ಹಾವೇರಿ: ದೇಶಾದ್ಯಂತ ರೈತರು ಸಮಸ್ಯೆ ಎದುರಿಸುತ್ತಿದ್ದು, ಅದಕ್ಕೆ ಕಾರಣಗಳನ್ನು ತಿಳಿದು ಪರಿಹಾರ ಕಂಡುಕೊಳ್ಳಲು ರಾಹುಲ್ ಗಾಂಧಿಯವರು ದೇಶ-ವ್ಯಾಪಿ ಪ್ರವಾಸ ಮಾಡುತ್ತಿದ್ದು, ರಾಜ್ಯದ ರೈತರ ಸಮಸ್ಯೆ ಅರಿಯಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ್ಯ ಡಾ. ಜಿ. ಪರಮೇಶ್ವರ ತಿಳಿಸಿದರು. ರಾಹುಲ್ ಭೇಟಿ ಹಿನ್ನೆಲೆಯಲ್ಲಿ ರಾಣಿಬೆನ್ನೂರು ತಾಲೂಕಿನ ಮೈದೂರು ಗ್ರಾಮದಲ್ಲಿ ನಡೆಯುತ್ತಿರುವ ಸಿದ್ಧತಾ ಕಾರ್ಯಗಳನ್ನು ಬುಧವಾರ ವೀಕ್ಷಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಬ್ಬಿಗೆ ಬೆಲೆ, ನೀರಾವರಿ, ಸಾಲ ನೀಡುವ ಪದ್ಧತಿಯಲ್ಲಿ ಮಾರ್ಪಾಡು, ಬೆಳೆ ವಿಮೆ ಇತ್ಯಾದಿ ಸಮಸ್ಯೆ ಕುರಿತು ರೈತರಿಂದಲೇ ಮಾಹಿತಿ ಪಡೆಯುತ್ತಿದ್ದಾರೆ. ರೈತರಿಂದ ಸಲಹೆ ಸೂಚನೆ ಪಡೆದು ಸಮಸ್ಯೆ ಪರಿಹರಿಸಲು ಯೋಜನೆ ರೂಪಿಸ ಲಾಗುವುದು. ರಾಜ್ಯದಲ್ಲಿ ಪಕ್ಷದ ಸರ್ಕಾರವಿದ್ದು, ಇಲ್ಲಿ ಅದನ್ನು ಜಾರಿಗೆ ತಂದುಅದನ್ನೇ ರಾಷ್ಟ್ರಮಟ್ಟದಲ್ಲೂ ಅಳವಡಿಸಬಹುದೇ ಎಂದು ಪರಿಶೀಲಿಸಲು ರಾಹುಲ್ ಗಾಂಧಿಯವರು ಪ್ರವಾಸ ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.