

ಭುವನೇಶ್ವರ: ಸಾಹಿತ್ಯ ಮತ್ತು ಕಾವ್ಯದ ಶ್ರೇಷ್ಠ ಕೃತಿಗಳು ಜನರಿಗೆ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ನೆಮ್ಮದಿಯನ್ನು ನೀಡುತ್ತವೆ. ವಿಶೇಷವಾಗಿ ಕಷ್ಟಕರ ಹಾಗೂ ಆತಂಕದ ಸಂದರ್ಭಗಳಲ್ಲಿ ಅವು ಸಾಂತ್ವನ ನೀಡುತ್ತವೆ ಎಂದು ಹಿರಿಯ ರಾಜಕಾರಣಿ, ವಿದ್ವಾಂಸ ಹಾಗೂ ಕೇರಳ ಮತ್ತು ಬಿಹಾರದ ಮಾಜಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಭುವನೇಶ್ವರದ ಹೊಟೇಲ್ ಮೇಫೇರ್ ಕನ್ವೆನ್ಷನ್ನಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್(The New Indian Express) ಆಯೋಜಿಸಿರುವ 14ನೇ ಒಡಿಶಾ ಲಿಟರರಿ ಫೆಸ್ಟಿವಲ್ (OLF)(ಒಡಿಶಾ ಸಾಹಿತ್ಯ ಉತ್ಸವ) ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ TNIE ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಗ್ರೂಪ್ ಸಿಇಒ ಲಕ್ಷ್ಮಿ ಮೆನನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಸಾಹಿತ್ಯ ನಮಗೆ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ನೆಮ್ಮದಿ ನೀಡುತ್ತದೆ. ಕಷ್ಟದ ಸಂದರ್ಭಗಳಲ್ಲಿ, ನಾವು ಆತಂಕಕ್ಕೊಳಗಾದಾಗ, ಸಾಹಿತ್ಯ ಮತ್ತು ಕಾವ್ಯದ ಶ್ರೇಷ್ಠ ಕೃತಿಗಳತ್ತ ಮುಖ ಮಾಡುತ್ತೇವೆ. ಅವು ಮನಸ್ಸಿಗೆ ಸಾಂತ್ವನ ನೀಡುತ್ತವೆ. ಅವು ಕೇವಲ ನಮ್ಮನ್ನು ಮನರಂಜಿಸುವುದಷ್ಟೇ ಅಲ್ಲ ಎಂದು ಹೇಳಿದರು.
ಬರಹಗಾರರು ಮತ್ತು ಕವಿಗಳಿಗೆ ಸ್ಫೂರ್ತಿ ನೀಡುವ ಅಂಶಗಳ ಕುರಿತು ಮಾತನಾಡಿದ ಅವರು, ಭಾವನಾತ್ಮಕ ಅಥವಾ ಆಧ್ಯಾತ್ಮಿಕ ನೋವು ವ್ಯಕ್ತಿಯೊಬ್ಬರನ್ನು ಲೇಖಕ ಅಥವಾ ಕವಿಯನ್ನಾಗಿ ರೂಪಿಸುವ ಸಂದರ್ಭಗಳಿವೆ. ಆದರೆ ಇಂತಹ ನೋವನ್ನು ವ್ಯಕ್ತಿಯೊಬ್ಬರು ಸ್ವತಃ ಅನುಭವಿಸಲೇಬೇಕು ಎಂದೇನಿಲ್ಲ ಎಂದು ಹೇಳಿದರು.
ಸೂಕ್ಷ್ಮ ಮನಸ್ಸಿನವರಿಗೆ ನಮ್ಮ ಸುತ್ತಮುತ್ತ ನಡೆಯುತ್ತಿರುವ ಅನೇಕ ಘಟನೆಗಳು ಮನಸ್ಸಿನ ಸಾಕ್ಷಿಯನ್ನು ಕದಡುತ್ತವೆ. ಅವುಗಳ ಬಗ್ಗೆ ನಮಗೆ ಕಾಳಜಿ ಮೂಡುತ್ತದೆ. ಇದರಿಂದ ನಾವು ಆ ಘಟನೆಗಳ ಭಾಗವಾಗುತ್ತೇವೆ ಎಂದು ಅವರು ಹೇಳಿದರು. ರಾಮಾಯಣ ರಚಿಸಿದ ಆದಿಕವಿ ವಾಲ್ಮೀಕಿ ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದು ಅವರು ಉಲ್ಲೇಖಿಸಿದರು.
ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ಪರಿಚಯಿಸಿಕೊಳ್ಳಲು ಮತ್ತು ಅವುಗಳಲ್ಲಿ ಆಸಕ್ತಿ ಹೊಂದಿರುವವರೊಂದಿಗೆ ಸಂವಾದ ನಡೆಸಲು ಸಾಹಿತ್ಯ ಉತ್ಸವಗಳು ಪ್ರಮುಖ ವೇದಿಕೆಯನ್ನು ಒದಗಿಸುತ್ತವೆ ಎಂದು ಹೇಳಿದರು.
ಜ್ಞಾನಾನ್ವೇಷಣೆ ಮತ್ತು ಜೀವನದ ಉದ್ದೇಶದ ಬಗ್ಗೆಯೂ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರನ್ನು ಉಲ್ಲೇಖಿಸಿದ ಆರಿಫ್ ಮೊಹಮ್ಮದ್ ಖಾನ್, ಜೀವನದ ಉದ್ದೇಶ ಜ್ಞಾನಾನ್ವೇಷಣೆಯಾಗಿದ್ದು, ಜ್ಞಾನದ ಉದ್ದೇಶವು ಬಾಹ್ಯವಾಗಿ ಕಾಣುವ ವೈವಿಧ್ಯತೆಯ ಹಿಂದೆ ಅಡಗಿರುವ ಆಂತರಿಕ ಏಕತೆಯನ್ನು ಗುರುತಿಸುವ ಸಾಮರ್ಥ್ಯ ಮತ್ತು ಪ್ರಾವೀಣ್ಯವನ್ನು ಬೆಳೆಸುವುದಾಗಿದೆ ಎಂದು ಹೇಳಿದರು.
ಇಲ್ಲಿ ಈ ಸಭಾಂಗಣದಲ್ಲಿ ಕುಳಿತಿರುವ ಪ್ರತಿಯೊಬ್ಬರನ್ನೂ ನಾವು ನೋಡುತ್ತಿದ್ದೇವೆ. ವಿಭಿನ್ನ ರೂಪ-ಲಕ್ಷಣಗಳನ್ನು ಹೊಂದಿರುವವರು, ಬೇರೆ ಬೇರೆ ಭಾಷೆಗಳನ್ನು ಮಾತನಾಡುವವರು ಮತ್ತು ವಿಭಿನ್ನ ಆಹಾರ ಪದ್ಧತಿಗಳನ್ನು ಅನುಸರಿಸುವವರು ಇಲ್ಲಿದ್ದಾರೆ. ಬಾಹ್ಯವಾಗಿ ಕಾಣುವ ಈ ವೈವಿಧ್ಯತೆಯ ಹಿಂದೆ ಇರುವ ಆಂತರಿಕ ಏಕತೆಯನ್ನು ಗುರುತಿಸುವ ಸಾಮರ್ಥ್ಯವನ್ನು ಬೆಳೆಸುವುದೇ ಜ್ಞಾನದ ಉದ್ದೇಶ ಎಂದು ಅವರು ಹೇಳಿದರು.
ಈ ಅರಿವು ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯದ ವಿಶಿಷ್ಟ ಲಕ್ಷಣವಾಗಿದೆ. ಪ್ರತಿಯೊಂದು ಸಂಸ್ಕೃತಿಯೂ ‘ಅಹಂ ಬ್ರಹ್ಮಾಸ್ಮಿ’ ಅಥವಾ ‘ನಾನೇ ದೇವರು’ ಎಂದು ಹೇಳುತ್ತದೆ. ಆದರೆ ಭಾರತೀಯ ಸಂಸ್ಕೃತಿ ‘ಅಹಂ ಬ್ರಹ್ಮಾಸ್ಮಿ’ ಜೊತೆಗೆ ‘ತತ್ ತ್ವಂ ಅಸಿ’ ಎನ್ನುತ್ತದೆ—ನಾನು ಏನಾಗಿದ್ದೇನೆಯೋ, ನೀನೂ ಅದೇ ಎಂದು ಅವರು ಹೇಳಿದರು.
ಸ್ವಾಗತ ಭಾಷಣದಲ್ಲಿ TNIE ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ, ಒಡಿಶಾ ಭಾರತದ ಬೌದ್ಧಿಕ ರಾಜಧಾನಿಯಾಗಿದ್ದು, ಇದೇ ಕಾರಣಕ್ಕೆ 14 ವರ್ಷಗಳ ಹಿಂದೆ ರಾಜ್ಯದಲ್ಲಿ ಒಡಿಶಾ ಲಿಟರರಿ ಫೆಸ್ಟಿವಲ್ ಆರಂಭಿಸಲು ಸಂಸ್ಥೆ ನಿರ್ಧರಿಸಿತು ಎಂದು ಹೇಳಿದರು.
ಒಡಿಯಾ ಸಾಹಿತ್ಯ ಜೀವಂತ ಇತಿಹಾಸವಾಗಿದೆ. ಅದರ ಶ್ರೀಮಂತಿಕೆಯ ಕಾರಣದಿಂದಾಗಿ ಒಡಿಯಾ ಭಾಷೆಗೆ 2014ರಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆಯಿತು ಎಂದು ಹೇಳಿದರು.
15ನೇ ಶತಮಾನದ ಕವಿ ಸರಳಾ ದಾಸ್ ಅವರು ಮಹಾಭಾರತವನ್ನು ಮರು ಕಥನಗೊಳಿಸಿದ ರೀತಿ ಹಾಗೂ ‘ಛ ಮಾಣ ಆಠ ಗುಂಠ’ ಮತ್ತು ‘ರೇಬತಿ’ಯಂತಹ ಕೃತಿಗಳ ಮೂಲಕ ಒಡಿಯಾ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಫಕೀರ್ ಮೋಹನ್ ಸೇನಾಪತಿ ಸೇರಿದಂತೆ ಹಲವು ಪ್ರಮುಖ ಒಡಿಯಾ ಸಾಹಿತಿಗಳ ಕೊಡುಗೆಯನ್ನು ಅವರು ಪ್ರಸ್ತಾಪಿಸಿದರು.
ಒಡಿಶಾ ಬಲಿಷ್ಠ ಮೌಖಿಕ ಸಾಹಿತ್ಯ ಪರಂಪರೆಯನ್ನೂ ಹೊಂದಿದೆ ಎಂದು ಅವರು ಹೇಳಿದರು. ಇಂದು ಮತ್ತು ನಾಳೆ ನಡೆಯುತ್ತಿರುವ ಎರಡು ದಿನಗಳ ಸಾಹಿತ್ಯ ಉತ್ಸವದಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಸಾರ್ವಜನಿಕ ಜೀವನದ ವಿವಿಧ ಕ್ಷೇತ್ರಗಳ 40ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ವಿಶೇಷವಾಗಿ ರೂಪಿಸಲಾದ 25 ಗೋಷ್ಠಿಗಳು ನಡೆಯಲಿವೆ.