ಬೆಂಗಳೂರು: ಅರ್ಕಾವತಿ ಬಡಾವಣೆ ವಿಚಾರದಲ್ಲಿ ರಾಜ್ಯದ ಜನತೆಯನ್ನು ತಪ್ಪು ದಾರಿಗೆಳೆಯುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ಸದ್ಯ ಮರೆಮಾಚಿವೆ. ಅವರ ಪುಸ್ತಕಗಳಿಗೆ ಪ್ರತಿಯಾಗಿ 'ಅರ್ಕಾವತಿ-ವಸ್ತುಸ್ಥಿತಿ' ಹೊತ್ತಗೆ ಹೊರತರಲಾಗುತ್ತದೆ ಎಂದು ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಸಿಎಂ ಧನಂಜಯ ಹೇಳಿದ್ದಾರೆ.
ಅಲ್ಲದೆ ಈ ಎರಡು ಪಕ್ಷಗಳ ವಿರುದ್ಧ ರಾಜ್ಯಪಾಲರು ಹಾಗೂ ಅರ್ಕಾವತಿ ವಿಚಾರಣಾ ನ್ಯಾಯಾಂಗ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ಅಕ್ರಮ ನಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸರ್ಕಾರ ಅರ್ಕಾವತಿ ಬಡಾವಣೆ ವಿಚಾರದಲ್ಲಿ ಯಾವುದೇ ಅಕ್ರಮವನ್ನೆಸಗಿಲ್ಲ. ಹೀಗಾಗಿಯೇ ಆರೋಪ ಬಂದ ಕೂಡಲೇ ತನಿಖೆಗಾಗಿ ಕೆಂಪಣ್ಣ ವಿಚಾರಣಾ ಆಯೋಗವನ್ನು ನೇಮಿಸಿದೆ. ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಹಾಗೂ ರಾಜಕೀಯ ಜೀವನದಲ್ಲೇ ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿತ್ವದ ಸಿದ್ದರಾಮಯ್ಯ ಅವರಿಗೆ ಮಸಿ ಬಳಿಯುವ ವ್ಯವಸ್ಥಿತಿ ಷಡ್ಯಂತ್ರ ನಡೆಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಡಲೆಕಾಯಿ ಕಟ್ಟಲು ಬರುವುದಿಲ್ಲ: ಅರ್ಕಾವತಿ ವಿಚಾರದ ಬಗ್ಗೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಹಾಗೂ ಬಿಜೆಪಿ ಬಿಡುಗಡೆ ಮಾಡಿರುವ ಪುಸ್ತಕಗಳು ವಿಧಾನಸೌಧದ ಮುಂದೆ ಕಡಲೆಕಾಯಿ ಕಟ್ಟಲು ಬರುವಂತವಲ್ಲ ಎಂದು ವ್ಯಂಗ್ಯವಾಡಿದ ಸಿ.ಎಂ ಧನಂಜಯ, ಈ ಪುಸ್ತಕಗಳಲ್ಲಿರುವ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಯಾರೂ ಬೇಕಾದರೂ ಪಡೆದುಕೊಳ್ಳಬಹುದಾಗಿದೆ ಎಂದರು.
Advertisement