ಬಿಹಾರ ಪತ್ರಿಕೆಗಳಲ್ಲಿ ಗೋವಿನ ಬಗ್ಗೆ ಜಾಹಿರಾತು: ಬಿಜೆಪಿ ವಿರುದ್ಧ ದೂರು ನೀಡಲಿರುವ ಜೆಡಿಯು
ನವದೆಹಲಿ: ಬಿಹಾರ ಚುನಾವಣೆಗೆ ಬಿಜೆಪಿ ಕೋಮುವಾದದ ಬಣ್ಣ ನೀಡುತ್ತಿದೆ ಎಂದು ಆರೋಪಿಸಿರುವ ಜೆಡಿಯು, ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದೆ.
ಮಹಿಳೆಯೊಬ್ಬರು ಗೋವನ್ನು ಅಪ್ಪಿಕೊಂಡಿರುವ ಜಾಹೀರಾತನ್ನು ಬಿಜೆಪಿ ಪತ್ರಿಕೆಗಳಲ್ಲಿ ಪ್ರಕಟಿಸಿದ್ದು ಕೋಮುವಾದದ ಬಣ್ಣ ನೀಡಲು ಯತ್ನಿಸುತ್ತಿದೆ ಎಂದು ಜೆಡಿಯು ಆರೋಪಿಸಿದೆ. ಚುನಾವಣಾ ಆಯೋಗದ ಸಹನೆಯನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ದೂರು ನೀಡುತ್ತೇವೆ ಎಂದು ಜೆಡಿಯು ನಾಯಕ ಕೆಸಿ ತ್ಯಾಗಿ ಹೇಳಿದ್ದಾರೆ.
ಧಾರ್ಮಿಕ ನೆಲೆಗಟ್ಟಿನಲ್ಲಿ ಮತಯಾಚಿಸುವುದಕ್ಕೆ ಸಾಧ್ಯವಿಲ್ಲವಾದ್ದರಿಂದ ಪತ್ರಿಕೆಗಳಲ್ಲಿ ಗೋವಿನ ಕುರಿತಾದ ಜಾಹಿರಾತನ್ನು ಪ್ರಕಟಿಸುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಬಿಹಾರದಲ್ಲಿ ಅಂತಿಮ ಹಂತದ ಮತದಾನ ನಡೆಯುವುದಕ್ಕೂ ಒಂದು ದಿನ ಮುನ್ನ ಬೀಫ್ ಕುರಿತ ನಿತೀಶ್ ಕುಮಾರ್ ಮೈತ್ರಿಕೂಟದ ನಾಯಕರು ನೀಡಿರುವ ಹೇಳಿಕೆಗಳನ್ನು ಪ್ರಶ್ನಿಸಿರುವ ಬಿಜೆಪಿ ಪತ್ರಿಕೆಗಳಲ್ಲಿ ಮಹಿಳೆಯೊಬ್ಬರು ಗೋವನ್ನು ಅಪ್ಪಿಕೊಂಡಿರುವ ಜಾಹೀರಾತನ್ನು ಪ್ರಕಟಿಸಿದೆ.
ರಾಜಕೀಯ ನಿಲ್ಲಿಸಿ, ಗೋಮಾಂಸದ ಬಗ್ಗೆ ಲಾಲು ಪ್ರಸಾದ್ ಯಾದವ್ ಹಾಗೂ ಇನ್ನಿತರ ನಾಯಕರು ನೀಡಿರುವ ಹೇಳಿಕೆಗಳನ್ನು ಸಮರ್ಥಿಸುತ್ತೀರಾ ಎಂಬುದನ್ನು ಹೇಳಿ ಎಂದು ನಿತೀಶ್ ಕುಮಾರ್ ಗೆ ಬಿಜೆಪಿ ಜಾಹೀರಾತಿನ ಮೂಲಕ ಕೇಳಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ