

ಡೆಹ್ರಾಡೂನ್: ಟಾಂಗಾ ಗಾಡಿಯೊಂದರ ಹುಚ್ಚಾಟಕ್ಕೆ ಹಲವರು ಗಾಯಗೊಂಡಿರುವ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ನಡೆದಿದೆ.
ಉಧಮ್ ಸಿಂಗ್ ನಗರದ ದಿನೇಶ್ ಪುರ್ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಟಾಂಗಾ ಗಾಡಿಯಲ್ಲಿ ಹೋಗುತ್ತಿದ್ದ ವೇಳೆ ಕುದುರೆ ವೇಗವಾಗಿ ಓಡಿದ್ದು, ಈ ವೇಳೆ ಟಾಂಗಾ ಚಾಲಕ ಗಾಡಿಯಿಂದ ಕೆಳಗೆ ಬಿದ್ದಿದ್ದಾನೆ.
ಅತ್ತ ಚಾಲಕ ಕೆಳಗೆ ಬೀಳುತ್ತಲೇ ಕುದುರೆ ಹುಚ್ಚಾಪಟ್ಟೆ ಓಡಿದ್ದು ಈ ವೇಳೆ ಹಲವು ಗಾಡಿಗಳಿಗೆ ಢಿಕ್ಕಿಯಾಗಿದೆ. ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಓರ್ವ ಬೈಕ್ ಸವಾರನಿಗೂ ಕುದುರೆ ಗಾಡಿ ಢಿಕ್ಕಿಯಾಗಿದ್ದು ಈ ವೇಳೆ ದ್ವಿಚಕ್ರ ವಾಹನ ಚಾಲಕ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದೆ.
ಹಠಾತ್ ರಸ್ತೆಯಲ್ಲಿ ನಿಯಂತ್ರಣವಿಲ್ಲದೆ ಕುದುರೆಗಾಡಿ ಓಡಿದ್ದರಿಂದ ವಾಹನ ಸವಾರರಲ್ಲಿ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಸಂಭವಿಸಿದ ಸರಣಿ ಡಿಕ್ಕಿಗಳಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಿಯಂತ್ರಣ ತಪ್ಪಿದ ಕುದುರೆಗಾಡಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡುವ ದೃಶ್ಯಗಳು ಗಮನ ಸೆಳೆದಿವೆ.