ಈಶ್ವರಪ್ಪ ಅವರಲ್ಲಿ ಕ್ಷಮೆಯಾಚಿಸುತ್ತೇನೆ: ಐವಾನ್ ಡಿಸೋಜಾ

ಈಶ್ವರಪ್ಪ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಎಂಎಲ್‌ಸಿ ಐವಾನ್ ಡಿಸೋಜಾ ಅವರು ಕ್ಷಮೆಯಾಚಿಸಿದ್ದಾರೆ.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತು ಕಾಂಗ್ರೆಸ್ ಎಂಎಲ್‌ಸಿ ಐವಾನ್ ಡಿಸೋಜಾ
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತು ಕಾಂಗ್ರೆಸ್ ಎಂಎಲ್‌ಸಿ ಐವಾನ್ ಡಿಸೋಜಾ
Updated on

ಮಂಗಳೂರು: ಈಶ್ವರಪ್ಪ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಎಂಎಲ್‌ಸಿ ಐವಾನ್ ಡಿಸೋಜಾ ಅವರು ಕ್ಷಮೆಯಾಚಿಸಿದ್ದಾರೆ.

ಇಂದು ಬೆಳಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದ ಐವಾನ್ ಡಿಸೋಜಾ ಅವರು, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ನೀಡಿದ್ದ ಹೇಳಿಕೆಯನ್ನು ಖಂಡಿಸಿದ್ದರು. ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ಅವರ ಪತ್ನಿ ವಿರುದ್ಧ ಅವಹೇಳನಕಾರಿಯಾಗಿ ಡಿಸೋಜಾ ಮಾತನಾಡಿದ್ದರು. 'ಬೇರೆಯವರ ಮಕ್ಕಳ ಮೇಲೆ ಅತ್ಯಾಚಾರವಾಗಲಿ ಎಂದು ಹೇಳುವ ಈಶ್ವರಪ್ಪ ಅವರು, ಅವರ ಪತ್ನಿ ಮೇಲೆ ಅತ್ಯಾಚಾರ ಮಾಡಿದ್ರೆ ಸುಮ್ಮನಿರುತ್ತಾರೆಯೇ ಎಂದು ಪ್ರಶ್ನಿಸಿದ್ದರು.

ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಡಿಸೋಜಾ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಸ್ವತಃ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಕಾಂಗ್ರೆಸ್ ಪರವಾಗಿ ತಾವು ಕ್ಷಮೆ ಕೋರುವುದಾಗಿಯೂ ಮತ್ತು ಡಿಸೋಜಾ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿಯೂ ಹೇಳಿಕೆ ನೀಡಿದ್ದರು. ತಮ್ಮದೇ ಪಕ್ಷದ ನಾಯಕರಿಂದ ತೀವ್ರ ಟೀಕೆ ವ್ಯಕ್ತವಾಗುತ್ತಲೇ ಎಚ್ಚೆತ್ತುಕೊಂಡಿರುವ ಐವಾನ್ ಡಿಸೋಜಾ ಅವರು, ಕೂಡಲೇ ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿ ಈಶ್ವರಪ್ಪ ಅವರ ಕುಟುಂಬ ಮತ್ತು ರಾಜ್ಯದ ಜನತೆಯ ಬಳಿ ಕ್ಷಮೆ ಕೋರಿದ್ದಾರೆ.

'ಈಶ್ವರಪ್ಪ ಅವರ ವಿರುದ್ಧ ಮಾತನಾಡುವ ಭರದಲ್ಲಿ ನಾನು ಎಡವಿದ್ದೇನೆ. ಈಶ್ವರಪ್ಪ ಅವರ ಕುಟುಂಬವನ್ನು ಟೀಕಿಸುವ ಯಾವುದೇ ಉದ್ದೇಶ ನನ್ನದಾಗಿರಲಿಲ್ಲ. ಆದರೆ ಅವರು ನಿನ್ನೆ ನೀಡಿದ್ದ ಹೇಳಿಕೆ ಸರಿ ಇರಲಿಲ್ಲ. ನನ್ನ ಹೇಳಿಕೆಯನ್ನು ಕಾಂಗ್ರೆಸ್ ನಾಯಕರೂ ಖಂಡಿಸಿದ್ದು, ರಾಜ್ಯದ ಜನತೆಯಲ್ಲಿ ಮತ್ತು ಈಶ್ವರಪ್ಪ ಅವರ ಕುಟುಂಬದವರಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ. ಮುಂದೆ ಇಂತಹ ತಪ್ಪಾಗದಂತೆ ಎಚ್ಚರ ವಹಿಸುತ್ತೇನೆ. ರಾಜಕೀಯದಲ್ಲಿರುವವರು ಮತ್ತೊಬ್ಬರ ನಿಂದನೆ ಮಾಡುವುದು ಸರಿಯಲ್ಲ. ರಾಜಕಾರಣಿಗಳಿಗೆ ತಮ್ಮ ಮಾತಿನ ಮೇಲೆ ಹಿಡಿತವಿರಬೇಕು' ಎಂದು ಡಿಸೋಜಾ ಹೇಳಿದ್ದಾರೆ.

ವೈಯುಕ್ತಿಕ ನಿಂದನಾ ಹೇಳಿಕೆಯಿಂದ ಸಮಾಜದ ಸ್ವಾಸ್ಥ ಹಾಳು: ಸುರೇಶ್ ಕುಮಾರ್
ಅತ್ಯಾಚಾರ ಪ್ರಕರಣದ ಕುರಿತು ರಾಜಕೀಯ ನಾಯಕರ ಕೆಸರೆರಚಾಟಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಜಿ ಸಚಿವ ಸುರೇಶ್ ಕುಮಾರ್ ಅವರು, ಇಂತಹ ಹೇಳಿಕೆಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳು ಪರಸ್ಪರ ಮತ್ತೊಬ್ಬರ ನಿಂದನೆ ಮಾಡುವುದು ಸರಿಯಲ್ಲ. ಇಂತಹ ಬೆಳವಣಿಗೆಗಳಿಂದಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ಪರೋಕ್ಷವಾಗಿ ತಮ್ಮದೇ ಪಕ್ಷದ ಈಶ್ವರಪ್ಪ ಮತ್ತು ಕಾಂಗ್ರೆಸ್ ಡಿಸೋಜಾ ಅವರನ್ನು ಹಿನ್ನಲೆಯಾಗಿಟ್ಟುಕೊಂಡು ಮಾತನಾಡಿದ ಅವರು, ರಾಜಕಾರಣಿಗಳಿಗೆ ಮಾತಿನ ಮೇಲೆ ಹಿಡಿತವಿರಬೇಕು ಎಂದು ಛಾಟಿ ಬೀಸಿದ್ದಾರೆ.

ಒಟ್ಟಾರೆ ಅತ್ಯಾಚಾರದ ನೆಪದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ರಾಜಕೀಯ ನಾಯಕರು, ಆ ಮೂಲಕ ಸಮಾಜಕ್ಕೆ ಅದಾವ ಸಂದೇಶ ರವಾನೆ ಮಾಡುತ್ತಿದ್ದಾರೆ ಎಂಬುದೇ ಪ್ರಶ್ನಾರ್ಥಕವಾಗಿದೆ. ತಮ್ಮ ವರ್ಚಸ್ಸು ಹೆಚ್ಚಿಸಿಕ್ಕೊಳ್ಳಬೇಕು ಎಂಬ ಅಥವಾ ಪುಕ್ಕಟೆ ಪ್ರಚಾರ ಪಡೆಯುವ ಉದ್ದೇಶದಿಂದ ರಾಜಕಾರಣಿಗಳು ನೀಡುತ್ತಿರುವ ಇಂತಹ ಲಘು ಹೇಳಿಕೆಗಳು ಅವರ ವರ್ಚಸ್ಸು ಹೆಚ್ಚಿಸುವ ಬದಲಿಗೆ ಇರುವ ಹೆಸರನ್ನೂ ಕೂಡ ಹಾಳು ಮಾಡುತ್ತದೆ ಎಂಬ ಕಿಂಚಿತ್ ಜ್ಞಾನವೂ ಅವರಿಗೆ ಇಲ್ಲದಾಗಿ ಹೋಗಿದೆಯೇ..?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com