

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ಉಪಚುನಾವಣೆಗೆ ಹತ್ಯೆಗೀಡಾದ ಮುಖ್ಯಮಂತ್ರಿ ಸುವೇಂದು ಅಧಿಕಾರಿಯ ಮಾಜಿ ಆಪ್ತ ಸಹಾಯಕನ ತಾಯಿ ಹಸಿರಾಣಿ ರಾಥ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಬಿಜೆಪಿ ಮಂಗಳವಾರ ಘೋಷಿಸಿದೆ. ಜೊತೆಗೆ, ರೆಜಿನಗರ್ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಮುರ್ಷಿದಾಬಾದ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಸಖರವ್ ಸರ್ಕಾರ್ ಅವರನ್ನು ಕಣಕ್ಕಿಳಿಸಿದೆ.
ರಾಥ್ ಅವರ ಆಯ್ಕೆ ಪಕ್ಷದ ನಂದಿಗ್ರಾಮ್ ಪ್ರಚಾರಕ್ಕೆ ಭಾವನಾತ್ಮಕ ಆಯಾಮವನ್ನು ನೀಡಿದೆ. ಏಕೆಂದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ (TMC)ಯನ್ನು ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಅವರ ಮಗ ಚಂದ್ರನಾಥ್ ರಾಥ್ ಅವರನ್ನು ಉತ್ತರ 24 ಪರಗಣ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.
ಅಧಿಕಾರಿ ಅವರ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸಿದ್ದ ಚಂದ್ರನಾಥ್, ಮೇ 6 ರಂದು ಮಧ್ಯಮಗ್ರಾಮ್ನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದರು. ಕಾರು ಚಾಲಕ ಗಾಯಗೊಂಡಿದ್ದರು. ಆರಂಭದಲ್ಲಿ ರಾಜ್ಯ ಪೊಲೀಸ್ ಮತ್ತು ವಿಶೇಷ ತನಿಖಾ ತಂಡ (SIT) ತನಿಖೆ ನಡೆಸಿದ್ದ ಈ ಪ್ರಕರಣವನ್ನು ನಂತರ ಸಿಬಿಐ (CBI)ಗೆ ಹಸ್ತಾಂತರಿಸಲಾಯಿತು.
ನಂದಿಗ್ರಾಮ್ನಲ್ಲಿ ಹಸಿರಾಣಿ ರಾಥ್ ಅವರ ಉಮೇದುವಾರಿಕೆಯ ಬಗ್ಗೆ ಸಾಕಷ್ಟು ಊಹಾಪೋಹಗಳಿದ್ದವು. ಬಿಜೆಪಿ ಅಧಿಕೃತವಾಗಿ ಅವರ ಹೆಸರನ್ನು ಘೋಷಿಸುವ ಮುನ್ನವೇ ಮಂಗಳವಾರ ಅಲ್ಲಿನ ಸಿದ್ದೇಶ್ವರ ಶಿವ ದೇವಾಲಯ ಮತ್ತು ಜಾನಕಿನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಅವರು ಈ ವಿಷಯವನ್ನು ಖಚಿತಪಡಿಸಿದರು. ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಬೃಹತ್ ಮೆರವಣಿಗೆಯೊಂದಿಗೆ ಅವರು ಇಂದು ಹಲ್ದಿಯಾದಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಧಿಕಾರಿ ಕೂಡ ಭಾಗವಹಿಸುವ ನಿರೀಕ್ಷೆಯಿದೆ.
ಹಸಿರಾಣಿ ರಾಥ್ ರಾಜಕೀಯಕ್ಕೆ ಹೊಸಬರೇನಲ್ಲ. ತಾವು 1998 ರಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಎರಡು ಬಾರಿ ಪಂಚಾಯತ್ ಸದಸ್ಯರಾಗಿ ಮತ್ತು ಮೂರು ಬಾರಿ ಪಂಚಾಯತ್ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ತಿಳಿಸಿದ್ದಾರೆ. ಸುವೇಂದು ಅಧಿಕಾರಿ ನಮ್ಮ ಕುಟುಂಬದ ರಕ್ಷಕರು ಎಂದು ಹೇಳಿದ ಅವರು, ಪಕ್ಷವು ತಮಗೆ ವಹಿಸುವ ಯಾವುದೇ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾದ ಅಧಿಕಾರಿ, ಈ ಹಿಂದೆ ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ನಂತರ ಭವಾನಿಪುರವನ್ನು ಉಳಿಸಿಕೊಂಡು ನಂದಿಗ್ರಾಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಧಿಕಾರಿ ಆ ಸ್ಥಾನವನ್ನು ತೆರವುಗೊಳಿಸಿದ್ದರಿಂದ ಈ ಉಪಚುನಾವಣೆ ಅನೀವಾರ್ಯವಾಗಿದೆ.