ವಿಧಾನಪರಿಷತ್ತು: ರಾಜ್ಯ ಸರ್ಕಾರದ ಏಕೈಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳ ಪರದಾಡುತ್ತಿರುವ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆಯಿತು.
ಆಸ್ಪತ್ರೆ ಚೆನ್ನಾಗಿದ್ದರೂ ಅಲ್ಲಿ ಸೌಲಭ್ಯವಿಲ್ಲದೆ ಸಮಸ್ಯೆ ಹೆಚ್ಚಾಗಿರುವ ಬಗ್ಗೆ ಬಿಜೆಪಿಯ ರಾಮಚಂದ್ರಗೌಡ ಪ್ರಶ್ನೋತ್ತರ ಕಲಾಪ ವೇಳೆ ಪ್ರಸ್ತಾಪಿಸಿದರು. ವಿಕ್ಟೋರಿಯಾ ಆವರಣದಲ್ಲಿರುವ ಪ್ರಧಾನಮಂತ್ರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಾಕಷ್ಟು ಸೌಲಭ್ಯಗಳಿದ್ದರೂ ಅದರ ಸದ್ಬಳಕೆಯಾಗದಿರುವ ಬಗ್ಗೆ ಆಕ್ಷೇಪಿಸಿದರು. ಈ ಆಸ್ಪತ್ರೆಯಲ್ಲಿ 243 ಮಂಜೂರು ಹುದ್ದೆಗಳಿದ್ದರೂ ವೈದ್ಯರ ನೇಮಕ ಆಗದಿರುವುದು ತೊಂದರೆಗೆ ಕಾರಣವಾಗಿದೆ. ಅದರಲ್ಲೂ ಅರವಳಿಕೆ ತಜ್ಞರಿಲ್ಲದೆ ರೋಗಿಗಳಿಗೆ ತೀರಾ ಸಮಸ್ಯೆಯಾಗಿದೆ ಎಂದು ರಾಮಚಂದ್ರಗೌಡ ವಿವರಿಸಿದರು.
ಆರೋಪ ಒಪ್ಪಿಕೊಂಡ ಸಚಿವ ಶರಣಪ್ರಕಾಶ್ ಪಾಟೀಲ್, ಆಸ್ಪತ್ರೆಯಲ್ಲಿ 45 ಹುದ್ದೆಗಳು ಖಾಲಿಯಾಗಿದ್ದು, ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅರವಳಿಕೆ ತಜ್ಞರ ಹುದ್ದೆಗಳು ಖಾಲಿ ಇರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಲಾಗುತ್ತದೆ ಎಂದರು.
ಆಸ್ಪತ್ರೆಯಲ್ಲಿ ನರ ವೈದ್ಯ ಶಾಸ್ತ್ರ ವಿಭಾಗ, ನರ ಶಾಸ್ತ್ರ ಚಿಕಿತ್ಸಾ ವಿಭಾಗ, ಉದರ ಶಸ್ತ್ರ ಚಿಕಿತ್ಸಾ ಮತ್ತು ಲಿವರ್ ಟ್ರಾನ್ಸ್ಪ್ಲಾಂಟೇಷನ್ ವಿಭಾಗ, ಕಾರ್ಡಿಯಾ ವಿಭಾಗ ಹಾಗೂ ಶಿಶು ಶಸ್ತ್ರ ಚಿಕಿತ್ಸಾ ವಿಭಾಗಗಳಿದ್ದು, ಇಡೀ ಆಸ್ಪತ್ರೆ ಖಾಸಗಿ ಆಸ್ಪತ್ರೆಗಿಂತಲೂ ಚೆನ್ನಾಗಿದೆ. ಆದರೆ, ವೈದ್ಯರ ಕೊರತೆಯಿಂದ ತೊಂದರೆಯಾಗಿದೆ ಎಂದು ಸಚಿವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಮಚಂದ್ರಗೌಡ, ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಐಸಿಯುಗಳಿರುವ ಸರ್ಕಾರಿ ಆಸ್ಪತ್ರೆಗಳು ತೀರಾ ಕಡಿಮೆ. ಹೀಗಾಗೀ ರೋಗಿಗಳಲ್ಲಿ ಶೇ.60 ಮಂದಿ ಐಸಿಯು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವಂತಾಗಿದೆ. ಹೀಗಾಗಿ ಆದಷ್ಟು ಬೇಗ ತಜ್ಞವೈದ್ಯರ, ಅದರಲ್ಲೂ ಅರವಳಿಕೆ ತಜ್ಞರನ್ನು ಶೀಘ್ರ ನೇಮಕ ಮಾಡಬೇಕೆಂದು ಆಗ್ರಹಿಸಿದರು. ನಂತರ ಸಚಿವರು, ಗ್ಯಾಸ್ಟ್ರೋಎಂಟ್ರಾಲಜಿ ವಿಭಾಗಕ್ಕೆ ತುರ್ತಾಗಿ ಅರವಳಿಕೆ ತಜ್ಞರ ಅಗತ್ಯವಿದ್ದು, ಅಲ್ಲಿಗೆ ನೇರ ನೇಮಕ ವ್ಯವಸ್ಥೆ ಮೂಲಕ ಹುದ್ದೆ ಭರ್ತಿ ಮಾಡಲಾಗುವುದು ಎಂದರು.
Advertisement