

ಮಧ್ಯಪ್ರದೇಶ : ಸಮುದ್ರ ಅಡ್ಡ ಬರದೇ ಇದ್ದಿದ್ದರೆ, ನೆಹರೂ-ಗಾಂಧಿ ಕುಟುಂಬದ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಲು ಅರಬ್ ದೇಶಗಳಿಗೆ ಬೇಕಾದರೂ ಹೋಗುತ್ತಿದ್ದರು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ವ್ಯಂಗ್ಯವಾಡಿದ್ದಾರೆ.
ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಅವರ ಕುಟುಂಬಗಳ ಇತರರು ದೆಹಲಿಯಿಂದ ಚುನಾವಣೆ ಎದುರಿಸಲೇ ಇಲ್ಲ. ಏಕೆಂದರೆ, ಅಲ್ಲಿನ ಜನರಿಗೆ ಅವರ ಕುಟುಂಬದ ಬಗ್ಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ, ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ಅಮೇಥಿ ಕ್ಷೇತ್ರಗಳನ್ನು ಅವರು ಆಯ್ಕೆ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಕೇರಳದ ವಯನಾಡ್ನಿಂದ ಸಂಸತ್ ಪ್ರವೇಶಿಸಿರುವುದನ್ನು ಉಲ್ಲೇಖಿಸಿ, ಆ ಕುಟುಂಬವು ಇದೀಗ ಚುನಾವಣೆಯಲ್ಲಿ ಕಣಕ್ಕಿಳಿಯಲು ಉತ್ತರ ಪ್ರದೇಶದಿಂದಲೂ ಹೊರಗೆ ಹೋಗುತ್ತಿದೆ ಎಂದು ತಿವಿದಿದ್ದಾರೆ.
ಸಮದ್ರ ಅಡ್ಡ ಬಂದಿದೆ. ಇಲ್ಲದಿದ್ದರೆ, ಈ ಕುಟುಂಬದ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಅರಬ್ ರಾಷ್ಟ್ರಗಳು ಅಥವಾ ಇನ್ಯಾವುದೋ ಪ್ರದೇಶಗಳಿಗೂ ಹೋಗುತ್ತಿದ್ದರು ಎಂದು ಜನ ಹೇಳುತ್ತಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕತ್ವವು ನ್ಯಾಯಾಂಗ ವ್ಯವಸ್ಥೆ ಹಾಗೂ ಸೇನಾ ಪಡೆಗಳನ್ನೇ ಪ್ರಶ್ನಿಸುತ್ತಿದೆ ಎಂದು ಯಾದವ್ ವಾಗ್ದಾಳಿ ನಡೆಸಿದ್ದಾರೆ. ದೇಶವು ನೂತನ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸಿಕೊಂಡು ಪ್ರಜಾಸತ್ತಾತ್ಮಕವಾಗಿ ಮುನ್ನಡೆಯುತ್ತಿದೆ. ಆದರೆ, ಅದನ್ನು ಸಹೋದರ (ರಾಹುಲ್ ಗಾಂಧಿ) ಒಪ್ಪುತ್ತಿಲ್ಲ. ಏಕೆಂದರೆ, ಆತನ ಹೆಸರೇ ಪಪ್ಪು. ಹೀಗಿರುವಾಗ ಪಪ್ಪು ಇನ್ನೇನು ಮಾಡಲು ಸಾಧ್ಯ? ಎಂದು ಕಾಲೆಳೆದಿದ್ದಾರೆ.