ಸರ್ಕಾರದ ವಿರುದ್ಧವೇ ಮೋಟಮ್ಮ ಗುಡುಗು

ರಾಜ್ಯದಲ್ಲಿ ಬಡವರ ಕೆಲಸವಾಗುತ್ತಿಲ್ಲ, ವರ್ಗಾವಣೆ ವ್ಯವಹಾರ ನಿಂತಿಲ್ಲ, ಈ ರೀತಿ ಮಾತಾಡುತ್ತೇವೆ ಎಂಬ ಕಾರಣಕ್ಕೆ ಕೆಲವರು ನನ್ನ ಮೇಲೆ ಸಿಟ್ಟಾಗುತ್ತಾರೆ...!
ಮಾಜಿ ಸಚಿವೆ, ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯೆ ಮೋಟಮ್ಮ (ಸಾಂದರ್ಭಿಕ ಚಿತ್ರ)
ಮಾಜಿ ಸಚಿವೆ, ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯೆ ಮೋಟಮ್ಮ (ಸಾಂದರ್ಭಿಕ ಚಿತ್ರ)

ಬೆಂಗಳೂರು: ರಾಜ್ಯದಲ್ಲಿ ಬಡವರ ಕೆಲಸವಾಗುತ್ತಿಲ್ಲ, ವರ್ಗಾವಣೆ ವ್ಯವಹಾರ ನಿಂತಿಲ್ಲ, ಈ ರೀತಿ ಮಾತಾಡುತ್ತೇವೆ ಎಂಬ ಕಾರಣಕ್ಕೆ ಕೆಲವರು ನನ್ನ ಮೇಲೆ ಸಿಟ್ಟಾಗುತ್ತಾರೆ...!

ರಾಜ್ಯ ಸರ್ಕಾರದ ವಿರುದ್ಧ ಈ ರೀತಿ ಗುಡುಗಿದವರು ಪ್ರತಿಪಕ್ಷ ಮುಖಂಡರಲ್ಲ. ಮಾಜಿ ಸಚಿವೆ, ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯೆ ಮೋಟಮ್ಮ. ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಜನ್ಮದಿನಾಚರಣೆ ಪ್ರಯುಕ್ತ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿ.ಪರಮೇಶ್ವರ, ಗೃಹಸಚಿವ ಕೆ.ಜೆ ಜಾರ್ಜ್, ಸೇರಿದಂತೆ ಹಲವು ಸಚಿವರ ಸಮ್ಮುಖದಲ್ಲೇ ಮೋಟಮ್ಮ, ಸರ್ಕಾರದ ಕಾರ್ಯವೈಖರಿಯನ್ನು ನಿಷ್ಕರ್ಷೆಗೆ ಒಳಪಡಿಸಿದ್ದಾರೆ,

ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಆದರೆ ಜನ ತೊಂದರೆ ಅನುಭವಿಸುವುದು ತಪ್ಪಿದೆಯೇನ್ರಿ? ಬಿಪಿಎಲ್ ಕಾರ್ಡ್ ಪಡೆಯಲು ಜನ ಈಗಲು ಪರದಾಡುತ್ತಿದ್ದಾರೆ. ಆನ್‌ಲೈನ್ ವ್ಯವಸ್ಥೆ ಮಾಡಿದ್ದರೂ ಸೌಲಭ್ಯ ಸಿಕ್ಕಿಲ್ಲ.  ಜನರು ತಹಶೀಲ್ದಾರ್ ಕಚೇರಿಯಲ್ಲಿ ಶೋಷಣೆಗೆ ಒಳಪಡುವುದೂ ತಪ್ಪಿಲ್ಲ. ಸಚಿವರು ಇಂಥ ಕಡೆಗೆ ಭೇಟಿ ನೀಡಿ ಪರಿಶೀಲಿಸಬೇಕಾಗುತ್ತದೆ. ನಾವು ಅದನ್ನು ಮಾಡುತ್ತಿದ್ದೇವೆಯೇ? ನಮ್ಮ ಸರ್ಕಾರದ ಅವಧಿಯಲ್ಲೇ ಹೀಗಾಗುತ್ತದೆ ಎಂದರೆ ಬೇಸರದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವೆಲ್ಲರೂ ಇಂದಿರಾಗಾಂಧಿ ಜನ್ಮದಿನಾಚರಣೆಯ ದಿನ ಈ ವಿಚಾರದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಚಿವರಾಗದೇ ಇರುವ ನಮ್ಮಂಥವರು ಮಂತ್ರಿಗಳಾಗುವುದಕ್ಕೆ, ಇನ್ನು ಕೆಲವರು ನಿಗಮ ಮಂಡಳಿ ಅಧ್ಯಕ್ಷರಾಗುವುದಕ್ಕೆ ಯತ್ನಿಸುತ್ತಿದ್ದೇವೆ. ಆದರೆ ನಮಗೆ ಮತ ಹಾಕಿ ಅಧಿಕಾರಕ್ಕೆ ತಂದವರ ಬಗ್ಗೆಯೂ ಚಿಂತಿಸಬೇಕಲ್ಲವೇ? ಎಂದು ಪ್ರಶ್ನಿಸಿದರು.

ನಮ್ಮ ನಾಯಕರು ಮತ್ತು ಮುಖಂಡರು ಅಧಿಕಾರಿಗಳು ಓಲೈಕೆಯಲ್ಲಿ ತೊಡಗಿದ್ದಾರೆ. ಅವನು ಇವ್ರ ಕಡೆಯವನು, ಇವನು ಅವ್ರ ಕಡೆಯವನು ಎಂದು ಪೋಸ್ಟಿಂಗ್ ಕೊಡಿಸುವುದಕ್ಕೆ ಯತ್ನಿಸುತ್ತಿದ್ದೇವೆ. ಟ್ರಾನ್ಸ್‌ಫರ್ ವ್ಯವಹಾರ ಇನ್ನೂ ನಿಂತಿಲ್ಲ. ಹಾಗಾದರೆ ಬಡವರ ಕೆಲಸ ಮಾಡುವವರು ಯಾರು? ಚಿಕ್ಕಮಗಳೂರಿನಲ್ಲಿ ಕೆಲವು ದಿನಗಳ ಹಿಂದೆ ನಾನು ಇದೇ ವಿಚಾರ ಪ್ರಸ್ತಾಪ ಮಾಡಿದ್ದಕ್ಕಾಗಿ ನನ್ನ ವಿರುದ್ಧ ಹಲವರು ಸಿಟ್ಟಾಗಿದ್ದರು. ಹಾಗಂತ ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಸಾಧ್ಯವೇ? ಎಂದು ಕಿಡಿಕಾರಿದರು.

ಹೊಟ್ಟೆ ತುಂಬುವುದಿಲ್ಲ:
ಪ್ರಧಾನಿ ಮೋದಿ ಅವರ ವಿರುದ್ಧ ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಮೋಟಮ್ಮ ಮೋದಿಯವರು ವಿದೇಶಕ್ಕೆ ಹೋಗಿ ಭಾರತದ ಸ್ವಚ್ಛತೆ ಬಗ್ಗೆ ಮಾತನಾಡುತ್ತಾರೆ. ಆದರೆ ಸ್ವಚ್ಛ ಭಾರತದಿಂದ ದೇಶದ ಬಡವರ ಹೊಟ್ಟೆ ತುಂಬುವುದಿಲ್ಲ. ಅದಕ್ಕಾಗಿ ಪ್ರತ್ಯೇಕ ಯೋಜನೆ ಅಗತ್ಯ. ನಮ್ಮ ಸರ್ಕಾರ ಒಳ್ಳೆ ಕಲಸ ಮಾಡುತ್ತಿದೆ ಎಂಬುದನ್ನು ಇನ್ನಷ್ಟು ಗಟ್ಟಿ ಧ್ವನಿಯಲ್ಲಿ ಮಾತನಾಡೋಣ ಎಂದರು.

ಸಿಎಂ ಬಾಯ್ತುಪ್ಪು:
ಬಾಯ್ತಪ್ಪಿನ ಸಮಸ್ಯೆ  ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಎಡವಟ್ಟು ಉಂಟುಮಾಡಿದೆ. ದಿ.ಇಂದಿರಾಗಾಂಧಿ ಅವರ 97ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಈ ಅವಾಂತರ ಉಂಟಾಗಿದೆ. ತಮ್ಮ ಭಾಷಣದ ಆರಂಭದಲ್ಲಿ ದಿ.ಇಂದಿರಾಗಾಂಧಿ ಜನ್ಮ ದಿನಾಚರಣೆ ಎನ್ನುವ ಬದಲು ಮಾಜಿ ಪ್ರಧಾನಿ ಸೋನಿಯಾಗಾಂಧಿ ಎಂದು ಹೇಳಿ ತುಟಿಕಚ್ಚಿಕೊಂಡರು. ತಕ್ಷಣ ತಮ್ಮ ತಪ್ಪು ಸರಿಪಡಿಸಿಕೊಂಡ ಸಿದ್ದರಾಮಯ್ಯ ದಿ.ಇಂದಿರಾಗಾಂಧಿ ಎಂದು ಸರಿಪಡಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com