ಮಾನನಷ್ಟ ಮೊಕದ್ದಮೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ UP ನ್ಯಾಯಾಲಯದಿಂದ ನೋಟಿಸ್ ಜಾರಿ!

ಈಗ ಈ ಪ್ರಕರಣದ ವಿಚಾರಣೆಯು ಅಕ್ಟೋಬರ್ 15 ರಂದು ನಡೆಯಲಿದೆ ಎಂದು ದೂರುದಾರರ ಪರ ವಕೀಲ ಮುನ್ನಾ ಸಿಂಗ್ ಪುಂಧೀರ್ ತಿಳಿಸಿದ್ದಾರೆ.
Rahul Gandhi
ರಾಹುಲ್ ಗಾಂಧಿ
Updated on

ಲಖನೌ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಹೊಸ ಅರ್ಜಿಯ ಮೇರೆಗೆ ಹತ್ರಾಸ್‌ನ ವಿಶೇಷ ನ್ಯಾಯಾಲಯವೊಂದು ಶನಿವಾರ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಈ ಪ್ರಕರಣದ ವಿಚಾರಣೆ ಶನಿವಾರ ನಡೆಯಬೇಕಿತ್ತು. ಆದರೆ ನ್ಯಾಯಾಂಗ ಅಧಿಕಾರಿ ಇಂದು ನ್ಯಾಯಾಲಯದ ಕಲಾಪ ನಡೆಸದ ಕಾರಣ ವಿಚಾರಣೆ ನಡೆಯಲಿಲ್ಲ. ಈಗ ಈ ಪ್ರಕರಣದ ವಿಚಾರಣೆಯು ಅಕ್ಟೋಬರ್ 15 ರಂದು ನಡೆಯಲಿದೆ ಎಂದು ದೂರುದಾರರ ಪರ ವಕೀಲ ಮುನ್ನಾ ಸಿಂಗ್ ಪುಂಧೀರ್ ತಿಳಿಸಿದ್ದಾರೆ.

ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಗಾಂಧಿ ಅವರಿಗೆ ನೋಟಿಸ್ ತಲುಪಿಸುವುದನ್ನು ನ್ಯಾಯಾಲಯವು ಅಂಗೀಕರಿಸಿತ್ತು ಎಂದು ಅವರು ತಿಳಿಸಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ನೇತೃತ್ವದ ಸಂಸದರು ಮತ್ತು ಶಾಸಕರ (MP-MLA) ವಿಶೇಷ ನ್ಯಾಯಾಲಯವು ಮೇ 13 ರಂದು ನೀಡಿದ ಆದೇಶದಲ್ಲಿ ಗಾಂಧಿ ಅವರ ವಿರುದ್ಧದ ದೂರುಗಳನ್ನು ವಜಾಗೊಳಿಸಿತ್ತು. ಹೊಸ ಅರ್ಜಿ ಅಂಗೀಕಾರಗೊಂಡ ನಂತರ, ಈ ವಿಷಯವು ಈಗ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿಜಯ್ ಕುಮಾರ್ II ಅವರ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿದೆ.

ಸೆಪ್ಟೆಂಬರ್ 2020 ರಲ್ಲಿ ಹತ್ರಾಸ್‌ನ ಬೂಲ್‌ಗರ್ಹಿ ಗ್ರಾಮದ ದಲಿತ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆಕೆ ಕೆಲ ದಿನಗಳ ನಂತರ ಮೃತಪಟ್ಟಳು. ಆಕೆಯ ಗ್ರಾಮದ ನಾಲ್ವರು ಪುರುಷರು ಈ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಅವರಲ್ಲಿ ಮೂವರನ್ನು ದೋಷಮುಕ್ತಗೊಳಿಸಲಾಯಿತು, ಆದರೆ ಒಬ್ಬರು ತಪ್ಪಿತಸ್ಥರೆಂದು ಸಾಬೀತಾಗಿ ಇನ್ನೂ ಜೈಲಿನಲ್ಲಿದ್ದಾರೆ.

ಪುಂಧೀರ್ ಅವರ ಪ್ರಕಾರ, ಡಿಸೆಂಬರ್ 12, 2024 ರಂದು ಬೂಲ್‌ಗರ್ಹಿ ಗ್ರಾಮಕ್ಕೆ ಭೇಟಿ ನೀಡಿದ್ದಾಗ, ಅತ್ಯಾಚಾರ ಆರೋಪಿಗಳು 'ಮುಕ್ತವಾಗಿ ಓಡಾಡುತ್ತಿದ್ದಾರೆ' ಆದರೆ ಸಂತ್ರಸ್ತೆಯ ಕುಟುಂಬವು ತಮ್ಮ ಮನೆಯಲ್ಲೇ ಬಂಧಿಯಾಗಿ ಉಳಿದಿದೆ ಎಂದು ಗಾಂಧಿ ಹೇಳಿದ್ದರು. ಸಿಬಿಐ ತನಿಖೆ ಮತ್ತು ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ನಡೆದ ವಿಚಾರಣೆಯ ನಂತರ ಮೂವರು ವ್ಯಕ್ತಿಗಳು ಅತ್ಯಾಚಾರ ಆರೋಪಗಳಿಂದ ದೋಷಮುಕ್ತರಾಗಿದ್ದರಿಂದ ಗಾಂಧಿ ಅವರ ಈ ಹೇಳಿಕೆಗಳು ಮಾನನಷ್ಟ ಉಂಟುಮಾಡುವಂತಿದ್ದವು ಎಂದು ಪುಂಧೀರ್ ಪ್ರತಿಪಾದಿಸಿದರು.

Rahul Gandhi
TMC ಹೆಸರು, ಚಿಹ್ನೆ ಮುಟ್ಟುಗೋಲು: 'Vote chori, govt chori ಆಯ್ತು, ಈಗ ಪಾರ್ಟಿ ಚೋರಿ'; ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಕಿಡಿ

ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸುವ ಮೊದಲು, ದೂರುದಾರರು ಗಾಂಧಿ ಅವರಿಗೆ ಕಾನೂನು ನೋಟಿಸ್ ಕಳುಹಿಸಿ 1.5 ಕೋಟಿ ರೂಪಾಯಿಗಳ ಪರಿಹಾರವನ್ನು (ದೋಷಮುಕ್ತರಾದ ಮೂವರು ವ್ಯಕ್ತಿಗಳಿಗೆ ತಲಾ 50 ಲಕ್ಷ ರೂ) ಕೋರಿದ್ದರು ಎಂದು ವಕೀಲರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com