ಬರ ಚರ್ಚೆಗೂ ಗದ್ದಲ
ವಿಧಾನಸಭೆ: ರಾಜ್ಯ ವಿಧಾನ ಮಂಡಲದ ಕಲಾಪ ಬುಧ ವಾರ ಅಧಿಕೃತವಾಗಿ ಆರಂಭಗೊಂಡಿದ್ದು, ಬರ, ಕಳಸಾ-ಬಂಡೂರಿ ಹಾಗೂ ಕಾನೂನು-ಸುವ್ಯವಸ್ಥೆ ವಿಚಾರ ಸದ್ದು ಮಾಡಿದ್ದು, ವಿಧಾನಸಭೆಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಬರದ ಬಗ್ಗೆ ಚರ್ಚೆ ನಡೆಯಲಿದೆ.
ಕಲಾಪ ಆರಂಭವಾಗುವುದಕ್ಕೆ ಮುನ್ನ ವಿಧಾನಸಭೆಯ ಹೆಬ್ಬಾಗಿಲ ಬಳಿ ಕಳಸಾ-ಬಂಡೂರಿ, ಎತ್ತಿನಹೊಳೆ ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಜೆಡಿಎಸ್ ಸದಸ್ಯರು, ಮೊದಲು ಇವೆರಡು ವಿಚಾರಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಸ್ಪೀಕರ್ ಪೀಠದ ಮುಂದೆ ಧರಣಿ ನಡೆಸಿದರು. ಆದರೆ ಬರದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಆದರೆ ಸರ್ಕಾರ ಮಾತ್ರ ಪ್ರಶ್ನೋತ್ತರ ಕಲಾಪ ಮುಗಿದ ಬಳಿಕವೇ ನಿಯಮ 69ರ ಪ್ರಕಾರ ಚರ್ಚೆ ನಡೆಸೋಣ ಎಂಬ ವಾದಕ್ಕೆ ಅಂಟಿಕೊಂಡಿತು.
ಮೂರು ಪಕ್ಷಗಳು ಮೂರು ದಿಕ್ಕಿನಲ್ಲಿ ಸಾಗಿದ್ದರಿಂದ ಸದನದಲ್ಲಿ ಏನು ನಡೆಯುತ್ತಿದೆ ಎಂಬುದೇ ಅರ್ಥವಾ ಗದ ಸ್ಥಿತಿ ನಿರ್ಮಾಣವಾಯಿತು. ಇದರಿಂದ ಸಿಟ್ಟಿಗೆದ್ದ ಸ್ಪೀಕರ್ ಮೂರು ಪಕ್ಷದ
ಶಾಸಕರನ್ನು ಗದರಿಸಿ ಸುಮ್ಮನಾಗಿಸಿದರು. ಇಚ್ಛಾಶಕ್ತಿ ಇಲ್ಲ: ಪ್ರಶ್ನೋತ್ತರ ಕಲಾಪವನ್ನು ರದ್ದುಗೊಳಿಸಿ ಬರದ ಬಗ್ಗೆ ಚರ್ಚೆ ನಡೆಸುವುದಕ್ಕೆ ಸರ್ಕಾರ ಒಪ್ಪಿಗೆ ನೀಡಬೇಕೆಂದು ಆಗ್ರಹಿಸಿದ ಬಿಜೆಪಿಯ ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಸುನೀಲ್ ಕುಮಾರ್, ಸಿ.ಟಿ.ರವಿ, ಕೆ,ಜಿ.ಬೋಪಯ್ಯ, ಜೀವರಾಜ್, ಬಸವರಾಜ್ ಮಹಾಮನಿ ಮೊದಲಾದವರು, ರಾಜ್ಯ ಸರ್ಕಾರಕ್ಕೆ ಬರ ಪರಿಸ್ಥಿತಿ ನಿಭಾಯಿಸುವುದಕ್ಕೆ ಇಚ್ಛಾಶಕ್ತಿ ಇಲ್ಲ.
ಬರ ನಿರ್ವಹಣೆ ಸಮರ್ಪಕವಾಗಿದ್ದರೆ, ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸುವ ಸನ್ನಿವೇಶವೇ ಸೃಷ್ಟಿಯಾಗುತ್ತಿರಲಿಲ್ಲ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 800 ರೈತರು ಬರದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಸಮಸ್ಯೆಯ ಗಾಂಭೀರ್ಯವನ್ನೇ ಅರಿತಿಲ್ಲ ಎಂದು ಆರೋಪಿಸಿದರು. ಆದರೆ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಕಾಂಗ್ರೆಸ್ ಶಾಸಕರಾದತನ್ವೀರ್ ಸೇಠ್, ಎನ್.ಎ.ಹ್ಯಾರೀಸ್, ಪ್ರಸನ್ನಕುಮಾರ್, ಪ್ರಿಯಾಂಕ ಖರ್ಗೆ, ಡಾ.ರಫೀಕ್ ಅಹ್ಮದ್ ಪ್ರಶ್ನೋತ್ತರ ಕಲಾಪ ಮುಗಿದ ಬಳಿಕ ಚರ್ಚೆ ಆರಂಭಿಸುವಂತೆ
ಒತ್ತಾಯಿಸಿದರು.
ಕೊನೆಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ನಿಯಮ 69ರ ಪ್ರಕಾರ ಪೂರ್ವಭಾವಿಯಾಗಿ ವಿಷಯ ಪ್ರಸ್ತಾಪಕ್ಕೆ ಬಿಜೆಪಿಯ ಗೋವಿಂದ ಕಾರಜೋಳ ಅವರಿಗೆ ಅವಕಾಶ ನೀಡಿದರು.
ಪ್ರಶ್ನೋತ್ತರ ಬಳಿಕ ಚರ್ಚೆಗೆ ಎಲ್ಲ ಜಿಲ್ಲೆಗಳ ಸದಸ್ಯರಿಗೆ ಅವಕಾಶ ನೀಡುವುದಾಗಿ ಸ್ಪೀಕರ್ ಭರವಸೆ ನೀಡಿದರು.