ಬಳ್ಳಾರಿ: ಮೈಸೂರಿನ ಕಲಾಮಂದಿರದಲ್ಲಿ ಬಹಿರಂಗವಾಗಿ ಗೋ ಮಾಂಸ ಸೇವಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗೋಮಾಂಸ ತಿನ್ನುವವರು ಮನೆಯಲ್ಲಿ ತಿಂದು ಸಾಯಲಿ ಎಂದು ಮಂಗಳವಾರ ಹೇಳಿದ್ದಾರೆ.
ಇಂದು ಗೋ ಮಾಂಸ ಸೇವನೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಗೋ ಮಾಂಸವನ್ನು ಮನೆಯಲ್ಲಿ ಬೇಕಾದರೆ ತಿಂದು ಸಾಯಲಿ. ಆದರೆ ಸಾರ್ವಜನಿಕವಾಗಿ ಗೋ ಮಾಂಸ ತಿಂದಿರುವುದು ಅಕ್ಷಮ್ಯ ಅಪರಾಧ, ಇದನ್ನು ಯಾರೊಬ್ಬರು ಕ್ಷಮಿಸಲ್ಲ ಎಂದರು.
ಕಲಾ ಮಂದಿರದಲ್ಲಿ ಗೋ ಮಾಂಸ ತಿಂದವರನ್ನು ಬಹಿಷ್ಕರಿಸಬೇಕು. ಇದು ಸಾರ್ವಜನಿಕರಿಗೆ ಮಾಡಿದ ಅಪಮಾನ. ಗೋ ಮಾಂಸ ಸೇವಿಸಿದವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಿನ್ನೆ ಮೈಸೂರಿನ ಕಲಾಮಂದಿರದಲ್ಲಿ ಚಾರ್ವಾಕ ಸೋಶಿಯಲ್ ಅಂಡ್ ಕಲ್ಚರಲ್ ಟ್ರಸ್ಟ್ ಎವಿಎಸ್ ಎಸ್ ಸಂಸ್ಥೆ ಆಯೋಜಿಸಿದ್ದ ಆಹಾರದ ಹಕ್ಕು ವ್ಯಕ್ತಿ ಸ್ವಾತಂತ್ರ್ಯ ವಿಷಯದ ಸಂವಾದದ ಕಾರ್ಯಕ್ರಮದಲ್ಲಿ ಪ್ರೊ.ಮಹೇಶ್ ಚಂದ್ರ ಗುರು ಸೇರಿದಂತೆ ಹಲವರು ಗೋಮಾಂಸ ಸೇವಿಸಿದ್ದರು. ಇದನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದ್ದು, ಬಹಿರಂಗವಾಗಿ ಗೋ ಮಾಂಸ ಸೇವಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಈ ಕೂಡಲೇ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಇಂದು ಬಿಜೆಪಿ ಕಾರ್ಯಕರ್ತರು ಮೈಸೂರಿನ ಎಸ್ ಟಿಎಫ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.