

ಕೋಲ್ಕತ್ತಾ: ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬಿಜೆಪಿ ಗೂಂಡಾಗಳು ಗುರುವಾರ ಬೆಳಗ್ಗೆ ಕೋಲ್ಕತ್ತಾದ ಕ್ಯಾಮಕ್ ಸ್ಟ್ರೀಟ್ ನಲ್ಲಿರುವ ಟಿಎಂಸಿ ಕಚೇರಿಗೆ ನುಗ್ಗಿ, ಧ್ವಂಸ ಮಾಡಿದ್ದಾರೆ ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅಭಿಷೇಕ್ ಬ್ಯಾನರ್ಜಿ, ಬಿಜೆಪಿ ಗೂಂಡಾಗಳು ಕಚೇರಿಯನ್ನು ದೋಚಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಾಶಪಡಿಸಿದ್ದಾರೆ. ಈ ಘಟನೆಯನ್ನು "ಪ್ರಜಾಪ್ರಭುತ್ವದ ಮೇಲಿನ ದಾಳಿ" ಎಂದು ಟೀಕಿಸಿದ್ದಾರೆ.
ಪಕ್ಷದ ಕಾರ್ಯಕರ್ತರು ಮತ್ತು ವಕೀಲರಿಂದ ಪದೇ ಪದೇ ಕರೆಗಳು ಹಾಗೂ ಇಮೇಲ್ ಮಾಡಿದ್ದರ ಹೊರತಾಗಿಯೂ, ಕೋಲ್ಕತ್ತಾ ಪೊಲೀಸರು ಸುಮಾರು ಎರಡು ಗಂಟೆಗಳ ಕಾಲ ಸ್ಥಳಕ್ಕೆ ಬರಲಿಲ್ಲ. ಈ ವಿಳಂಬ "ಅತಿರೇಕ ಮತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಈ ದಾಳಿಯಲ್ಲಿ ಭಾಗಿಯಾಗಿರುವ ಎಲ್ಲರನ್ನು ತಕ್ಷಣ ಬಂಧಿಸಬೇಕು ಮತ್ತು ಹಿಂಸಾಚಾರವನ್ನು ಯಾರು ಯೋಜಿಸಿದರು, ಸಂಘಟಿಸಿದರು ಮತ್ತು ನಿರ್ದೇಶಿಸಿದರು ಎಂಬುದರ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಅಭಿಷೇಕ್ ಬ್ಯಾನರ್ಜಿ ಒತ್ತಾಯಿಸಿದ್ದಾರೆ.