ಬೆಂಗಳೂರು: ರಾಜ್ಯಸಭೆ ಸೀಟಿನ ಮೇಲೆ ಕಣ್ಣಿಟ್ಟಿರುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಪದೇ ಪದೇ ದೆಹಲಿಗೆ ಹೋಗಿ ಪಕ್ಷದ ಹೈ ಕಮಾಂಡ್ ಭೇಟಿಯಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಿಜೆಪಿಯ ಎಂ. ವೆಂಕಯ್ಯನಾಯ್ಡು, ಆಯನೂರು ಮಂಜುನಾಥ್, ಕಾಂಗ್ರೆಸ್ ನ ಆಸ್ಕರ್ ಫರ್ನಾಂಡಿಸ್, ಹಾಗೂ ಸ್ವತಂತ್ರ್ಯ ಅಭ್ಯರ್ಥಿಯಾಗಿದ್ದ ವಿಜಯಮಲ್ಯ ಅವರುಗಳ ರಾಜ್ಯ ಸಭೆ ಸದಸ್ಯತ್ವ ಅವಧಿ ಜೂನ್ ನಲ್ಲಿ ಅಂತ್ಯಗೊಳ್ಳಲಿದ್ದು, ಸದಸ್ಯತ್ವಕ್ಕಾಗಿ ಈಗಾಗಲೇ ಲಾಭಿ ಆರಂಭವಾಗಿದೆ.
ಒಬ್ಬ ಸದಸ್ಯನ ಆಯ್ಕೆಗೆಗೆ ಪ್ರಥಮ ಪ್ರಾಶಸ್ತ್ಯದ 45 ಶಾಸಕರುಗಳ ಮತಗಳು ಬೇಕಾಗಿದೆ. 123 ಶಾಸಕರುಗಳನ್ನು ಹೊಂದಿರುವ ಕಾಂಗ್ರೆಸ್ ಸುಲಭವಾಗಿ ಎರಡು ಸದಸ್ಯರನ್ನು ಆರಿಸಬಹುದಾಗಿದೆ. ಇನ್ನು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಹೈ ಕಮಾಂಡ್ ಒಪ್ಪಿದರೇ ಮತ್ತೊಂದು ಸೀಟು ಕೂಡ ಕಾಂಗ್ರೆಸ್ ಗೆ ದಕ್ಕಲಿದೆ. ಸೋನಿಯಾ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಆಸ್ಕರ್ ಫರ್ನಾಂಡಿಸ್ ಅವರ ಮರು ಆಯ್ಕೆ ಬಹುತೇಕ ಖಚಿತವಾಗಿದೆ.
ಹಿರಿಯ ಕಾಂಗ್ರೆಸ್ ಮುಖಂಡ, ಎಂ. ವೀರಪ್ಪ ಮೊಯ್ಲಿ, ಕೆ, ರೆಹಮಾನ್ ಕೆ.ಎಚ್ ಮುನಿಯಪ್ಪ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಜೆಡಿಎಸ್ ಜೊತೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳದಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇನ್ನು ಮಹಿಳಾ ಅಭ್ಯರ್ಥಿಯನ್ನೊಬ್ಬರನ್ನು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ಮಾಜಿ ಸಂಸದೆ ರಮ್ಯಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್, ರಾಣಿ ಸತೀಶ್, ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಅವರ ಹೆಸರು ಕೇಳಿ ಬರುತ್ತಿವೆ.
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಇತ್ತೀಚೆಗೆ ಜೆಡಿಎಸ್ ನಾಯಕರುಗಳಾದ ಎಚ್ ಡಿ ದೇವೇಗೌಡ ಮತ್ತು ಎಚ್ ಡಿ ಕುಮಾರಸ್ವಾಮಿ ಅವರ ಜೊತೆ ಸಮಾರಂಭವೊಂದರಲ್ಲಿ ವೇದಿಕೆ ಹಂಚಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
Advertisement