ಬೆಂಗಳೂರು: ರಾಜ್ಯಸಭೆ ಚುನಾವಣೆಗಾಗಿ ನಡೆಯುತ್ತಿರುವ ಕುದುರೆ ವ್ಯಾಪಾರ, ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ಜನ ಜರ್ಝರಿತರಾಗಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು, ನೈತಿಕ ಆಡಳಿತಕ್ಕೆ ಎಡರಂಗವೇ ಪರ್ಯಾಯ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಅಭಿಪ್ರಾಯ ಪಟ್ಟಿದ್ದಾರೆ.
ಸಿಪಿಎಂ, ಸಿಪಿಐ, ಎಐಎಫ್ಬಿ, ಎಸ್ಯುಸಿಐ(ಸಿ) ಮತ್ತು ಸಿಪಿಐಎಂಎಲ್(ಲಿಬರೇಷನ್) ನಗರದಲ್ಲಿ ಆಯೋಜಿಸಿದ್ದ ‘ಪರ್ಯಾಯ ನೀತಿಗಳಿಗಾಗಿ ಎಡಪಕ್ಷಗಳ ರಾಜಕೀಯ ಸಮಾವೇಶ’ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಯುಪಿಎ ಸರ್ಕಾರ ರೂಪಿಸಿದ ಆರ್ಥಿಕ ನೀತಿಗಳನ್ನೇ ಅವಲಂಬಿಸಿ ಎನ್ಡಿಎ ಸರ್ಕಾರ ಕೋಮುವಾದ ಬಿತ್ತುತ್ತಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರದಲ್ಲಿ 2 ವರ್ಷಗಳ ಬಿಜೆಪಿ ಆಡಳಿತ ಮತ್ತು ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 3 ವರ್ಷ ನೀಡಿರುವ ಆಡಳಿತಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಈ ಹಿಂದೆ ಕರ್ನಾಟಕ ರಾಜಕೀಯದ ಬಗ್ಗೆ ಗೌರವ ಅಭಿಮಾನವಿತ್ತು. ಆದರೆ ಗಣಿ ಹಗರಣ, ಭ್ರಷ್ಟಾಚಾರದಿಂದ ಕರ್ನಾಟಕ ಕೂಡ ತತ್ತರಿಸಿ ಹೋಗಿದೆ. ಜನತೆಯ ಸಮಸ್ಯೆಗಳನ್ನು ಕೇಳೋದಕ್ಕೆ ಜನಪ್ರತಿನಿಧಿಗಳಿಗೆ ಪುರಸೊತ್ತು ಇಲ್ಲದಂತಾಗಿದೆ ಎಂದು ದೂರಿದ್ದಾರೆ.
ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಎರಡು ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವಂತಹ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿಲ್ಲ ಎಂದು ಹೇಳಿದ ಅವರು, ಮೋದಿ ವಿದೇಶ ಪ್ರವಾಸ ಮಾಡುವುದರಲ್ಲೇ ದಾಖಲೆ ನಿರ್ಮಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಮೋದಿ ಸರ್ಕಾರ ಕೋಮುವಾದಿ ಶಕ್ತಿಯನ್ನು ಕಾನೂನು ಬದ್ಧಗೊಳಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಯಚೂರಿ ಆಪಾದಿಸಿದರು.
Advertisement