ಬೆಂಗಳೂರು: ಎನ್ ಡಿಎ ಸರ್ಕಾರದ ಸಚಿವರೊಬ್ಬರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೊಗಳಿದ್ದು, ವಿಪರ್ಯಾಸವೆಂದರೆ ಸಿದ್ದರಾಮಯ್ಯ ಅವರು ಅದೇ ವೇದಿಕೆಯಲ್ಲೇ ಇದ್ದರೂ ತಮ್ಮ ಬಗ್ಗೆ ಕೇಳಿಬಂದ ಹೊಗಳಿಕೆ ಮಾತುಗಳನ್ನು ಮಾತ್ರ ಅವರು ಕೇಳಿಸಿಕೊಳ್ಳಲೇ ಇಲ್ಲ..
ಗುರುವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು. ಕಾರ್ಯಕ್ರಮಕ್ಕೆ ತಡವಾಗಿ ಬಂದ ರಾಜನಾಥ್ ಸಿಂಗ್ ಅವರು ಭಾಷಣ ಮಾಡುತ್ತಾ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಬ್ಬ ಹಿರಿಯ ನಾಯಕರಾಗಿದ್ದು, ಉತ್ತಮವಾಗಿ ಸರ್ಕಾರ ನಡೆಸುತ್ತಿದ್ದಾರೆ. ಆದರೆ ನನಗೆ ಸರಿಯಾಗಿ ಕನ್ನಡ ಅರ್ಥವಾಗುವುದಿಲ್ಲ, ಆದರೂ ಭಾಷಣ ಕೇಳಲು ಆಗದ್ದಕ್ಕೆ ಕ್ಷಮೆ ಕೋರುತ್ತಿದ್ದೇನೆ ಎಂದು ಹೇಳಿದರು.
ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಕೊಂಚ ತಡವಾಗಿಬಂದಿದ್ದರು. ಅಷ್ಟುಹೊತ್ತಿಗಾಗಲೇ ಕಾರ್ಯಕ್ರಮ ಆರಂಭಗೊಂಡು ಸಿದ್ದರಾಮಯ್ಯ ಅವರು ತಮ್ಮ ಭಾಷಣ ಮಾಡಿ ಮುಗಿಸಿದ್ದರು. ಹೀಗಾಗಿ ರಾಜನಾಥ್ ಸಿಂಗ್ ಅವರು ಸಿದ್ದರಾಮಯ್ಯ ಅವರ ಭಾಷಣ ಕೇಳುವದರಿಂದ ವಂಚಿತರಾಗಿದ್ದರು.
ಆದರೆ ಅತ್ತ ಗೃಹ ಸಚಿವರು ಸಿದ್ದರಾಮಯ್ಯನವರನ್ನು ಹೊಗಳುತ್ತ ಭಾಷಣ ಮಾಡುತ್ತಿದ್ದರೆ ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತ್ರ ನಿದ್ದೆಗೆ ಜಾರಿದ್ದರು.
Advertisement