖ್ಯ ವ್ಯವಸ್ಥಾಪಕಿ ನಿಶಾ ಸಿಂಗ್ ಪ್ರಕಾರ, ಆಗಸ್ಟ್ 10 ರಂದು ಸಹರಾನ್ಪುರದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಭಾರತೀಯ ರಿಸರ್ವ್ ಬ್ಯಾಂಕ್ಗೆ ಕಳುಹಿಸಲಾದ ನಗದು ಪಾವತಿಯಲ್ಲಿ ₹4.36 ಲಕ್ಷ ಹಣ ಕಡಿಮೆ ಇರುವುದು ಪತ್ತೆಯಾಗಿತ್ತು. ಇದರ ಬೆನ್ನತ್ತಿದ ಆರ್ಬಿಐ ಕಟ್ಟುನಿಟ್ಟಿನ ಆಡಿಟ್ ನಡೆಸಲು ಸೂಚಿಸಿತು. ಅದರಂತೆ, ಬ್ಯಾಂಕ್ನಲ್ಲಿ ಆಡಿಟ್ ತಂಡವು ತಪಾಸಣೆ ನಡೆಸಿದಾಗ, ಕರೆನ್ಸಿ ಚೆಸ್ಟ್ನಲ್ಲಿದ್ದ ಅಸಲಿ ನೋಟುಗಳನ್ನು ಯಾರಿಗೂ ತಿಳಿಯದಂತೆ ಸಾಗಿಸಿ, ಅವುಗಳ ಜಾಗದಲ್ಲಿ ಕಳಪೆ ಗುಣಮಟ್ಟದ ಕೋಟ್ಯಂತರ ರೂಪಾಯಿ ನಕಲಿ ನೋಟುಗಳನ್ನು ಜೋಡಿಸಿಟ್ಟಿರುವುದು ಪತ್ತೆಯಾಗಿದೆ.
ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ಹೌಸ್ಕೀಪರ್
ಬ್ಯಾಂಕ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಲ್ಲಿ ಪಾರ್ಟ್-ಟೈಮ್ ಹೌಸ್ಕೀಪರ್ ಆಗಿ ಕೆಲಸ ಮಾಡುತ್ತಿದ್ದ ವಿಶಾಲ್ ಕುಮಾರ್ ಎಂಬಾತ ನೋಟುಗಳ ಕಂತೆಗಳಿಂದ ಅಸಲಿ ಹಣವನ್ನು ಕಳ್ಳತನ ಮಾಡುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಅದರಂತೆ, ಆತನ ವಿರುದ್ಧ ಪ್ರತ್ಯೇಕ ಕಳ್ಳತನದ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಬ್ಯಾಂಕ್ ಒಳಗಿನವರ ಸಾಥ್ ಇಲ್ಲದೆ ಇಷ್ಟು ದೊಡ್ಡ ಹಗರಣ ಸಾಧ್ಯವಿಲ್ಲದ ಕಾರಣ, ಬ್ಯಾಂಕ್ನ ಸೀನಿಯರ್ ಡಿವಿಜನಲ್ ಮ್ಯಾನೇಜರ್ ರವಿ ಕುಮಾರ್, ಕರೆನ್ಸಿ ಚೆಸ್ಟ್ ಮ್ಯಾನೇಜರ್ಗಳಾದ ಸುಶೀಲ್ ಶರ್ಮಾ ಮತ್ತು ಅಮಿತ್ ಕುಮಾರ್ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ.
ಮುಂದುವರೆದು, ಇಷ್ಟು ದೊಡ್ಡ ಪ್ರಮಾಣದ ನಕಲಿ ನೋಟುಗಳು ಬ್ಯಾಂಕ್ನ ಸುರಕ್ಷಿತ ಕರೆನ್ಸಿ ಚೆಸ್ಟ್ಗೆ ಹೇಗೆ ಸೇರಿದವು ಮತ್ತು ಇದರ ಹಿಂದೆ ಯಾವ ಅಂತಾರಾಷ್ಟ್ರೀಯ ಅಥವಾ ದೇಶೀಯ ಜಾಲವಿದೆ ಎಂಬುದನ್ನು ಪತ್ತೆಹಚ್ಚಲು ಉತ್ತರ ಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ. ಆದಾಗ್ಯೂ, ಈ ನಕಲಿ ನೋಟುಗಳು ಸಾರ್ವಜನಿಕ ಚಲಾವಣೆಗೆ ಹೋಗಿಲ್ಲ ಮತ್ತು ಬ್ಯಾಂಕ್ನ ಕರೆನ್ಸಿ ಚೆಸ್ಟ್ನಲ್ಲೇ ಪತ್ತೆಯಾಗಿವೆ ಎಂದು ಪಿಎನ್ಬಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸಹರಾನ್ಪುರ ಎಸ್ಎಸ್ಪಿ ಅಭಿನಂದನ್, ನಗದು ಹೊಂದಾಣಿಕೆ ಮಾಡುವಾಗ ಲೆಕ್ಕಪರಿಶೋಧನಾ ತಂಡವು 7.40 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ಪತ್ತೆಹಚ್ಚಿದ್ದು, ಅದರಂತೆ, ಹಿರಿಯ ಬ್ಯಾಂಕ್ ಅಧಿಕಾರಿಯಿಂದ ಪೊಲೀಸರು ದೂರು ಸ್ವೀಕರಿಸಿದ್ದಾರೆ ಎಂದು ತಿಳಿಸಿದರು.