ಮಂಡ್ಯ: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರ ಕಾಲ್ಗುಣ ಸರಿಯಿಲ್ಲ. ಅವರು ಸಿನಿಮಾ ನಟಿ, ಅವರನ್ನು ಮತದಾರರು ನಂಬಬಾರದು ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರಿಗೆ ರಮ್ಯಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್ .ಪೇಟೆ ತಾಲ್ಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಸ್ವತಃ ನಿರ್ಮಾಪಕರು. ಅವರ ಪತ್ನಿ ಸಿನಿಮಾ ನಟಿ. ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ಮಗ ಕೂಡ ಹೀರೋ ಆಗಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದನ್ನು ಮೊದಲು ಅರ್ಥ ಮಾಡಿಕೊಳ್ಳಲಿ. ಅದನ್ನು ಬಿಟ್ಟು ಬೇರೆಯವರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ಕುಮಾರಸ್ವಾಮಿಯವರ ಪತ್ನಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆಯೇ ಎಂದು ಕೇಳಿದಾಗ ನಿಮಗೆ ಗೊತ್ತಿಲ್ಲವೇ, ಅವರ ಹೆಂಡತಿ ರಾಧಿಕಾ ಸಿನಿಮಾದಲ್ಲಿ ನಟಿಸುತ್ತಿಲ್ಲವೇ ಎಂದು ಮರುಪ್ರಶ್ನೆ ಹಾಕಿದರು.
ಮಂಡ್ಯ ಜಿಲ್ಲೆಗೆ ನಾನು ಕಾಲಿಟ್ಟ ಮೇಲೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಮಾರಸ್ವಾಮಿಯವರು ಹೇಳಿದ್ದು ನನಗೆ ತೀವ್ರ ಬೇಸರವನ್ನುಂಟುಮಾಡಿದೆ. ರೈತರ ಆತ್ಮಹತ್ಯೆ ವಿಷಯವನ್ನು ರಾಜಕೀಯಕ್ಕೆ ಎಳೆದು ತರುವುದು ತಪ್ಪು. ಅವರಂತೆ ನಾನು ಚಿಲ್ಲರೆ ರಾಜಕೀಯ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ನಾನು ಜೆಡಿಎಸ್ ಪಕ್ಷವನ್ನು ಮೂಲೆಗುಂಪು ಮಾಡುತ್ತೇನೆ ಎಂಬ ಭಯದಲ್ಲಿ ಸಂಸದ ಪುಟ್ಟರಾಜು ಅವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ರಮ್ಯ ಅವರ ಆಟ ನಡೆಯೋದಿಲ್ಲ ಎಂಬ ಹೇಳಿಕೆಯಲ್ಲಿಯೇ ಅವರಿಗೆ ನನ್ನ ಮೇಲೆ ಇರುವ ಭಯ ಗೊತ್ತಾಗುತ್ತದೆ. ಈ ಭಯ ಇದೀಗ ಮಾಜಿ ಮುಖ್ಯಮಂತ್ರಿಗಳಿಗೂ ಬಂದಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದೆ ಎಂದು ರಮ್ಯಾ ಕುಟುಕಿದರು.
Advertisement