
ಬೆಂಗಳೂರು: ಚಳಿಗಾಲದ ಅಧಿವೇಶನದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿರಬೇಕಾದರೆ, ಕಲಾಪಕ್ಕೆ ಗೈರು ಆದ ಸಚಿವರನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಗುರುವಾರ ನಡೆಯಿತು.
ಪ್ರತಿಪಕ್ಷಗಳ ಸದಸ್ಯರು ಸದನದಲ್ಲಿ ಸಚಿವರ ಗೈರು ಹಾಜರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ದಾದ ನಡೆಯಿತು. ಇದರಿಂದ ಆಕ್ರೋಶಗೊಂಡ ಸ್ಪೀಕರ್, ಇದೇನು ತಮಾಷೆಯ ಆಟ ಅಂದುಕೊಂಡಿದ್ದೀರಾ? ನಾನು ಈ ವಯಸ್ಸಿನಲ್ಲೂ ಸಕಾಲಕ್ಕೆ ಆಗಮಿಸಿ, ದಿನಪೂರ್ತಿ ಕಲಾಪದಲ್ಲಿ ಕೂರುತ್ತೇನೆ. ನಿಮಗೇನು ಸಮಸ್ಯೆ ಎಂದು ತರಾಟೆಗೆ ತೆಗೆದುಕೊಂಡರು.
ಇಂದು ಕಲಾಪ ಆರಂಭವಾದ ಕೂಡಲೇ ಪ್ರಶ್ನೋತ್ತರಗಳನ್ನು ಕೈಗೆತ್ತಿಕೊಳ್ಳಲು ಸ್ಪೀಕರ್ ಮುಂದಾದರು. ಆದರೆ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಸಚಿವರೇ ಇಲ್ಲದಿರುವುದರ ಬಗ್ಗೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಹರಿಹಾಯ್ದರು.
ಶಾಸಕರಾದ ಶಶಿಕಲಾ ಜೊಲ್ಲೆ, ಎನ್.ಎ.ಹ್ಯಾರೀಸ್ ಹಾಗೂ ಮಾನಪ್ಪ ವಜ್ಜಲ್ ಅವರ ಪ್ರಶ್ನೆಗಳಿಗೆ ಆರೋಗ್ಯ ಸಚಿವ ಯು.ಟಿ.ಖಾದರ್, ಬಿಜೆಪಿಯ ಅಶ್ವತ್ಥ್ ನಾರಾಯಣ್ ಅವರ ಪ್ರಶ್ನೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ಉತ್ತರಿಸಬೇಕಾಗಿತ್ತು. ಈ ಇಬ್ಬರೂ ಸದನಕ್ಕೆ ಗೈರು ಆಗಿದ್ದರು.
Advertisement