

ಗುವಾಹಟಿ: ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನೇ ಕೊಲೆ ಮಾಡಿ, ರುಂಡವನ್ನು ಫ್ರಿಡ್ಜ್ ನಲ್ಲಿಟ್ಟಿದ್ದ ಪಾಪಿ ಪತಿ, ಈಗ ಪೊಲೀಸರ ಸಮ್ಮುಖದಲ್ಲೇ 'ಶೀಘ್ರದಲ್ಲೇ ಪತ್ನಿಯ ಶುಗರ್ ಡ್ಯಾಡಿಯನ್ನು ಕೊಲ್ಲುತ್ತೇನೆ' ಎಂದು ಮಂಗಳವಾರ ಬೆದರಿಕೆ ಹಾಕಿದ್ದಾನೆ.
"ನಾನು ಜೈಲಿನಿಂದ ಬಂದ ಬಳಿಕ ಆಕೆಯ(ಪತ್ನಿ) ಶುಗರ್ ಡ್ಯಾಡಿಯನ್ನು ಕೊಲ್ಲುತ್ತೇನೆ" ಎಂದು ಇಂದು ಗುವಾಹಟಿಯ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಪತ್ನಿ ಕೊಲೆ ಆರೋಪಿ ರಾಮಾನುಜ್ ಗೋಸ್ವಾಮಿ ಹೇಳಿಕೆ ನೀಡಿದ್ದಾನೆ.
ಅಸ್ಸಾಂನ ಗುವಾಹತಿಯಲ್ಲಿ ಮದುವೆಯಾಗಿ ಕೆಲವೇ ತಿಂಗಳಲ್ಲೇ 25 ವರ್ಷದ ಪತ್ನಿ ರಿಯಾ ತಾಲೂಕ್ದಾರ್ ಅವರನ್ನು ಭೀಕರವಾಗಿ ಹತ್ಯೆ ಮಾಡಿದ ರಾಮಾನುಜ್ ಗೋಸ್ವಾಮಿಯನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಅಸ್ಸಾಮೀಸ್ ಭಾಷೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋಸ್ವಾಮಿ, ತನ್ನ ಪತ್ನಿಯನ್ನು ಕೊಂದಿದ್ದು, ಜೈಲಿನಿಂದ ಬಿಡುಗಡೆಯಾದ ನಂತರ ಆಕೆಯ "ಶುಗರ್ ಡ್ಯಾಡಿ"ಯನ್ನು ಕೊಲ್ಲುವುದಾಗಿ ಹೇಳಿದ್ದಾನೆ.
ಈ ವೇಳೆ ಪತ್ರಕರ್ತರು ಪದೇ ಪದೇ ಆ ವ್ಯಕ್ತಿ("ಶುಗರ್ ಡ್ಯಾಡಿ") ಯಾರು ಎಂದು ಕೇಳಿದಾಗ, ತೀವ್ರ ಆಕ್ರೋಶಗೊಂಡ ಆರೋಪಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದನು.
ನಂತರ ಪತ್ನಿಯನ್ನು ಕೊಂದಿರುವುದಕ್ಕೆ "ನನಗೆ ಯಾವುದೇ ವಿಷಾದವಿಲ್ಲ ಮತ್ತು ಕ್ಷಮೆಯಾಚಿಸುವುದಿಲ್ಲ" ಆರೋಪಿ ತಿಳಿಸಿದನು.
ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಒಂದು ದಿನದ ನಂತರ ಮಂಗಳವಾರ ಗೋಸ್ವಾಮಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸುಮಾರು ಎರಡು ದಿನಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿ, ಭಾನುವಾರ ತಡರಾತ್ರಿ ಪೊಲೀಸರ ಮುಂದೆ ಶರಣಾಗಿದ್ದನು.