ಯೋಜನೆಗಳಿಗೆ ರಾಜ್ಯದ ಹಣ, ಭೂಮಿ: ಕ್ರೆಡಿಟ್ ಮಾತ್ರ ಬಿಜೆಪಿಗೆ: ಸಿದ್ದರಾಮಯ್ಯ ಅಸಮಾಧಾನ

ಸ್ವಚ್ಚತೆಗಾಗಿ ರಾಜ್ಯ ಸರ್ಕಾರ ಹೆಚ್ಚಿನ ಹಣ ಖರ್ಚು ಮಾಡುತ್ತಿದ್ದು, ಆದರೆ ಎಲ್ಲಾ ಕ್ರೆಡಿಟ್ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ...
ನಗರೋತ್ಥಾನ 3 ನೇ ಹಂತದ ಯೋಜನೆಗೆ ಸಿಎಂ ಚಾಲನೆ
ನಗರೋತ್ಥಾನ 3 ನೇ ಹಂತದ ಯೋಜನೆಗೆ ಸಿಎಂ ಚಾಲನೆ
ಬೆಂಗಳೂರು: ಸ್ವಚ್ಚತೆಗಾಗಿ ರಾಜ್ಯ ಸರ್ಕಾರ ಹೆಚ್ಚಿನ ಹಣ ಖರ್ಚು ಮಾಡುತ್ತಿದ್ದು, ಆದರೆ ಎಲ್ಲಾ ಕ್ರೆಡಿಟ್ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪೌರಾಡಳಿತ ನಿರ್ದೇಶನಾಲಯದ ನಗರೋತ್ಥಾನ 3 ನೇ ಹಂತದ ಯೋಜನೆಗೆ ವಿಧಾನಸೌಧದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ನಮ್ಮದು ಎಂದು ಬಿಜೆಪಿಯವರು ಭಾಷಣ ಹೊಡೆಯುತ್ತಿದ್ದಾರೆ. ನಾವು ದುಡ್ಡು, ಜಾಗ ಕೊಟ್ಟ ಮೇಲೆ ನಮ್ಮ ಹೆಸರೂ ಇರಬೇಕೋ ಬೇಡವೋ’ ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಪ್ರಶ್ನಿಸಿದರು.
ಸ್ಮಾರ್ಟ್ ಸಿಟಿ, ಅಮೃತ್‌ ಯೋಜನೆಗಳಿಗೆ ಜಾಗ, ದುಡ್ಡು ಎರಡನ್ನೂ ಕೊಟ್ಟು ಅನುಷ್ಠಾನ ಮಾಡುವವರು ನಾವು. ಆದರೆ, ಅದು ನಮ್ಮದು ಎಂದು ಹೇಳಿಕೊಳ್ಳುವವರು ಬಿಜೆಪಿಯವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಬಿಜೆಪಿಯವರು ಈಗ ಸ್ವಚ್ಛ ಭಾರತ್‌ ಎಂದು ಹೇಳುತ್ತಿದ್ದಾರೆ. ನಿರ್ಮಲ ಭಾರತ್‌ ಹೆಸರಿನಲ್ಲಿ ಆ ಕಾರ್ಯಕ್ರಮ ಮೊದಲಿನಿಂದಲೂ ಇತ್ತು ಎಂದು ಹೇಳಿದ ಸಿದ್ದರಾಮಯ್ಯ, ‘ನಿರ್ಮಲ ಎಂಬುದು ಕನ್ನಡ ಪದ ಇರಬೇಕು, ಮೋದಿ ಈ ಯೋಜನೆಗೆ ಹಿಂದಿ ಪದ ಬಳಸಿರುವುದಕ್ಕೆ ಅವರು ಆಕ್ಷೇಪ ವ್ಯಕ್ತ ಪಡಿಸಿದರು. 
ರಾಜ್ಯದ ನಗರ ಪ್ರದೇಶಗಳಲ್ಲಿ ಇನ್ನೂ ನಾಲ್ಕು ಲಕ್ಷ ಶೌಚಾಲಯಗಳನ್ನು ನಿರ್ಮಿಸಬೇಕಾಗಿದೆ. 2017–18ರಲ್ಲಿ ಎರಡು ಲಕ್ಷ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ. ಎಲ್ಲ ನಗರಗಳನ್ನು ಬಯಲು ಬಹಿರ್ದೆಸೆ ಮುಕ್ತ ನಗರವನ್ನಾಗಿ ಮಾಡಲು ಸ್ಥಳೀಯ ಸಂಸ್ಥೆಗಳು ಕಾರ್ಯಕ್ರಮ ರೂಪಿಸಬೇಕು. 2019ರ ಅಕ್ಟೋಬರ್‌ ಒಳಗೆ ಈ ಸಾಧನೆ ಮಾಡಬೇಕು ಎಂದು ಹೇಳಿದರು.
ನಾವೆಲ್ಲ ಚಿಕ್ಕವರಿದ್ದಾಗ ಬೆಳಿಗ್ಗೆ ಎದ್ದ ಕೂಡಲೇ ನದಿ, ಹಳ್ಳ, ಕಾಲುವೆ ಹುಡುಕಿಕೊಂಡು ಹೋಗುತ್ತಿದ್ದೆವು. ಕೆಲವು ಕಡೆಗಳಲ್ಲಿ ಕುಡಿಯುವುದಕ್ಕೂ ತೊಳೆಯುವುದಕ್ಕೂ ಒಂದೇ ಹಳ್ಳದ ನೀರನ್ನು ಬಳಸುತ್ತಿದ್ದರು. ಆಗೆಲ್ಲ ಜನರ ದೇಹಗಳಲ್ಲಿ ಪ್ರತಿರೋಧ ಶಕ್ತಿ ಇತ್ತು. ಹಾಗಾಗಿ ಆರೋಗ್ಯ ಸಮಸ್ಯೆ ಕಾಡುತ್ತಿರಲಿಲ್ಲ. ಪರಿಸರ ಚೆನ್ನಾಗಿದ್ದರೆ ಸಾಂಕ್ರಾಮಿಕ ರೋಗಗಳು ಬರುವುದಿಲ್ಲ. ಈ ಕಾರಣಕ್ಕಾಗಿ ಬಯಲು ಬಹಿರ್ದೆಸೆ ಮುಕ್ತವಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಈಗಲು ಬಯಲು ಶೌಚ ಪದ್ಧತಿ ಜಾರಿಯಲ್ಲಿದೆ. ಮಹಿಳೆಯರು ಬಯಲಿಗೆ ತೆರಳುತ್ತಾರೆ. ಇದರಿಂದ ಅವರ ಹಾಗೂ ಪರಿಸರಕ್ಕೆ ಹಾನಿಕರ. ಈ ಪದ್ಧತಿಯನ್ನು ಮೊದಲು ನಿರ್ಮೂಲನ ಮಾಡಬೇಕು ಎಂದು ಸಿಎಂ ಕರೆ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com