ನೀರಿನ ಬವಣೆ ಬಿಚ್ಚಿಟ್ಟ ಪ್ರತಿಪಕ್ಷ

ರಾಜ್ಯದ 2500 ಜನವಸತಿ ಪ್ರದೇಶಗಳಲ್ಲಿ ಕಲುಷಿತ ಮತ್ತು ವಿಷಯುಕ್ತ ನೀರು ಪೂರೈಕೆಯಾಗುತ್ತಿದ್ದು, ಸಾವಿರಾರು ಅಂಗನವಾಡಿ ಶಾಲೆಗಳಲ್ಲಿ ನೀರಿಲ್ಲದೆ ಮಕ್ಕಳು ಪರದಾಡುವಂತಾಗಿದೆ ಎಂದು ರಾಜ್ಯದಲ್ಲಿರುವ ನೀರಿನ ಬವಣೆಯನ್ನು ಬಿಜೆಪಿ ಸದನದಲ್ಲಿ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ವಿಧಾನಸಭೆ: ರಾಜ್ಯದ 2500 ಜನವಸತಿ ಪ್ರದೇಶಗಳಲ್ಲಿ ಕಲುಷಿತ ಮತ್ತು ವಿಷಯುಕ್ತ ನೀರು ಪೂರೈಕೆಯಾಗುತ್ತಿದ್ದು, ಸಾವಿರಾರು ಅಂಗನವಾಡಿ ಶಾಲೆಗಳಲ್ಲಿ ನೀರಿಲ್ಲದೆ ಮಕ್ಕಳು ಪರದಾಡುವಂತಾಗಿದೆ ಎಂದು ರಾಜ್ಯದಲ್ಲಿರುವ ನೀರಿನ ಬವಣೆಯನ್ನು ಬಿಜೆಪಿ ಸದನದಲ್ಲಿ ಬಿಚ್ಚಿಟ್ಟಿತು.

ಬುಧವಾರ ಸದನದಲ್ಲಿ ರಾಜ್ಯದ ಬರ ಪರಿಸ್ಥಿತಿ ಕುರಿತ ನಿಲುವಳಿ ಸೂಚನೆ ಮೇಲೆ ಚರ್ಚಿಸಿದ ಬಿಜೆಪಿ ಹಿರಿಯ ಸದಸ್ಯ ಗೋವಿಂದ ಕಾರಜೋಳ, ರಾಜ್ಯದಲ್ಲಿ ನೀರಿನ ಬವಣೆಯನ್ನು ನೋಡಿದರೆ ಜನರು ಇನ್ನುಮುಂದೆ ಖರೀದಿಸಿ ಕುಡಿಯುವ ಕಾಲ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಬರ ಪರಿಸ್ಥಿತಿ ಮೇಲಿನ ಚರ್ಚೆ ವೇಳೆ ಸದನದಲ್ಲಿ ಸಚಿವರಿಲ್ಲ, ಶಾಸಕರಿಲ್ಲದೆ ಬಣಗುಡುತ್ತಿರುವ ಸ್ಥಿತಿ ನೋಡಿ ಬೇಸರ ವ್ಯಕ್ತಪಡಿಸಿದ ಅವರು, ಸರ್ಕಾರ ಬರ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲು ಆಗಿಲ್ಲ. ಕನಿಷ್ಠ ಚರ್ಚೆ ನಡೆಯುವಾಗ ಕೇಳುವುದಕ್ಕಾದರೂ ಆಸಕ್ತಿ ತೋರಿಸಬಾರದೇ ಎಂದು ಟೀಕಿಸಿದರು.

ರಾಜ್ಯದಲ್ಲಿ ಬಿsೀಕರ ಬರ ಪರಿಸ್ಥಿತಿ ಉಂಟಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಜನರು ಕುಡಿಯುವ ನೀರು ಸಿಗುತ್ತಿಲ್ಲ. ಜಾನುವಾರುಗಳಿಗೆ ಮೇವು ದೊರೆಯುತ್ತಿಲ್ಲ. ಜನರಿಗೆ ಕೂಲಿ ಕೆಲಸವೂ ಇಲ್ಲದೆ ನೆರೆ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ ನೀಡುತ್ತಿದ್ದ 30 ಕೆ.ಜಿ. ಅಕ್ಕಿಯನ್ನು ಬರೀ 3 ಕೆ.ಜಿ.ಗೆ ಇಳಿಸಿದೆ ಎಂದು ದೂರಿದರು.

ಒಟ್ಟಾರೆ 2.12ಲಕ್ಷ ಬೋರ್‍ವೆಲ್ ಗಳು ನೀರಿಲ್ಲದೆ ಬತ್ತಿ ಹೋಗಿವೆ. 2500 ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರು ಕಲುಷಿತವಾಗಿದ್ದು, ಅನೇಕ ರಾಸಾಯನಿಕ ಅಂಶಗಳಿರುವ ವಿಷಯುಕ್ತ ನೀರು ಪೂರೈಕೆಯಾಗುತ್ತಿದೆ. ಸರ್ಕಾರದಿಂದ ಸ್ಥಾಪಿಸುವ ಶುದ್ಧ ಕುಡಿಯುವ ನೀರಿನ ಘಟಕಗಳು ನಿರೀಕ್ಷಿತ ರೀತಿಯಲ್ಲಿ ಆರಂಭವಾಗಿಲ್ಲ. ಏಕೆಂದರೆ, 4000 ಘಟಕಗಳನ್ನು ಸ್ಥಾಪಿಸುವುದಾಗಿ ಸರ್ಕಾರ ಹೇಳಿದೆ. ಆದರೆ, ಅದಕ್ಕೆ ಹಣವಿಲ್ಲದೆ ಪಿಪಿಪಿ ಮಾದರಿಯಲ್ಲಿ ಖಾಸಗಿ ನೆರವು ಪಡೆಯಲು ಮುಂದಾಗಿದೆ. ರಸ್ತೆ ನಿರ್ಮಿಸಿ ಸವಾರರಿಗೆ ಟೋಲ್ ಹಾಕಿದಂತೆ ನೀರಿಗೂ ದರ ವಿಧಿಸಲಾಗುತ್ತದೆ. ಇದೇ ರೀತಿ ಮಾಡಿ ಸರ್ಕಾರ ಜನರ ಕೈಗೆ ಭಿಕ್ಷಾ ಪಾತ್ರೆ ನೀಡುತ್ತದೆ ಎಂದು ಕಾರಜೋಳ ಬರ ಸಮಸ್ಯೆ ಬಿಡಿಸಿಟ್ಟರು.

ರಾಜಿನಾಮೆ ಬೆದರಿಕೆ ಇದೇ ವೇಳೆ, ರಾಜ್ಯದಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯ ಎಂಬ ಸಂಸ್ಥೆ ಇರುವುದೇ ಒಂದು. ಆದರೆ ಅದಕ್ಕೆ ನೀರಿನ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಇದೇ ಪರಿಸ್ಥಿತಿ ಮುಂದುವರಿಸಿದರೆ ನೀರಿಲ್ಲದೆ ಆ ಸಂಸ್ಥೆಯನ್ನೇ ಮುಚ್ಚಬೇಕಾಗುತ್ತದೆ ಎಂದು ಉತ್ತರ ಕರ್ನಾಟಕ ಭಾಗದ ನೀರಿನ  ಬವಣೆಯ ಗಂಭೀರತೆ ವಿವರಿಸಿದರು. ಕೆಜೆಪಿಯ ಬಿ.ಆರ್.ಪಾಟೀಲ್, ಬರ ಪರಿಸ್ಥಿತಿ ಪರಿಹಾರಕ್ಕಾಗಿ ಸರ್ಕಾರ ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿದೆ. ಆದರೆ ಕಾರ್ಯಪಡೆಯ ವೆಚ್ಚದ ವ್ಯಾಪ್ತಿಯನ್ನು ಬರೀ ರು.50 ಲಕ್ಷಕ್ಕೆ ಸೀಮಿತಗೊಳಿಸಲಾಗಿದೆ. ಬರ ಪರಿಸ್ಥಿತಿ ಭೀಕರವಾಗಿರುವುದರಿಂದ ಈ ಹಣ ಏನೇನೂ ಸಾಲುತ್ತಿಲ್ಲ.

ಇದನ್ನು ಸರ್ಕಾರ ಕೂಡ ಅರ್ಥ ಮಾಡಿಕೊಳ್ಳುತ್ತಿಲ್ಲ. ಆದ್ದರಿಂದ ಈ ನೀತಿಯನ್ನು ಬದಲಿಸಬೇಕು. ಇಲ್ಲದಿದ್ದರೆ, ಕಾರ್ಯಪಡೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಗುಡುಗಿದರು. ಬರ ಪರಿಸ್ಥಿತಿ ಕುರಿತ ಚರ್ಚೆಯಲ್ಲಿ ಜೆಡಿಎಸ್‍ನ ಎಚ್.ಡಿ.ರೇವಣ್ಣ, ಶಿವಲಿಂಗೇಗೌಡ, ಕಾಂಗ್ರೆಸ್‍ನ ಮಾಲಿಕಯ್ಯ ಗುತ್ತೇದಾರ, ಶಿವಮೂರ್ತಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com