ಸದನಗಳಲ್ಲಿ ಮಹದಾಯಿ ಸದ್ದು

ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವ ಕಳಸಾಬಂಡೂರಿ ಹಾಗೂ ಎತ್ತಿನಹೊಳೆ ಯೋಜನೆಗಳು ವಿಧಾನಮಂಡಲದ ಉಭಯ ಸದನಗಳಲ್ಲೂ ಬುಧವಾರ ಪ್ರತಿಧ್ವನಿಸಿತು...
ಸದನಗಳಲ್ಲಿ ಮಹದಾಯಿ ಸದ್ದು
ಸದನಗಳಲ್ಲಿ ಮಹದಾಯಿ ಸದ್ದು

ವಿಧಾನಸಭೆ/ ವಿಧಾನಪರಿಷತ್: ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವ ಕಳಸಾಬಂಡೂರಿ ಹಾಗೂ ಎತ್ತಿನಹೊಳೆ ಯೋಜನೆಗಳು ವಿಧಾನಮಂಡಲದ ಉಭಯ ಸದನಗಳಲ್ಲೂ ಬುಧವಾರ ಪ್ರತಿಧ್ವನಿಸಿತು.

ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಧರಣಿ ನಡೆಸಿದರೆ ಪರಿಷತ್‍ನಲ್ಲಿ ಈ ಬಗ್ಗೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು ಕೋಲಾಹಲಕ್ಕೆ ಕಾರಣವಾಯಿತು.
ಕಲಾಪ ಆರಂಭಕ್ಕೂ ಮುನ್ನ ವಿಧಾನಸಭೆಯ ಹೆಬ್ಬಾಗಿಲ ಬಳಿ ಕಳಸಾಬಂಡೂರಿ, ಎತ್ತಿನಹೊಳೆ ಯೋಜನೆ ಜಾರಿಗೆ ಆಗ್ರಹಿಸಿ ಕೋನರೆಡ್ಡಿ ಸೇರಿದಂತೆ ನಾಲ್ಕೈದು ಜೆಡಿಎಸ್ ಸದಸ್ಯರು ಧರಣಿ ನಡೆಸಿ ನಂತರ ಇವೆರಡು ವಿಚಾರಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಸ್ಪೀಕರ್ ಪೀಠದ ಮುಂದೆಯೂ ಧರಣಿ ನಡೆಸಿದರು. ಆದರೆ ಬರದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದಾಗ ಗದ್ದಲ ಉಂಟಾಯಿತು.

ಈ ಮಧ್ಯೆ ಮೇಲ್ಮನೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಳಸಾ ಬಂಡೂರಿ ಯೋಜನೆ ಅನುಷ್ಠಾ ನಕ್ಕೆ ಇರುವ ಅಡಚಣೆಗಳೇನು? ಗೋವಾ ಸರ್ಕಾರ ದೊಂದಿಗೆ ರಾಜ್ಯ ಸರ್ಕಾರ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಪ್ರಯತ್ನಿ ಸಿತೇ ಎಂದು ಬಿಜೆಪಿಯ ಕ್ಯಾ. ಗಣೇಶ್ ಕಾರ್ಣಿಕ್ ಪ್ರಶ್ನೆ ಎತ್ತಿದರು. ಸಚಿವ ಎಂ.ಬಿ.ಪಾಟೀಲ್ ಉತ್ತರ ನೀಡುವಾಗ ಪ್ರಧಾನಿ ಹೆಸರು ಹೇಳಿ ಕೆಣಕಿದ್ದು ಕೋಲಾಹಲಕ್ಕೆ ಕಾರಣವಾಯಿತು. ಇದಕ್ಕೂ ಮುನ್ನ ಮಾತನಾಡಿ ಕೆ.ಎಸ್. ಈಶ್ವರಪ್ಪ, ಗೋವಾ ಹಾಗೂ ಮಹಾರಾಷ್ಟ್ರಗಳ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದೊಂದಿಗೆ ಮಾತುಕತೆ ಮಾಡಿ ಸಮಸ್ಯೆ ಬಗೆಹರಿಸೋಣ, ರಾಜಕೀಯ ಪಕ್ಕಕ್ಕಿಡೋಣ ಎಂದು ಜಲಸಂಪನ್ಮೂಲ ಸಚಿವರಿಗೆ ಆಹ್ವಾನ ನೀಡಿದರು.

ಪ್ರತಿಪಕ್ಷ ನಾಯಕರ ಈ ಆಹ್ವಾನದಿಂದ ಅಸಮಾಧಾನಗೊಂಡ ಸಚಿವ ಎಂ.ಬಿ.ಪಾಟೀಲ್, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿಗೆ ಸರ್ವಪಕ್ಷ ನಿಯೋಗ ತೆರಳಿ ನ್ಯಾಯಾಧಿಕರಣದ ಹೊರಗೆ ಇತ್ಯರ್ಥ ಪಡಿಸುವಂತೆ ಮನವಿ ಮಾಡಲಾಗಿದೆ. ಹೀಗಾಗಿ ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನು ಕರೆದು, ಸಭೆ ನಡೆಸಿ, ಸಮಸ್ಯೆ ಬಗೆಹರಿಸಲು ಪ್ರಧಾನಿ ಮೋದಿ ಅವರೇ ಮುಂದಾಗಬೇಕಿದೆ, ನೀವು ಪ್ರಧಾನಿಯವರ ಮೇಲೆ ಒತ್ತಡ ಹೇರಿ ಎಂದು ಈಶ್ವರಪ್ಪವರನ್ನು ಒತ್ತಾಯಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ತಪ್ಪಾಗಿ ಹೇಳಲಾಗುತ್ತಿದೆ. ಎರಡೂ ರಾಜ್ಯಗಳ ಆಡಳಿತ ಹಾಗೂ ವಿರೋಧ
ಪಕ್ಷಗಳನ್ನು ಜೊತೆ ಸೇರಿಸುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದರು. ಈ ವಿಚಾರದಲ್ಲಿ ಅನಗತ್ಯ ರಾಜಕೀಯ ಮಾಡಲಾಗುತ್ತಿದೆ. ಗೋವಾ ಕಾಂಗ್ರೆಸ್ ಮುಖಂಡರನ್ನು ನೀವು ಕರೆತನ್ನಿ ಎಂದು ಹೇಳಿದರಲ್ಲದೆ, ಗೋವಾ ಸರ್ಕಾರ ಯೋಜನೆಗೆ ಸಹಕಾರ ನೀಡಲು ಸಿದ್ಧವಾಗಿದೆ ಎಂದು ಇತ್ತೀಚೆಗೆ ಅಲ್ಲಿನ ಸಿಎಂ ಹೇಳಿಕೆ ನೀಡಿದ್ದಾರೆ. ವಿರೋಧ ಪಕ್ಷ ಕಾಂಗ್ರೆಸ್ ನಾಯಕರ ಮನವೊಲಿಸಲು ನೀವು ಪ್ರಯತ್ನಿಸಿ ಎಂದು ಮತ್ತೆ ತಿರುಗೇಟು ನೀಡಿದರು.

ಈ ವೇಳೆ ಪ್ರಧಾನಿ ಮೋದಿಯೇ 3 ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಇತ್ಯರ್ಥ ಪಡಿಸುವಂತೆ ಆಡಳಿತ ಪಕ್ಷದ ಸದಸ್ಯರು ಮಾತಿಗಿಳಿದರು. ಇತ್ತ ವಿಪಕ್ಷ ಸದಸ್ಯರು ಗೋವಾ ಕಾಂಗ್ರೆಸ್ ನೀವು ಮನವೊಲಿಸಬೇಕು ಎಂದು ಮಾತಿಗಿಳಿದರು. ಮಧ್ಯೆ ಪ್ರವೇಶಿಸಿದ ಸಭಾಪತಿ ಡಿ.ಎಚ್.ಶಂಕರ ಮೂರ್ತಿ ಪರಿಸ್ಥಿತಿ ತಿಳಿಗೊಳಿಸಿದರು. ಗಣೇಶ್ ಕಾರ್ಣಿಕ್ ಮಾತ್ರ ತಮ್ಮ ಪ್ರಶ್ನೆಗೆ ಸರ್ಕಾರದಿಂದ ಸೂಕ್ತ ಉತ್ತರ ಬಾರದೇ ಇದ್ದಿದ್ದರಿಂದ ಬೇಸರದಿಂದ ಕುಳಿತರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com