ಬೆಂಗಳೂರು: ಮಂಡ್ಯ ಜಿಲ್ಲೆಯ ಸಣಬದ ಕೊಪ್ಪಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಲೋಕೇಶ್ ಕುಟುಂಬಕ್ಕೆ ಚೆಕ್ ಹಸ್ತಾಂತರಿುವ ವಿಚಾರದಲ್ಲಿ ಗೊಂದಲ ಸೃಷ್ಟಿಸಿರುವ ಮಾಜಿ ಸಂಸದೆ ರಮ್ಯಾ ನಡವಳಿಕೆ ಪಕ್ಷದಲ್ಲಿ ಅಸಮಾಧಾನ ಸೃಷ್ಟಿಸಿದೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಲೋಕೇಶ್ ಪತ್ನಿಗೆ ನೀಡಿದ್ದ 1 ಲಕ್ಷ ಚೆಕ್ ವಾಪಸ್ ಪಡೆದ ಕ್ರಮದಿಂದ ಬೇಸತ್ತಿರುವ ಕುಟುಂಬ ಚೆಕ್ ಸ್ವೀಕರಿಸಲು ನಿರಾಕರಿಸಿದೆ.
ಮಂಡ್ಯದಲ್ಲಿ ರಾಹುಲ್ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಯಶವಂತಪುರ ಕಾಂಗ್ರೆಸ್ ಶಾಸಕ ಎಸ್. ಟಿ, ಸೋಮಶೇಖರ್ ಬೆಂಗಳೂರಿನಲ್ಲಿ ಸೋಮವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಹರಿಪ್ರಸಾದ್ ರನ್ನು ಭೇಟಿಯಾಗಿ ಚೆಕ್ ಹಸ್ತಾಂತರದ ರಾದ್ದಾಂತ ಕುರಿತು ಮಾಹಿತಿ ನೀಡಿದ್ದಾರೆ. ಹೀಗಾಗಿ ಪ್ರಕರಣ ಹೈಕಮಾಂಡ್ ತಲುಪಿದ್ದು ಸದ್ಯದಲ್ಲೇ ರಾಹುಲ್ ಗೆ ವರದಿ ಸಲ್ಲಿಕೆಯಾಗಲಿದೆ. ಕ್ರಮ ಕೈಗೊಳ್ಳಲು ದೂರು ನೀಡಿದ್ದಾಗೆ ಸೋಮಶೇಖರ್ ತಿಳಿಸಿದ್ದಾರೆ.
ಘಟನೆ ಏನು?: ರೂ. 1 ಲಕ್ಷ ಮೊತ್ತದ ಕೆಪಿಸಿಸಿ ಚೆಕ್ ಅನ್ನು ಲೋಕೇಶ್ ಪತ್ನಿಗೆ ರಾಹುಲ್ ನೀಡಿದ್ದರು. ಅದನ್ನು ಗಲಿಬಿಲಿಯಲ್ಲಿ ಜಗುಲಿಯಲ್ಲೇ ಬಿಟ್ಟಿದ್ದರು. ಇದನ್ನು ಗಮನಿಸಿದ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಅವರು, ಆ ಚೆಕ್ ತೆಗೆದುಕೊಂಡು ಸಂಸದ ಪುಟ್ಟರಾಜು ಕೈಗೆ ಕೊಟ್ಟು ಲೋಕೇಶ್ ಪತ್ನಿ ಖಾತೆಗೆ ಜಮಾ ಮಾಡಿಸುವಂತೆ ಸೂಚಿಸಿದ್ದರು. ಇದಕ್ಕೆ ಮಾಜಿ ಸಂಸದೆ ರಮ್ಯಾ ಆಕ್ಷೇಪ ವ್ಯಕ್ತ ಪಡಿಸಿ, ಆ ಚೆಕ್ ಅನ್ನು ವಾಪಸ್ ತರಿಸಿದ್ದರು. ಆದೀಗ ಕೆಪಿಸಿಸಿಯಲ್ಲಿದೆ.
Advertisement