ಮಾಗಡಿ: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಂದ ಕೆಪಿಸಿಸಿ ಸದಸ್ಯ ಎ. ಮಂಜು ಮಧ್ಯಸ್ಥಿಕೆಯಲ್ಲಿ ಹಣ ಪಡೆದು ರಾಜ್ಯಸಭೆ ಚುನಾವಣೆಯಲ್ಲಿ ಮತ ಹಾಕಿದ್ದೇನೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ.
ಮಾಗಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕೃಷ್ಣ , ರಾಜ್ಯಸಭೆ ಚುನಾವಣೆಯಲ್ಲಿ ಹಣ ಪಡೆದಿರುವ ಬಗ್ಗೆ ಕಾಂಗ್ರೆಸ್ಸಿನ ಜಿಪಂ ಸದಸ್ಯ ಎ. ಮಂಜುನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಲು ನನಗೆ ಡಿ.ಕೆ. ಶಿವಕುಮಾರ್ ಬಳಿಯಿಂದ ಹಣ ತಂದು ಕೊಟ್ಟಿದ್ದು ಎ.ಮಂಜು ಎಂದರು. ಎಷ್ಟು ಹಣ ಕೊಟ್ಟರು?' ಎಂಬ ಪ್ರಶ್ನೆಗೆ ಎಷ್ಟು ಹಣ ಕೊಟ್ಟಿದ್ದಾರೆ ಎಂದು ಅವರನ್ನೇ ಕೇಳಿ ಎಂದು ಹಾರಿಕೆಯ ಉತ್ತರ ಕೊಟ್ಟಿದ್ದಾರೆ.
ಯಾವುದೇ ಹುದ್ದೆಯ ಆಶ್ವಾಸನೆ ನೀಡಿದರೂ, ಯಾವ ಪಕ್ಷ ಕ್ಕೂ ಹೋಗುವುದಿಲ್ಲ. ನನ್ನ ಕರ್ಮಭೂಮಿ ಮಾಗಡಿ. ನನ್ನ ಉಸಿರು ಇರುವವರೆಗೆ ಕ್ಷೇತ್ರ ಬದಲಾಯಿಸುವ ಪ್ರಶ್ನೆಯೆ ಇಲ್ಲ. ಬೇರೆಯವರಂತೆ ಪಲಾಯನ ಮಾಡುವವ ನಾನಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಗಳೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದರು. ಸ್ವತಂತ್ರ ಶಾಸಕನಾಗಿ ಬಂದಿದ್ದೇನೆ. ನನ್ನ ಮುಂದಿನ ನಡೆ ಬಗ್ಗೆ ಕ್ಷೇತ್ರದ ಕಾರ್ಯಕರ್ತರಲ್ಲಿ ಗೊಂದಲವಿರುವುದು ಸಹಜ. ಚುನಾವಣೆಗೆ ಇನ್ನೂ ಎರಡು ವರ್ಷವಿದ್ದು, ಗೊಂದಲ ನಿವಾರಿಸಿ ಎಲ್ಲಾ ಕಾರ್ಯಕರ್ತರನ್ನು ಜತೆಗೆ ಕರೆದುಕೊಂಡು ಹೋಗುತ್ತೇನೆ, ಎಂದರು.
Advertisement