ನವದೆಹಲಿ: ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಜವಾಬ್ದಾರಿಯಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರಿಗೆ ಮಂಗಳವಾರ ಕೊಕ್ ನೀಡಲಾಗಿದ್ದು, ಅವರ ಸ್ಥಾನಕ್ಕೆ ಆರ್ ಸಿ ಕುಂಟಿಯಾ ಅವರನ್ನು ನೇಮಕ ಮಾಡಲಾಗಿದೆ.
ಎಐಸಿಸಿ ಹೊಸ ತಂಡಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಒಪ್ಪಿಗೆ ನೀಡಿದ್ದು, ದಿಗ್ವಿಜಯ್ ಸಿಂಗ್ ಅವರನ್ನು ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕುಂಟಿಯಾ ಅವರಿಗೆ ಪಕ್ಷದ ಕಾರ್ಯದರ್ಶಿಯಾಗಿರುವ ಸತೀಸ್ ಜಾರಕಿಹೋಳಿ ಅವರು ತೆಲಂಗಾಣದಲ್ಲಿ ಸಹಕಾರ ನೀಡಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ,
ದಿಗ್ವಿಜಯ್ ಸಿಂಗ್ ಅವರನ್ನು ಕಳೆದ ಏಪ್ರಿಲ್ ನಲ್ಲಿ ಕರ್ನಾಟಕ ಉಸ್ತುವಾರಿಯಿಂದ ತೆಗೆದು ಹಾಕಲಾಗಿತ್ತು. ಅಲ್ಲದೆ ಗೋವಾದಲ್ಲಿ ಸರ್ಕಾರ ರಚಿಸಲು ವಿಫಲವಾದ ಹಿನ್ನೆಲೆಯಲ್ಲಿ ಗೋವಾ ಉಸ್ತುವಾರಿಯನ್ನು ಕಳೆದುಕೊಂಡಿದ್ದರು.