ಅಬ್ಕಾರಿಯಲ್ಲೇ ಜಾರಕಿ

ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಸತೀಶ್ ಜಾರಕಿಹೊಳಿ ಅವರ ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ ಕೊನೆಗೂ ...
ಸತೀಶ್ ಜಾರಕಿಹೊಳಿ ಜತೆ ಸಿಎಂ ಸಿದ್ದರಾಮಯ್ಯ ಸಂಧಾನ ಸಭೆ
ಸತೀಶ್ ಜಾರಕಿಹೊಳಿ ಜತೆ ಸಿಎಂ ಸಿದ್ದರಾಮಯ್ಯ ಸಂಧಾನ ಸಭೆ

ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಸತೀಶ್ ಜಾರಕಿಹೊಳಿ ಅವರ ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯಕೊನೆಗೂ ಯಶಸ್ವಿಯಾಗಿದ್ದು, ರಾಜಿನಾಮೆ ಪ್ರಹಸನ ಅಂತ್ಯಗೊಂಡಿದೆ. ಲೋಕೋಪಯೋಗಿ ಸಚಿವ ಡಾ. ಎಚ್. ಸಿ.ಮಹಾದೇವಪ್ಪ ನಿವಾಸದಲ್ಲಿ ಶುಕ್ರವಾರ ತಡರಾತ್ರಿ ನಡೆದ ಸಂಧಾನ ಸಭೆ  ಫಲಪ್ರದವಾಗಿದ್ದು, ಜಾರಕಿಹೊಳಿ ಬೇಡಿಕೆಗೆ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ. ಆದರೆ, ಸಚಿವ ಸಂಪುಟ ಪುನಾರಚನೆವರೆಗೆ ಜಾರಕಿಹೊಳಿ ಅಬಕಾರಿ ಖಾತೆಯಲ್ಲೇ ಮುಂದುವರಿಯಲ್ಲಿದ್ದಾರೆ.
ಬೆಳಗಾವಿಯಿಂದ ರಾತ್ರಿ 8.30ಕ್ಕೆ ಬೆಂಗಳೂರಿಗೆ ಆಗಮಿಸಿದ ಜಾರಕಿಹೊಳಿ ಅವರನ್ನು ಮಹಾದೇವಪ್ಪ ನಿವಾಸದಲ್ಲಿ ಭೇಟಿ ಮಾಡುವುದಾಗಿ ಸಿದ್ದರಾಮಯ್ಯ ಮೊದಲೇ ತಿಳಿಸಿದ್ದರು. ಹೀಗಾಗಿ ಜಿಲ್ಲೆ ಶಾಸಕರಾದ ಪಿsರೋಜ್ ಶೇಠ್, ಅಶೋಕ್ ಪಟ್ಟಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವ ಡಿಕೆಶಿ ಹಾಗೂ ಬೆಳಗಾವಿ ಮುಖಂಡರು ಸೇರಿದ್ದರು. ಸಭೆಯಲ್ಲಿ `ಹಠಾತ್ ನಿರ್ಧಾರ ವಾಪಾಸ್ ಪಡೆಯಬೇಕು. ಪಕ್ಷ ಬಲವರ್ಧನೆ ಕಾಲಘಟ್ಟದಲ್ಲಿ ಇಂಥ ಬೆಳವಣಿಗೆ ಸಲ್ಲ' ಎಂದು ಜಾರಕಿಹೊಳಿ ಅವರನ್ನು ಸಂಬಾಳಿಸುವ ಮಾತುಗಳು ಪ್ರಕಟ ಗೊಂಡವು. ಈ ಸಂದರ್ಭದಲ್ಲಿ ಸಿಎಂ ಆಪ್ತರ ವರ್ತನೆ ಬಗ್ಗೆ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು. `ನಾನು ಅಧಿಕಾರಕ್ಕಾಗಿ ಎಂದೂ ಹಾತೊರೆದವನಲ್ಲ. ಸಿಎಂ ಜತೆ ನನಗೆ ಭಾವನಾತ್ಮಕ ಸಂಬಂಧವಿದೆ. ನಾನು ಅವರಿಂದ ಬಯಸುವುದು ಪ್ರೀತಿ ಮತ್ತು ಆತ್ಮೀಯತೆಯನ್ನು ಮಾತ್ರ. ಆದರೆ ಇದಕ್ಕೆ ಕೆಲವರಿಂದ ಅಡ್ಡಿ ಬರುತ್ತಿದೆ. ಹೀಗಾಗಿ ಕಠಿಣ ತೀರ್ಮಾನ ಅನಿವಾರ್ಯವಾಯಿತು' ಎಂದು ಜಾರಕಿಹೊಳಿ ಹೇಳಿದರೆನ್ನಲಾಗಿದೆ.
ಸಿಎಂ ಸಿದ್ದರಾಮಯ್ಯಅವರೇ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು ಮಾತ್ರವಲ್ಲ, ಸೂಕ್ತ ಸಂದರ್ಭದಲ್ಲಿ ಖಾತೆ ಬದಲಾವಣೆ ಭರವಸೆಯನ್ನೂ ನೀಡಿದರು. ಸುಮಾರುಒಂದು ಗಂಟೆ ಚರ್ಚೆಯ ಬಳಿಕ ಎಲ್ಲರೂ ಒಟ್ಟಾಗಿ ಭೋಜನ ಸ್ವೀಕರಿಸಿ, ರಾಜೀನಾಮೆ ಪ್ರಹಸನ ಅಂತ್ಯಗೊಳಿಸಿದರು.

ಅಧಿವೇಶನದ ಬಳಿಕ: ವಿಧಾನಸಭೆ ಅಧಿವೇಶನದ ಬಳಿಕ ಖಾತೆ ಬದಲಾವಣೆಗೆ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ.ಅಬಕಾರಿ ಜತೆಗೆ ತಮ್ಮ ಬಳಿ ಇರುವ ಸಣ್ಣ ಕೈಗಾರಿಕೆ ಖಾತೆಯನ್ನೂ ಜಾರಕಿಹೊಳಿ ಅವರಿಗೆ ನೀಡುವ ಪ್ರಸ್ತಾಪ ವ್ಯಕ್ತವಾಗಿದೆ.ಸಂಪುಟ ಪುನಾರಚನೆ ಸಂದರ್ಭದಲ್ಲಿ ಯಾವುದಾದರೊಂದು `ಕಲ್ಯಾಣ ಖಾತೆ' ಜತೆಗೆ ಹೆಚ್ಚುವರಿ ಖಾತೆ
ಜಾರಕಿಹೊಳಿ ಹೆಗಲೇರುವುದು ನಿಚ್ಚಳವಾಗಿದೆ.



ಜಾರಕಿಹೊಳಿ ರಾಜಿನಾಮೆ ವಾಪಸ್
`ನಾನು ಸಚಿವ ಸ್ಥಾನಕ್ಕೆ ನೀಡಿದ್ದ ರಾಜಿನಾಮೆಯನ್ನು ವಾಪಾಸ್ ಪಡೆಯುತ್ತಿ ದ್ದೇನೆ.ರಾಜಕಾರಣದಲ್ಲಿ ರಾಜಿನಾಮೆ ನೀಡುವುದು ಸ್ವಾಭಾವಿಕ ಮತ್ತು ಅನಿವಾರ್ಯವಾಗಿತ್ತು.ಇಷ್ಟು ದಿನ ನಡೆದ ಬೆಳವಣಿಗೆಗೆ ನಾನೇ ಕಾರಣ' ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, `ನಾನು ಯಾವುದೇ ಬೇಡಿಕೆ ಆಧರಿಸಿ ರಾಜಿನಾಮೆ ನೀಡಿರಲಿಲ್ಲ. ಖಾತೆ ಬದಲಾವಣೆ ಕೇಳಿದ್ದು ನಿಜ. ಅದನ್ನು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಬದಲಾಯಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ನಾನು ನನಗೆ ವಹಿಸಿದ್ದ ಅಬಕಾರಿ ಖಾತೆಯಲ್ಲೇ ಸದ್ಯಕ್ಕೆ ಮುಂದುವರಿಯುತ್ತೇನೆ. ಇದು ಪಕ್ಷವನ್ನು ಬಲಪಡಿಸುವ ಕಾಲವಾಗಿರುವುದರಿಂದ ಪಕ್ಷದ ಹಿತದೃಷ್ಟಿಯಿಂದ ರಾಜಿನಾಮೆ ವಾಪಾಸ್ ಪಡೆಯುತ್ತೇನೆ' ಎಂದು ಹೇಳಿದರು.ಹಾಗಾದರೆ ರಾಜಿನಾಮೆ ನೀಡುವುದಕ್ಕೆ ಕಾರಣವಾದ ಸಂಗತಿ ಏನು? ಇದಕ್ಕೆ ಯಾರು ಕಾರಣ ? ಎಂಬ ಮಾಧ್ಯಮಗಳ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದಅವರು,`ಇದೆಲ್ಲ ಸ್ವಾಭಾವಿಕ. ಇದಕ್ಕೆ ನಾನೇ ಕಾರಣ' ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com