ಶ್ರದ್ಧೆ ಇಲ್ಲದ ಶ್ರಾದ್ಧವಲ್ಲ ಕಲಾಪ

ವಂದನಾ ನಿರ್ಣಯದ ಭಾಷಣ ಮತ್ತು ಕಲಾಪ ಶ್ರದ್ಧೆ ಇಲ್ಲದ ಶ್ರಾದ್ಧದಂತಾಗಬಾರದು. ಜನರ ಭಾವನೆ ಜತೆ...
ರಮೇಶ್‍ಕುಮಾರ್
ರಮೇಶ್‍ಕುಮಾರ್

ವಿಧಾನಸಭೆ: ವಂದನಾ ನಿರ್ಣಯದ ಭಾಷಣ ಮತ್ತು ಕಲಾಪ ಶ್ರದ್ಧೆ ಇಲ್ಲದ ಶ್ರಾದ್ಧದಂತಾಗಬಾರದು. ಜನರ ಭಾವನೆ ಜತೆ ಸದನ ಕಲಾಪ ರಸಮಂಜರಿಯಂತೆ ಸಮ್ಮಿಳಿತವಾಗಿರಬೇಕು...!
ವಿಧಾನಸಭೆಯ ಹಿರಿಯ ಶಾಸಕ ರಮೇಶ್‍ಕುಮಾರ್ ವಾಸ್ತವಕ್ಕೆ ಭಾವನೆಯ ಲೇಪ ನೀಡಿ ಕಲಾಪ ವ್ಯವಸ್ಥೆಯ ಲೋಪ ಮತ್ತು ಜನರ ನಿರೀಕ್ಷೆಯ ಬಗ್ಗೆ ಈ ರೀತಿ ಮಾತನಾಡುತ್ತಿದ್ದರೆ ಸದಾ ಗದ್ದಲದ ಗೂಡಾಗಿರುತ್ತಿದ್ದ ವಿಧಾನಸಭೆಯಲ್ಲಿ ದಿವ್ಯಮಾನ! ರಾಜ್ಯಪಾಲರ ಭಾಷಣದ ವಂದನಾ ನಿರ್ಣಯಕ್ಕೆ ರಮೇಶ್‍ಕುಮಾರ್ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಆಡಳಿತ-ಪ್ರತಿಪಕ್ಷ ಸಾಲಿನಲ್ಲಿ ಶಾಸಕರ ಸಂಖ್ಯೆ ಭರ್ತಿ ಇತ್ತು.

ಭಾರತೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜ್ಯಪಾಲರ ಭಾಷಣ ಹೇಗೆ ಪ್ರವೇಶಿಸಿತು? ವಂದನಾ ನಿರ್ಣಯದ ಮಹತ್ವವೇನು? ಎಂಬ ಬಗ್ಗೆ ವಿವರಣೆ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಜ್ಯಪಾಲರ ಭಾಷಣ ಕಾಟಾಚಾರಕ್ಕೆ ಸೀಮಿತವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ರಾಜ್ಯಪಾಲರ ಭಾಷಣ ಇತ್ತೀಚಿಗೆ ತನ್ನ ಗಾಂಭೀರ್ಯ ಕಳೆದುಕೊಳ್ಳುತ್ತಿದೆ. ಮೈ ಗವರ್ನಮೆಂಟ್ ಎಂದು ರಾಜ್ಯಪಾಲರು ಪ್ರಥಮ ವಚನದಲ್ಲಿ ಭಾಷಣ ಆರಂಭಿಸುತ್ತಾರೆ. ಆದರೆ ಅದನ್ನು ಅವರು ಬರೆದುಕೊಂಡು ಬರುವುದಿಲ್ಲ. ಸರ್ಕಾರ ಬರೆದುಕೊಟ್ಟಿದ್ದನ್ನು ಓದುತ್ತಾರೆ.

ಆದರೆ ಈ ಭಾಷಣ ನಮ್ಮದು ಎಂದು ಹೃದಯ ಮೂಲದಿಂದ ಸ್ವೀಕರಿಸುವುದಕ್ಕೆ ಯಾವ ಶಾಸಕರಿಗೂ ಸಾಧ್ಯವಾಗುವುದಿಲ್ಲ. ಏಕೆಂದರೆ ಭಾಷಣದಲ್ಲೇ ಅಡ್ಜೆಸ್ಟ್ ಮೆಂಟ್  ಹಾಗಂತ ಇದು ಸಿದ್ದರಾಮಯ್ಯನವರು ಹುಟ್ಟುಹಾಕಿದ್ದಲ್ಲ, ಕುಮಾರಸ್ವಾಮಿ ಬಿಟ್ಟು ಹೋಗಿದ್ದಲ್ಲ, ಶೆಟ್ಟರ್ ಕೊಟ್ಟಿದ್ದಲ್ಲ. ಬಹಳ ಹಿಂದಿನಿಂದಲೂ ಬೆಳೆದು ಬಂದು ಬಿಟ್ಟಿದೆ. ಈ ಕಾರಣಕ್ಕಾಗಿಯೇ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಭಾಷಣದ ಮೇಲೆ ವಂದನಾ ನಿರ್ಣಯಾ ಭಾಷಣ ಏಕೆ ಮಾಡಬೇಕು ಎಂದು ದೇವ ರಾಜ್ ಅರಸು ಮುಖ್ಯಮಂತ್ರಿಯಾಗಿದ್ದ ಸಂದಭದಲ್ಲೇ ಶಾಸಕರೊಬ್ಬರು ಕ್ರಿಯಾ ಲೋಪ ಎತ್ತಿದ್ದರು.

1977ರಲ್ಲಿ ನಡೆದ ಆ ಚರ್ಚೆ ರಾಜ್ಯದ ಶಾಸನಸಭೆ ಇತಿಹಾಸದಲ್ಲೇ ಮಹತ್ವದ್ದು ಎಂದು ಗತಕಾಲವನ್ನು ಸ್ಮರಿಸಿದರು. ನಮ್ಮ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ. ವಾಟಾಳ್ ನಾಗರಾಜ್ ಅವರೇನಾದರೂ ಈ ಮನೆಯ ಸದಸ್ಯರಾಗಿದ್ದರೆ, ಅಥವಾ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಬಂಧ ಹಳಸಿದ್ದರೆ ಈ ವಿಚಾರದಲ್ಲಿ ದೊಡ್ಡ ಚರ್ಚೆಯಾಗುತ್ತಿತ್ತು. ಹಿಂದಿ ನಮ್ಮ ರಾಷ್ಟ್ರಭಾಷೆ. ಹೀಗಾಗಿ ಹಿಂದಿಯಲ್ಲಿ ಮಾತನಾಡಬಾರದು ಎಂಬ ನಿಯಮವೇನೂ ಇಲ್ಲ.

ಇತ್ತೀಚೆಗೆ ರಾಜ್ಯಪಾಲರ ನಡಾವಳಿ ಟೀಕೆಗೆ ಗುರಿಯಾಗುತ್ತಿದೆ. ಅವರು ತಪ್ಪಿದಾಗ ಎಚ್ಚರಿಸುವುದರಲ್ಲಿ ಏನೂ ತಪ್ಪಿಲ್ಲ ಎಂದು ಅಭಿಪ್ರಾಯಪಟ್ಟರು. ಭ್ರಷ್ಟಾಚಾರ ಇಲ್ಲ ಎನ್ನಲಾರೆ: ಇದೇ ಸಂದರ್ಭದಲ್ಲಿ ಆಡಳಿತ ಕೆಳ ಹಂತದಲ್ಲಿ ಆಗುವ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಅವರು, ವ್ಯವಸ್ಥೆ ಸುಧಾರಿಸಲು ನಾವು ಕೆಲ ಕಠಿಣ ಕ್ರಮ ತೆಗೆದುಕೊಳ್ಳುವುದು ಅಗತ್ಯ.

ಇರುವ ವ್ಯವಸ್ಥೆಯನ್ನು ಇನ್ನಷ್ಟು ಹದೆಗೆಡಿಸಿದರೆ ಯಾರಿದ್ದರೆ ಏನು ಪ್ರಯೋಜನ ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲ ಎಂದು ಹೇಳುವುದಕ್ಕೆ ನನಗೇನೂ ಅಂಜಿಕೆ ಇಲ್ಲ. ಆದರೆ ವೈಯಕ್ತಿಕವಾಗಿ ಅಧಿಕಾರ ಇದೆ ಎಂಬ ಕಾರಣಕ್ಕೆ ಹಣ ಮಾಡುವ ಮನೋಭಾವ ಸಿದ್ದರಾಮಯ್ಯಗೆ ಇಲ್ಲ. ವ್ಯವಸ್ಥೆಯನ್ನು ಸುಧಾರಿಸುವುದಕ್ಕೆ ಅವರು ಧೈರ್ಯ ಮಾಡಬೇಕು. ಚರಿತ್ರೆಯ ಭಾಗವಾಗಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com