ಬೆಂಗಳೂರು: ರಾಜ್ಯದ ಕೈಗಾರಿಕೆ ಅಭಿವೃದ್ಧಿಗೆ`ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ನಿಗಮ'ವು ಅಪಾರ ಕೊಡುಗೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ಫೋಸಿಸ್ ಸೇರಿದಂತೆ ಸಾಕಷ್ಟು ಕಂಪನಿಗಳ ಸ್ಥಾಪನೆ ಹಾಗೂ ಅಭಿವೃದ್ಧಿಯಲ್ಲಿ ನಿಗಮದ ಪಾತ್ರ ದೊಡ್ಡದಿದೆ. ಸುಮಾರು 2300 ಕಂಪನಿಗಳ ಹುಟ್ಟಿಗೆ ಕಾರಣವಾದ ಸಂಸ್ಥೆಯು ರು. 2200 ಕೋಟಿಗೂ ಅಧಿಕ ಆರ್ಥಿಕ ನೆರವು ನೀಡಿದೆ. ಇನ್ಫೋಸಿಸ್ ನ ನಾರಾಯಣಮೂರ್ತಿ ಅವರು ಎಂದಿಗೂ ಇದನ್ನು ಸ್ಮರಿಸಿಕೊಳ್ಳುತ್ತಾರೆ ಎಂದು ಕರ್ನಾಟಕ ರಾಜ್ಯ ಕೈಗಾರಿಕೆ ಹಾಗೂ ಮೂಲಸೌಕರ್ಯ ನಿಗಮದ ಸುವರ್ಣ ಮಹೋತ್ಸವದಲ್ಲಿ ಅವರು ಅಭಿಪ್ರಾಯ ಪಟ್ಟರು.
ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಿಗೆ ನಿಗಮದಿಂದ ಆರ್ಥಿಕ ನೆರವು ನೀಡಲಾಗಿದೆ. ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆ ಹಾಗೂ ಬೆಳವಣಿಗೆಯಾಗಿದ್ದರೆ ನಿಗಮದ ಪಾತ್ರ ಮುಖ್ಯವಾಗಿದೆ. ಭವಿಷ್ಯದಲ್ಲಿಯೂ ಇದೇ ಸಹಕಾರ ಮುಂದುವರಿಯಲಿದೆ. ಹೊಸ ಕಂಪನಿಗಳ ಪಾಲಿಗೆ ಕೆಎಸ್ಐಐಡಿಸಿ ಸಂಸ್ಥೆಯು ಮಾರ್ಗದರ್ಶಕನಂತೆ ಕೆಲಸ ಮಾಡುತ್ತಿದೆ ಎಂದು ಹೇಳಿದರು. ರಾಜ್ಯವು ಮೊದಲಿನಿಂದಲೂ ಕೈಗಾರಿಕೆ ಸ್ನೇಹಿಯಾಗಿದೆ. ಈಗ ಮತ್ತಷ್ಟು ಕೈಗಾರಿಕೆ ಸ್ನೇಹಿ ನೀತಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ ಎಂದು ಹೇಳಿದರು
Advertisement