ಸೆ. 9ರಂದು ಗೃಹ ಸಚಿವಾಲಯದೊಂದಿಗೆ ಮಾತುಕತೆಗೆ ಮುನ್ನ ಹೋರಾಟ ತೀವ್ರ: ಲಡಾಖ್ ಉನ್ನತ ಮಂಡಳಿ ಎಚ್ಚರಿಕೆ

2019ರ ಆಗಸ್ಟ್‌ನಲ್ಲಿ ಲಡಾಖ್‌ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಿದ ಬಳಿಕ ಎಲ್ ಎಬಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (KDA) ಈ ಬೇಡಿಕೆಗಳೊಂದಿಗೆ ಜಂಟಿಯಾಗಿ ಹೋರಾಟ ನಡೆಸುತ್ತಿವೆ. 2021ರಿಂದ ಕೇಂದ್ರ ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆಗಳನ್ನೂ ನಡೆಸಿವೆ.
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ತಮ್ಮ ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರ ‘ಸ್ಪಷ್ಟ’ ಪ್ರಗತಿ ಸಾಧಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಲಡಾಖ್ ಉನ್ನತ ಮಂಡಳಿ (LAB) ಎಚ್ಚರಿಕೆ ನೀಡಿದೆ. ಕೇಂದ್ರ ಗೃಹ ಸಚಿವಾಲಯದ (MHA) ಉಪ ಸಮಿತಿಯೊಂದಿಗೆ ಸೆಪ್ಟೆಂಬರ್ 9ರಂದು ದೆಹಲಿಯಲ್ಲಿ ನಡೆಯಲಿರುವ ಸಭೆಗೆ ಮುನ್ನ LAB ಈ ಎಚ್ಚರಿಕೆ ನೀಡಿದೆ.

ಕೇಂದ್ರಾಡಳಿತ ಪ್ರದೇಶದ ಮಟ್ಟದಲ್ಲಿ ಲಡಾಖ್‌ಗೆ ಶಾಸನಾತ್ಮಕ ಅಧಿಕಾರ ಕಲ್ಪಿಸುವುದು, ಸಂವಿಧಾನದ 371ನೇ ವಿಧಿಯಡಿ ರಕ್ಷಣೆ ಕಲ್ಪಿಸುವುದು, ಕಳೆದ ವರ್ಷ ಸೆಪ್ಟೆಂಬರ್ 24ರಂದು ನಡೆದ ಹಿಂಸಾಚಾರದ ಬಳಿಕ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯುವುದು, ಸಂತ್ರಸ್ತರಿಗೆ ಪರಿಹಾರ ನೀಡುವುದು ಹಾಗೂ ತನಿಖಾ ಆಯೋಗದ ವರದಿಯನ್ನು ಪ್ರಕಟಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಎಲ್ ಎಬಿ ಮುಂದಿಟ್ಟಿದೆ.

2019ರ ಆಗಸ್ಟ್‌ನಲ್ಲಿ ಲಡಾಖ್‌ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಿದ ಬಳಿಕ ಎಲ್ ಎಬಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (KDA) ಈ ಬೇಡಿಕೆಗಳೊಂದಿಗೆ ಜಂಟಿಯಾಗಿ ಹೋರಾಟ ನಡೆಸುತ್ತಿವೆ. 2021ರಿಂದ ಕೇಂದ್ರ ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆಗಳನ್ನೂ ನಡೆಸಿವೆ.

Representational image
ಲಡಾಕ್ ಲಡಾಯಿ: ಅಕ್ಟೋಬರ್ 7 ಮಾತುಕತೆಗೆ ಮುನ್ನ ಪೂರ್ವ ಸಿದ್ಧತಾ ಸಭೆಗೆ ಗೃಹ ಸಚಿವಾಲಯ ಕರೆ

ಎಲ್ ಎಬಿ ಅಧ್ಯಕ್ಷ ತ್ಸೆರಿಂಗ್ ಡೋರ್ಜೆ ಲಕ್ರುಕ್, ಕೇಂದ್ರ ಗೃಹ ಸಚಿವಾಲಯದೊಂದಿಗೆ ನಡೆಯಲಿರುವ ಸಭೆಯನ್ನು ಸ್ವಾಗತಿಸುವುದಾಗಿ, ಆದರೆ ಮಾತುಕತೆಯ ಫಲಿತಾಂಶದ ಆಧಾರದ ಮೇಲೆ ಸಭೆಯನ್ನು ಮೌಲ್ಯಮಾಪನ ಮಾಡುವುದಾಗಿ ಹೇಳಿದರು.

ಸಭೆಯಲ್ಲಿ ಸಕಾರಾತ್ಮಕ ಫಲಿತಾಂಶ ಬಂದರೆ, ಈ ವಿಚಾರಗಳ ಕುರಿತು ರಚನಾತ್ಮಕ ಹಾಗೂ ಫಲಪ್ರದ ಮಾತುಕತೆ ನಡೆದರೆ ನಾವು ಅದನ್ನು ಸ್ವಾಗತಿಸುತ್ತೇವೆ. ಇಲ್ಲದಿದ್ದರೆ ನಮ್ಮ ಹೋರಾಟವನ್ನು ಅತ್ಯಂತ ತೀವ್ರವಾಗಿ ಮುಂದುವರಿಸುತ್ತೇವೆ ಎಂದು ಹೇಳಿದರು.

ಕಳೆದ ವರ್ಷ ಸೆಪ್ಟೆಂಬರ್ 24ರಂದು ನಡೆದ ಘಟನೆಗಳ ತನಿಖೆಗೆ ರಚಿಸಲಾಗಿದ್ದ ತನಿಖಾ ಆಯೋಗದ ವರದಿ ವಿಳಂಬವಾಗುತ್ತಿರುವುದಕ್ಕೂ ಲಕ್ರುಕ್ ಅಸಮಾಧಾನ ವ್ಯಕ್ತಪಡಿಸಿದರು. ಆ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದರು.

ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈ 20ರಂದು ನಡೆದ ಘಟನೆಯ ಬಳಿಕ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂಬ ವರದಿಯನ್ನು ಸ್ವಾಗತಿಸಿದ ಅವರು, ಲಡಾಖ್ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಕಳೆದ ವರ್ಷದ ಹಿಂಸಾಚಾರಕ್ಕೆ ಸಂಬಂಧಿಸಿದ 80 ಪ್ರಕರಣಗಳ ಪೈಕಿ ಈವರೆಗೆ ಕೇವಲ 25 ಪ್ರಕರಣಗಳನ್ನು ಮಾತ್ರ ಹಿಂಪಡೆಯಲಾಗಿದೆ ಎಂದು ಲಕ್ರುಕ್ ತಿಳಿಸಿದರು.

ನಾವೆಲ್ಲರೂ ಭಾರತೀಯರು. ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು. ಲಡಾಖ್ ಜನರ ಜೀವಗಳು ಅಷ್ಟು ಅಗ್ಗವಾಗಿಲ್ಲ ಎಂದು ಅವರು ಹೇಳಿದರು. ಹೋರಾಟದಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಈ ಮಧ್ಯೆ, ಹವಾಮಾನ ಹೋರಾಟಗಾರ ಸೋನಂ ವಾಂಗ್‌ಚುಕ್ ಅವರು ಕಳೆದ ವರ್ಷ ಮೃತಪಟ್ಟವರು, ಗಾಯಗೊಂಡವರು ಮತ್ತು ಜೈಲು ಪಾಲಾದವರ ಸ್ಮರಣಾರ್ಥ ಸೆಪ್ಟೆಂಬರ್ ತಿಂಗಳನ್ನು LAB ‘ಹುತಾತ್ಮರ ತಿಂಗಳು’ ಆಗಿ ಆಚರಿಸುತ್ತಿದೆ ಎಂದು ಹೇಳಿದರು.

ಸೆಪ್ಟೆಂಬರ್ 10ರಂದು ಆರಂಭವಾಗಬೇಕಿದ್ದ ಕಾರ್ಗಿಲ್‌ನಿಂದ ಲೇಹ್‌ವರೆಗೆ ಉದ್ದೇಶಿತ ಪಾದಯಾತ್ರೆಯನ್ನು, ಅದಕ್ಕೂ ಒಂದು ದಿನ ಮುನ್ನ ನಡೆಯಲಿರುವ ಕೇಂದ್ರ ಗೃಹ ಸಚಿವಾಲಯದ ಮಾತುಕತೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ವಾಂಗ್‌ಚುಕ್ ತಿಳಿಸಿದರು.

ಸದ್ಯಕ್ಕೆ ಪಾದಯಾತ್ರೆಯನ್ನು ಮುಂದೂಡಲು ನಾವು ಒಟ್ಟಾಗಿ ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.

ಸೆಪ್ಟೆಂಬರ್ 9ರ ಮಾತುಕತೆ ತೃಪ್ತಿಕರ ಫಲಿತಾಂಶ ನೀಡದಿದ್ದರೆ ಪಾದಯಾತ್ರೆಯನ್ನು ಮತ್ತೆ ಆರಂಭಿಸಬಹುದು. ಪರಿಸ್ಥಿತಿ ಹಾಗೆ ಮುಂದುವರಿದರೆ ಸೆಪ್ಟೆಂಬರ್ 24ಕ್ಕೆ ಸುಮಾರು ಐದು ದಿನಗಳ ಮುನ್ನ ಪಾದಯಾತ್ರೆ ಆಯೋಜಿಸಲಾಗುವುದು ಎಂದರು.

ಲಡಾಖ್‌ಗೆ ಬೆಂಬಲವಾಗಿ, ಪರಿಸರಕ್ಕೆ ಬೆಂಬಲವಾಗಿ ಹಾಗೂ ದೇಶದ ಗಡಿಗಳಲ್ಲಿ ದೃಢವಾಗಿ ನಿಂತಿರುವ ಲಡಾಖ್ ಜನರಿಗೆ ಬೆಂಬಲವಾಗಿ ಭಾರತದಾದ್ಯಂತ ಜನರು ಮುಂದೆ ಬರುವಂತೆ ಮತ್ತೊಮ್ಮೆ ಮನವಿ ಮಾಡುತ್ತೇವೆ ಎಂದು ವಾಂಗ್‌ಚುಕ್ ಹೇಳಿದರು.

ಪ್ರಸ್ತಾವಿತ ಲಡಾಖ್ ವಿಧಾನಸಭೆಯ ಅಧಿಕಾರಗಳು ಮತ್ತು ಹಕ್ಕುಗಳನ್ನು ಒಳಗೊಂಡ ವಿವರವಾದ ಕರಡು ಪ್ರಸ್ತಾವನೆಯನ್ನು ಸೆಪ್ಟೆಂಬರ್ 9ರ ಸಭೆಗೆ ಸರ್ಕಾರ ತರಬೇಕು ಎಂದು ಅಪೆಕ್ಸ್ ಬಾಡಿ ನಿರೀಕ್ಷಿಸುತ್ತಿದೆ ಎಂದು ಅವರು ಹೇಳಿದರು.

ಈ ವಿಚಾರಗಳಲ್ಲಿ ಪ್ರಗತಿ ಕಂಡುಬಂದರೆ ಮಾತುಕತೆ ಯಶಸ್ವಿಯಾಗಿದೆ ಎಂದು ನಾವು ಪರಿಗಣಿಸುತ್ತೇವೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com