ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷರಾಗಿ ಮರು ನೇಮಕಗೊಂಡ ಹಿನ್ನೆಲೆಯಲ್ಲಿ ಗೃಹ ಸಚಿವ ಸ್ಥಾನಕ್ಕೆ ಡಾ. ಜಿ. ಪರಮೇಶ್ವರ ಅವರು ನೀಡಿದ್ದ ರಾಜಿನಾಮೆಯನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ಶನಿವಾರ ಅಂಗೀಕರಿಸಿದ್ದಾರೆ.
ಕಳೆದ ಜೂನ್ 1ರಂದು ಪರಮೇಶ್ವರ ಅವರು ಗೃಹ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆದರೆ ವಿಧಾನ ಮಂಡಲದ ಅಧಿವೇಶನವಿದ್ದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಮೇಶ್ವರ ರಾಜಿನಾಮೆಯನ್ನು ರಾಜ್ಯಪಾಲರಿಗೆ ರವಾನಿಸದೆ ಅಧಿವೇಶನ ಮುಗಿಯುವವರೆಗೂ ಗೃಹ ಸಚಿವರಾಗಿ ಮುಂದುವರಿಯುವಂತೆ ಸೂಚಿಸಿದ್ದರು.
ಇದೀಗ ಅಧಿವೇಶನ ಮುಗಿದ ನಂತ ತಮ್ಮ ಬಳಿ ಇಟ್ಟುಕೊಂಡಿದ್ದ ಪರಮೇಶ್ವರ ರಾಜಿನಾಮೆ ಪತ್ರವನ್ನು ಸಿಎಂ ನಿನ್ನೆ ರಾಜ್ಯಪಾಲರಿಗೆ ರವಾನಿಸಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರು ಇಂದು ಅದನ್ನು ಅಂಗೀಕರಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎನ್ನುವ ನಿಯಮವಿದ್ದು, ಅದರಂತೆ ಕೆಪಿಸಿಸಿ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ನೇಮಕಗೊಂಡಿರುವ ಡಾ. ಜಿ. ಪರಮೇಶ್ವರ್ ಅವರು, ಪಕ್ಷದ ನಿಯಮದಂತೆ ಗೃಹ ಸಚಿವ ಹುದ್ದೆಗೆ ರಾಜಿನಾಮೆ ನೀಡಿದ್ದರು.