ಬೆಂಗಳೂರು: ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಸಂಸ್ಥಾಪಕ ಉಪೇಂದ್ರ ಇಂದು ತಮ್ಮ ಪಕ್ಷದ ನೂತನ ವೆಬ್ ಸೈಟ್ ಗೆ ಚಾಲನೆ ನೀಡಿದರು.
ಕೆಪಿಜೆಪಿ ಪಕ್ಷ ಹಾಗೂ ಉಪೇಂದ್ರ ಅವರ ರಾಜಕೀಯ ಕಾರ್ಯಕ್ರಮಗಳ ಮಾಹಿತಿಯನ್ನು ಈ ವೆಬ್ ಸೈಟ್ ನಲ್ಲಿ ಪಡೆಯಬಹುದಾಗಿದ್ದು https://www.kpjpuppi.org ಎನ್ನುವ ವಿಳಾಸವನ್ನು ಹೊಂದಿದೆ. ಪಕ್ಷದ ಗುರಿ, ಕಾರ್ಯಚಟುವಟಿಕೆಗಳು ಹೇಗಿದೆ? ಜನರನ್ನು ತಲುಪುವ ಬಗೆ ಹೇಗೆ ಎನ್ನುವ ನಾನಾ ವಿವರಗಳು ಇಲ್ಲಿ ಲಭ್ಯ.
"ಯಾರಾದರೂ ಪಕ್ಷದ ಅಭ್ಯರ್ಥಿಯಾಗಬಯಸಿದರೆ ಅಂತಹವರು ತಮ್ಮ ವಿವರಗಳನ್ನು ವೆಬ್ ಸೈಟ್ ನಲ್ಲಿ ಅಪ್ ಮಾಡಬೇಕಾಗುತ್ತದೆ. ವಿಧಾನಸಭಾ ಕ್ಷೇತ್ರಕ್ಕೆ ಏನೇನು ಬೇಕೆಂಬ ಬಗ್ಗೆ ಮಾಹಿತಿಯನ್ನು ಜನರಿಗೆ ಈ ವೆಬ್ ಸೈಟ್ ನಲ್ಲಿ ತಿಳಿಸಲಾಗುತ್ತದೆ" ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪೇಂದ್ರ ವಿವರಿಸಿದ್ದಾರೆ.
ಪ್ರಜಾಕೀಯ ಟ್ಯಾಗ್ ಲೈನ್ ಅಡಿಯಲ್ಲಿ ರ್ನಾಟಕ ಧ್ವಜದ ಮಾದರಿಯ ಮೊಬೈಲ್ ಆಪ್ ಒಂದನ್ನು ಸಹ ಉಪೇಂದ್ರ ಇದೇ ವೇಳೆ ಬಿಡುಗಡೆ ಮಾಡಿದ್ದಾರೆ.
ಪಕ್ಷಕ್ಕೆ ಸೇರಬಯಸುವವರಿಗೆ ಯಾವುದೇ ವಿದ್ಯಾರ್ಹತೆಯ ಅಗತ್ಯವಿಲ್ಲ. ಗ್ರಾಮ ಪಂಚಾಯತ್, ನಗರ ಸಭೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಶಾಸಕ ಅಭ್ಯರ್ಥಿಗಳು ಸಹ ನಮ್ಮ ವೆಬ್ ಸೈಟ್ ಗೆ ವಿವರಗಳನ್ನು ಕಳಿಸಬಹುದು
ಉಪೇಂದ್ರ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆವ್ ಎಂದು ಕೇಳಲಾದ ಪ್ರಶ್ನೆಗೆ "ಎಲ್ಲ ಅಭ್ಯರ್ಥಿಗಳು ಆದ ಮೇಲೆ ನಾನು ನಿಲ್ಲುವ ಬಗ್ಗೆ ತಿಳಿಸುತ್ತೇನೆ." ಎಂದು ಉತ್ತರಿಸಿದ ಉಪೇಂದ್ರ ಎಲ್ಲ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದರು
ಮೈಕೋ ನವೀನ್ ಮತ್ತು ಸ್ನೇಹಿತರು ಸೇರಿ ಈ ವೆಬ್ ಸೈಟ್ ವಿನ್ಯಾಸಗೊಳಿಸಿದ್ದಾರೆ. ನಿರ್ಮಾಪಕ ಸೌಂದರ್ಯ ಜಗದೀಶ್ ಸೇರಿದಂತೆ ಪಕ್ಷದ ಹಲವು ಕಾರ್ಯಕರ್ತರು ಈ ವೇಳೆ ಹಾಜರಿದ್ದರು.