ಬೆಳಗಾವಿ: ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರಾವಧಿ ಇನ್ನೂ ಇದ್ದಿದ್ದರೆ ತಿಂಗಳ ಕಾಲ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿದ್ದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ಈಗ 20 ದಿನ ಬೆಳಗಾವಿ ಅಧಿವೇಶನಕ್ಕೆ ಆಗ್ರಹಿಸುತ್ತಿರುವ ಜಗದೀಶ ಶೆಟ್ಟರ್ ಅವರೇ 20 ದಿನ ಅಧಿವೇಶನ ನಡೆಸಿಲ್ಲ ಎಂಬ ಮುಖ್ಯಮಂತ್ರಿಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳು ಇಂತಹ ಉಡಾಫೆ ಉತ್ತರ ನೀಡುವುದು ಸರಿಯಲ್ಲ. ನಾನು ಮುಖ್ಯಮಂತ್ರಿಯಾಗಿದ್ದು 10 ತಿಂಗಳು ಮಾತ್ರ. ನನ್ನ ಅವಧಿಯಲ್ಲಿಯೇ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದೇನೆ, ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಉದ್ಘಾಟನೆ ಮಾಡಿದ ಬಳಿಕ ಅಧಿವೇಶನವನ್ನು ನಡೆಸಿದ್ದೇನೆ. 2 ವರ್ಷದಿಂದ ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯ ಕನಿಷ್ಠ ಒಂದು ತಿಂಗಳಾದರೂ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸಬೇಕು ಎಂದರು.
ಜೂ.29 ರಿಂದ 10 ದಿನಗಳ ಕಾಲ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸರ್ಕಾರ ಉದ್ದೇಶಿಸಿದೆ. ಬೆಳಗಾವಿಯಲ್ಲಿ 10 ದಿನ, ಬೆಂಗಳೂರಿನಲ್ಲಿ 10 ದಿನ ಹೀಗೆ ಮಾಡುವುದರ ಬದಲು ಬೆಳಗಾವಿಯಲ್ಲಿಯೇ 20 ದಿನಗಳ ಕಾಲ ಅಧಿವೇಶನ ನಡೆಸಬೇಕು ಎಂದು ಆಗ್ರಹಿಸಿದರು. ಭಾನುವಾರ ಬೆಳಗಾವಿ ತಾಲೂಕಿನ ಬಡಾಲಅಂಕಲಗಿ ಗ್ರಾಮಕ್ಕೆ ಭೇಟಿ ನೀಡಿದ ಶೆಟ್ಟರ್, ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಗುರುನಾಥ ಚಾಪಗಾಂವಿ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರ ಜತೆ ಮಾತನಾಡಿದರು.
Advertisement